ಸೊರಬ: ‘ಮಠಗಳಿಗೂ ಸಮಾಜಕ್ಕೂ ಅವಿನಾಭಾವ ಸಬಂಧವಿದ್ದು, ಸದೃಢ ಸಮಾಜ ನಿರ್ಮಾಣಕ್ಕೆ ಮಠಗಳ ಪಾತ್ರ ಪ್ರಮುಖವಾಗಿದೆ’ ಎಂದು ಜಡೆ ಮಹಾ ಸಂಸ್ಥಾನ ಮಠದ ಮಹಾಂತ ಸ್ವಾಮೀಜಿ ಹೇಳಿದರು.
ಸೊರಬ ಪಟ್ಟಣದ ಮುರುಘಾ ಮಠದ ಚೌಡೇಶ್ವರಿ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ 236ನೇ ಶ್ರಾವಣ ಹುಣ್ಣಿಮೆಯ ಶಿವಾನುಭವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
‘ಸಮಾಜದಲ್ಲಿ ಮಠ ಮಾನ್ಯಗಳು ಯಾವುದೇ ಧರ್ಮ, ಜಾತಿ ಹಾಗೂ ಪಂಥಕ್ಕೆ ಸೀಮಿತವಾಗಿರಬಾರದು. ಅಂತಹ ಪರಂಪರೆ ಹುಟ್ಟುಹಾಕಿದರೆ ಮಾತ್ರ ಮಠಗಳು ಪರಿಪೂರ್ಣ ಧಾರ್ಮಿಕ ಕ್ಷೇತ್ರವಾಗಲು ಸಾಧ್ಯ. ಅಲ್ಲದೇ ಪರಿಪೂರ್ಣ ಸಂತರಾಗುತ್ತಾರೆ. ಬಾಂಧವ್ಯ, ಪ್ರೀತಿ ಹಾಗೂ ಸಹೋದರತ್ವ ಬೆಳೆಸಲು ಇಂತಹ ಹುಣ್ಣಿಮೆ ಕಾರ್ಯಕ್ರಮಗಳು ಸಹಕಾರಿಯಾಗಿದ್ದು, ಸೇವೆ ಹಾಗೂ ಪರೋಪಕಾರ ಮಾಡಿದರೆ ಸುರಕ್ಷಿತ ಬದುಕು ಸಾಗಿಸಲು ಸಾಧ್ಯ’ ಎಂದರು.
'ತಾಲ್ಲೂಕಿನ ಮಠಗಳಿಗೆ ಧಾರ್ಮಿಕ ಹಾಗೂ ರಾಜಕೀಯ ಮುಖಂಡರ ಸೇವೆ ಅಪಾರವಾಗಿದ್ದು, ಯಾವುದೇ ಅಪೇಕ್ಷೆ ಬಯಸದೆ ತಮ್ಮದೇ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯ. ಮನುಷ್ಯ ದೇಹ ಭಾರವಾದರೆ ಯೋಗ ಮಾಡಿ. ಮನಸ್ಸು ಭಾರವಾದರೆ ಧ್ಯಾನ ಮಾಡಿ ಹಾಗೂ ಸಂಪತ್ತು ಭಾರವಾದರೆ ಧಾನ ಮಾಡಬೇಕು’ ಎಂದರು.
ಜಿ.ಪಂ. ಮಾಜಿ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ, ತಾಲ್ಲೂಕು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಹೊಳಿಯಮ್ಮ, ಸಮಾಜ ಸೇವಕ ಶಂಕರ್ ಶೇಟ್, ಶಿಮೂಲ್ ನಿರ್ದೇಶಕ ದಯಾನಂದ ಗೌಡ, ಹಿರಿಯ ವಕೀಲ ಎಂ.ಆರ್. ಪಾಟೀಲ್, ಮಲ್ಲಿಕಾರ್ಜುನ್ ದ್ವಾರಳ್ಳಿ, ಸುಧಾ, ಈಶ್ವರಿ ವಿದ್ಯಾಲಯ ಬ್ರಹ್ಮಕುಮಾರಿ ಸಮಾಜದ ಚೇತನಕ್ಕ, ವಿಜಯೇಂದ್ರ ಗೌಡ, ಮಲ್ಲಿಕಾರ್ಜುನ ಗೌಡ, ಶಿವಯೋಗಿ, ಪೂರ್ಣಿಮಾ ಶಿವಯೋಗಿ ಅಕ್ಕನ ಬಳಗದ ಜಯಮಾಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.