ADVERTISEMENT

ನರೇಗಾ; ಗ್ರಾಮೀಣರ ಬದುಕು ಸರಾಗ...

ಶಿವಮೊಗ್ಗ ಜಿಲ್ಲೆ: ಮಹಿಳಾ ಫಲಾನುಭವಿಗಳೇ ಅತಿಹೆಚ್ಚು

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 5:43 IST
Last Updated 15 ಆಗಸ್ಟ್ 2025, 5:43 IST
ಸಾಗರ ತಾಲ್ಲೂಕು ಕೆಳದಿ ಹಿರೆಕೆರೆಯ ಹೂಳೆತ್ತುವ ಕಾಮಗಾರಿಯ ನೋಟ 
ಸಾಗರ ತಾಲ್ಲೂಕು ಕೆಳದಿ ಹಿರೆಕೆರೆಯ ಹೂಳೆತ್ತುವ ಕಾಮಗಾರಿಯ ನೋಟ    

ಶಿವಮೊಗ್ಗ: ಜಿಲ್ಲೆಯ ಗ್ರಾಮೀಣ ಭಾಗದ ಮಹಿಳೆಯರಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹೆಚ್ಚಿನ ಚೈತನ್ಯ ತುಂಬಿದೆ. ಅವರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಟ್ಟಿದೆ. ವಿಶೇಷವೆಂದರೆ ಯೋಜನೆಯಡಿ ಪುರುಷರಿಗಿಂತ ಹೆಚ್ಚು ಮಹಿಳೆಯರೇ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಏಳು ತಾಲ್ಲೂಕುಗಳಲ್ಲಿ ಒಟ್ಟು 262 ಗ್ರಾಮಗಳು ಇದ್ದು, 2.42 ಲಕ್ಷ ಜನರು ಎನ್‌ಆರ್‌ಇಜಿಎ ಅಡಿ ಉದ್ಯೋಗ ಕಾರ್ಡ್ ಹೊಂದಿದ್ದಾರೆ. ಅದರಲ್ಲಿ 1.47 ಲಕ್ಷ ಜನರ ಜಾಬ್ ಕಾರ್ಡ್ ಚಾಲ್ತಿಯಲ್ಲಿವೆ. ಇದರಲ್ಲಿ ಪರಿಶಿಷ್ಟ ಜಾತಿಯವರು ಶೇ 2.82 ಹಾಗೂ ಪರಿಶಿಷ್ಟ ಪಂಗಡದವರು ಶೇ 5ರಷ್ಟು ಇದ್ದಾರೆ. ಮಹಿಳೆಯರ ಪ್ರಮಾಣ ಶೇ 54.95ರಷ್ಟು.

ನರೇಗಾ ಫಲಾನುಭವಿ, ಮಹಿಳೆಯರೇ ಮೇಲುಗೈ:

ADVERTISEMENT

ಜಿಲ್ಲೆಯಲ್ಲಿ ನರೇಗಾ ಅಡಿ ಕೆಲಸದ ಲಾಭವನ್ನು ಮಹಿಳೆಯರೇ ಹೆಚ್ಚಾಗಿ ಪಡೆಯುತ್ತಿದ್ದಾರೆ. 2019ರಲ್ಲಿ ಇದ್ದ ನರೇಗಾ ಫಲಾನುಭವಿಗಳ ಸಂಖ್ಯೆಯಲ್ಲಿ ಶೇ 50.86ರಷ್ಟು ಮಹಿಳೆಯರು ಇದ್ದರೆ, 2020ರಲ್ಲಿ ಆ ಪ್ರಮಾಣ ಶೇ 49.65, 2021ರಲ್ಲಿ ಶೇ 49.39, 2022ರಲ್ಲಿ ಶೇ 51.29, 2023ರಲ್ಲಿ ಶೇ 53.84, 2024ರಲ್ಲಿ ಶೇ 54ರಷ್ಟು. ಇದು ಯೋಜನೆಯಲ್ಲಿ ಮಹಿಳೆಯರ ಭಾಗಿತ್ವದಲ್ಲಿ ಆಗಿರುವ ಏರಿಳಿತದ ಪ್ರಮಾಣವನ್ನು ಬಿಂಬಿಸುತ್ತದೆ.

