ಶಿವಮೊಗ್ಗ: ‘ಪೌರತ್ವ (ತಿದ್ದುಪಡಿ) ಕಾಯ್ದೆ ವಿಚಾರವಾಗಿ ಮಾತನಾಡಿದ್ದಕ್ಕೆ ನನಗೆ ಜೀವ ಬೆದರಿಕೆ ಕರೆ ಬಂದಿತ್ತು. ಆದರೆ, ನಾನು ಇಂತಹ ಹೇಡಿತನದ ಬೆದರಿಕೆ ಕರೆಗಳಿಗೆ ಬಗ್ಗೋದಿಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎರಡು ದಿನದ ಹಿಂದೆ ಹಾಗೂ ಶನಿವಾರ ರಾತ್ರಿ ಅನಾಮಿಕ ಕರೆ ಬಂದಿರುವುದು ನಿಜ. ‘ಸಿಎಎ ಬಗ್ಗೆ ನೀವು ಸಿಕ್ಕಾಪಟ್ಟೆ ಮಾತನಾಡುತ್ತಿದ್ದೀರಿ. 48 ಗಂಟೆಯೊಳಗಾಗಿ ನೀವು ಮಾತನಾಡುವುದನ್ನು ನಿಲ್ಲಿಸದಿದ್ದಲ್ಲಿ ಪರಿಣಾಮ ನೆಟ್ಟಗಿರುವುದಿಲ್ಲ’ ಎಂದು ಬೆದರಿಕೆ ಬಂದಿದೆ ಎಂದು ತಿಳಿಸಿದರು.
‘ಕೇವಲ ಬೆದರಿಕೆ ಕರೆಗಳು ಮಾತ್ರವಲ್ಲ, ನಾವು ಮಾಡುತ್ತಿರುವ ಕೆಲಸಗಳನ್ನು ಮೆಚ್ಚಿ ಮುಸ್ಲಿಂ ಹೆಣ್ಣು ಮಕ್ಕಳು ಕೂಡ ಕರೆ ಮಾಡಿ ನಮಗೆ ಹರಸುತ್ತಿದ್ದಾರೆ’ ಎಂದರು.
‘ತ್ರಿವಳಿ ತಲಾಖ್ ಕಾಯ್ದೆ ಜಾರಿ ಸಂದರ್ಭದಲ್ಲೂ ನನಗೆ ಒಂದು ಬೆದರಿಕೆ ಕರೆ ಬಂದಿತ್ತು. ಆಗ ಕರೆ ಮಾಡಿದವನಿಗೆ ನಾನು ವಾಪಸ್ ಉತ್ತರ ಕೊಡುವ ಮೊದಲೇ ಮೊಬೈಲ್ ಆಫ್ ಆಗಿತ್ತು. ಇದೀಗ ಸಿಎಎ ವಿಚಾರವಾಗಿ ಮಾತನಾಡಿದ್ದಕ್ಕೆ ಮತ್ತೆ ಜೀವ ಬೆದರಿಕೆ ಕರೆ ಬಂದಿದೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.