ಜಿಲ್ಲೆಯಲ್ಲಿ ನರೇಗಾ ಯೋಜನೆ ಯಶಸ್ವಿಯಾಗಿ ಸಾಗುತ್ತಿದೆ. ಪ್ರತಿ ವರ್ಷವೂ ಈ ಯೋಜನೆಗೆ ಬೇಕಾದ ಅನುದಾನವನ್ನು ಸರಿಯಾದ ಕ್ರಮದಲ್ಲಿ ಎಲ್ಲೂ ವ್ಯರ್ಥವಾಗದಂತೆ ಜಿಲ್ಲಾ ಪಂಚಾಯತ್ ನಿಗಾ ವಹಿಸಿ ಬಳಸುತ್ತಿದೆ. ಅದರಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಎಷ್ಟು ಅನುದಾನ ಬೇಕೋ ಅಷ್ಟು ಮಾತ್ರ ಪಡೆಯುತ್ತಿದ್ದು, ಇದು ವ್ಯರ್ಥವಾಗದಂತೆ ಕಾಪಾಡಿಕೊಂಡು ಬರುತ್ತಿದೆ. 

ಕೆರೆ ಹೂಳೆತ್ತಲು ‘ನರೇಗಾ’ ಆಸರೆ:

ಸಾಗರ ತಾಲ್ಲೂಕಿನ ಕೆಳದಿಯಲ್ಲಿ ಶಿವಪ್ಪನಾಯಕರ ಕಾಲದಲ್ಲಿ ನಿರ್ಮಿಸಿರುವ 150 ಎಕರೆ ವಿಸ್ತೀರ್ಣದ ಹಿರೆಕೆರೆಯ ಹೂಳೆತ್ತುವ ಕಾಮಗಾರಿ ನರೇಗಾ ಯೋಜನೆಯಡಿ ಕೈಗೊಂಡಿದ್ದು, ಮಳೆಗಾಲದಲ್ಲಿ ಕೆರೆ ತುಂಬಿ ಸುತ್ತಲಿನ 200 ಎಕರೆಗೂ ಹೆಚ್ಚಿನ ಜಮೀನುಗಳಲ್ಲಿ ಭತ್ತ ಹಾಗೂ ಅಡಿಕೆ ಬೆಳೆಗೆ ಬೇಸಿಗೆಯಲ್ಲಿ ನೀರಿನ ಆಸರೆ ಒದಗಿಸಿದೆ. ಕೊಳವೆ ಬಾವಿಗಳಲ್ಲೂ ಸಮೃದ್ಧ ನೀರು ಬರುತ್ತಿದೆ.

ಕೆಳದಿಯಲ್ಲಿ ಕೆರೆ ಹೂಳೆತ್ತುವ ಜೊತೆಗೆ ₹3 ಲಕ್ಷ ಮೊತ್ತದಲ್ಲಿ ಕಾಲುವೆ ಹೂಳೆತ್ತುವ ಕಾಮಗಾರಿ ಕೈಗೊಂಡಿದ್ದು, 250 ಮಾನವ ದಿನಗಳನ್ನು ಸೃಜಿಸಿ, ಒಟ್ಟು ₹2.75 ಲಕ್ಷ ವೆಚ್ಚ ಮಾಡಲಾಗಿದೆ. 

ಹೂಳೆತ್ತುವ ಮೊದಲು ಹಿರೆಕೆರೆ ತುಂಬಿ ಕೋಡಿ ಬಿದ್ದ ನೀರು, ಅಕ್ಕಪಕ್ಕದ ಜಮೀನುಗಳಿಂದ ಹರಿದುಬರುವ ನೀರು ಕಾಲುವೆ ಮೂಲಕ ಹರಿದು ಮುಂದೆ ನದಿ ಸೇರುತ್ತದೆ. ಕಾಲುವೆಯಲ್ಲಿ ಹೂಳು ತುಂಬಿದ್ದರಿಂದ ಮಳೆಗಾಲದಲ್ಲಿ ಬರುವ ನೀರು ಸುತ್ತಲೂ ಇರುವ ಜಮೀನು ಮತ್ತು ತೋಟಗಳಿಗೆ ನುಗ್ಗಿ ಸಾಕಷ್ಟು ಹಾನಿಯುಂಟು ಮಾಡಿದ್ದು, ಇದರಿಂದ ಅಲ್ಲಿನ ರೈತರು ಕಂಗೆಟ್ಟಿದ್ದರು. 

ನರೇಗಾ ಯೋಜನೆಯಡಿ ಕಾಲುವೆ ಹೂಳೆತ್ತುವ ಕಾರ್ಯ ಕೈಗೊಂಡ ನಂತರ ಜಮೀನುಗಳಿಗೆ ಬೇಸಿಗೆಯಲ್ಲಿ ನೀರು ಸರಾಗವಾಗಿ ಹರಿದು ಹೋಗಲು, ಮಳೆಗಾಲದಲ್ಲಿ ಅತಿಯಾದ ಮಳೆಯಿಂದ ಕಾಲುವೆ ತುಂಬಿ ತೋಟ, ಗದ್ದೆಗಳಿಗೆ ನೀರು ನುಗ್ಗಿ ಗಿಡಗಳಿಗೆ ಹಾಕಿರುವ ಗೊಬ್ಬರ ಮತ್ತು ಮಣ್ಣು ಕೊಚ್ಚಿಕೊಂಡು ಹೋಗುವ ಸಮಸ್ಯೆ ತಪ್ಪಿದೆ. 

ಪ್ರತಿ ವರ್ಷ ಮಳೆಗಾಲದಲ್ಲಿ ಕೆರೆ ಕೋಡಿ ಬಿದ್ದು ಬೆಳೆಗೆ ಯಾವ ರೀತಿ ಹಾನಿಯಾಗುತ್ತದೆ. ಏನು ನಷ್ಟ ಆಗುತ್ತದೆ ಎಂಬ ಭಯದಲ್ಲಿ ಕಾಲ ಕಳೆಯುತ್ತಿದ್ದೆವು. ಈ ವರ್ಷ ಕೆರೆ ಜೊತೆ ಕಾಲುವೆಯ ಹೂಳೆತ್ತಲಾಗಿದೆ. ಚಿಂತೆ ಇಲ್ಲದಂತಾಗಿದೆ ಎಂದು ಕೆಳದಿಯ ರೈತ ನಾರಾಯಣಪ್ಪ ಸಂತಸ ವ್ಯಕ್ತಪಡಿಸುತ್ತಾರೆ.

ನರೇಗಾ ಅಡಿ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಮಹಿಳೆಯರ ಸಹಭಾಗಿತ್ವ

ದಿನವೊಂದಕ್ಕೆ ₹370 ಕೂಲಿ; ಸಿಇಒ

‘ನರೇಗಾ ಅಡಿ ಜಿಲ್ಲೆಯಲ್ಲಿ ಕೆರೆ ಹೂಳೆತ್ತುವ ಕಾಲುವೆ ನಿರ್ಮಾಣ ಸೇರಿದಂತೆ ಗ್ರಾಮೀಣ ಭಾಗದ ಜನ ಜೀವನ ಸುಗಮಗೊಳಿಸುವ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರವಾಹ ಬರದಂತಹ ಪ್ರಾಕೃತಿಕ ವಿಕೋಪ ಸಂಭವಿಸಿದ ಪ್ರದೇಶಗಳಲ್ಲಿ 150 ದಿನ ಕೆಲಸ ಕೊಡಲಾಗುತ್ತಿದೆ. ಪ್ರಸ್ತುತ ಪ್ರತಿ ಕಾರ್ಮಿಕರಿಗೆ ದಿನವೊಂದಕ್ಕೆ ₹370 ಕೂಲಿ ಪಾವತಿ ಮಾಡಲಾಗುತ್ತಿದೆ’ ಎಂದು ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಿಇಒ ಎನ್.ಹೇಮಂತ್ ಹೇಳುತ್ತಾರೆ.

ನರೇಗಾ ಅನುಷ್ಠಾನ; ಭದ್ರಾವತಿ ಮೊದಲ ಸ್ಥಾನ..

ನರೇಗಾ ಅನುಷ್ಠಾನದಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ ಭದ್ರಾವತಿ ತಾಲ್ಲೂಕು ಮೊದಲ ಸ್ಥಾನದಲ್ಲಿದ್ದರೆ ತೀರ್ಥಹಳ್ಳಿ ಕೊನೆಯ ಸ್ಥಾನದಲ್ಲಿದೆ. ಭದ್ರಾವತಿಯಲ್ಲಿ ಶೇ 85.38ರಷ್ಟು ಭೌತಿಕ ಹಾಗೂ ಶೇ 64.86ರಷ್ಟು ಆರ್ಥಿಕ ಗುರಿ ಸಾಧಿಸಲಾಗಿದೆ. ಹೊಸನಗರ ಶೇ 59ರಷ್ಟು ಭೌತಿಕ ಶೇ 50.89ರಷ್ಟು ಆರ್ಥಿಕ ಸಾಗರ ಶೇ 86.84ರಷ್ಟು ಭೌತಿಕ ಹಾಗೂ ಶೇ 71.27 ಆರ್ಥಿಕ ಶಿಕಾರಿಪುರ ಶೇ 73.69ರಷ್ಟು ಭೌತಿಕ ಶೇ 59.52ರಷ್ಟು ಆರ್ಥಿಕ ಶಿವಮೊಗ್ಗ ಶೇ 91.45ರಷ್ಟು ಭೌತಿಕ ಹಾಗೂ ಶೇ 61.53ರಷ್ಟು ಆರ್ಥಿಕ ಸೊರಬ ಶೇ 74.92 ಭೌತಿಕ ಶೇ 50.43ರಷ್ಟು ಆರ್ಥಿಕ ತೀರ್ಥಹಳ್ಳಿ ಶೇ 61.50ರಷ್ಟು ಭೌತಿಕ ಶೇ 42.02ರಷ್ಟು ಆರ್ಥಿಕ ಗುರಿ ಸಾಧಿಸಲಾಗಿದೆ.

ನಾಡಕಲಸಿ; ಕಾಲುವೆ ನಿರ್ಮಾಣ ಕಾಮಗಾರಿ

ಸಾಗರ ತಾಲ್ಲೂಕಿನ ನಾಡಕಲಸಿ ಗ್ರಾಮ ಪಂಚಾಯಿತಿ ತಾಲ್ಲೂಕು ಕೇಂದ್ರದಿಂದ 10 ಕಿ.ಮೀ ದೂರವಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ 14 ಕೆರೆಗಳಿದ್ದು ಇವುಗಳಿಂದ ಜಮೀನುಗಳಿಗೆ ನೀರು ಸರಾಗವಾಗಿ ಹರಿಯುವಂತೆ ಮಾಡಲು ನರೇಗಾ ಅಡಿ ಕಾಲುವೆ ನಿರ್ಮಾಣ ಮಾಡಿಕೊಡಲಾಗಿದೆ. ಬಾಳಗೋಡು ಗ್ರಾಮದಲ್ಲಿನ ಕಪ್ಪೆಹೊಂಡದ ಕೆಳಭಾಗದ ರೈತರ ಜಮೀನುಗಳಿಗೆ ನೀರು ನುಗ್ಗಿ ಸಾಕಷ್ಟು ಸಮಸ್ಯೆ ಉಂಟಾಗಿತ್ತು. ನರೇಗಾ ಅಡಿ ₹3 ಲಕ್ಷ ಮೊತ್ತದಲ್ಲಿ ಕಾಮಗಾರಿ ಕೈಗೊಂಡಿದ್ದು ರೈತರ ಸಮಸ್ಯೆಗೆ ಶಾಶ್ವತವಾಗಿ ಪರಿಹಾರ ದೊರಕಿದೆ.  ಕಾಲುವೆ ನಿರ್ಮಾಣ ನಮ್ಮ ಹಲವು ವರ್ಷಗಳ ಬೇಡಿಕೆ. ಈಗ ಅದು ಈಡೇರಿದೆ. ಮಳೆಗಾಲದಲ್ಲಿ ನಮ್ಮ ಜಮೀನಿಗೆ ನೀರು ನುಗ್ಗುವುದಿಲ್ಲ. ಬೆಳೆಗೆ ಹಾಕಿದ ಸಾವಯವ ಗೊಬ್ಬರ ಹಾಳಾಗುವುದಿಲ್ಲ ಎಂದು ಬಾಳಗೋಡು ಗ್ರಾಮದ ರೈತ ಮಂಜಪ್ಪ ಹೇಳುತ್ತಾರೆ.

ಮಾಸೂರಿನಲ್ಲಿ ನೆಡುತೋಪು..

ನರೇಗಾ ಅಡಿ ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗದಿಂದ ಸಾಗರ ತಾಲ್ಲೂಕಿನ ಮಾಸೂರಿನ ರಸ್ತೆ ಬದಿಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳ ಸುತ್ತಲೂ ಗಿಡಗಳನ್ನು ನೆಟ್ಟು ಬೆಳೆಸಲಾಗುತ್ತಿದೆ.  ಸಾಮಾಜಿಕ ಅರಣ್ಯ ವಿಭಾಗವು 1000 ಗಿಡಗಳನ್ನು ಈ ಭಾಗದಲ್ಲಿ ನೆಟ್ಟಿದೆ. ಈ ಕಾಮಗಾರಿಯಡಿ ₹5 ಲಕ್ಷ ಮೊತ್ತ ವ್ಯಯಿಸಿ 832 ಮಾನವ ದಿನಗಳನ್ನು ಸೃಜನೆ ಮಾಡಲಾಗಿದೆ. ಅರಣ್ಯ ಇಲಾಖೆಯ ಈ ನಡೆ ದಾರಿಹೋಕರು ಪ್ರಯಾಣಿಕರಿಗೆ ನೆರಳು ಪ್ರಾಣಿ ಪಕ್ಷಿಗಳಿಗೆ ಹಣ್ಣು ಆಹಾರ ಮತ್ತು ಆಶ್ರಯ ನೀಡಲು ಸಹಾಯಕವಾಗಿದೆ. ಮುಂದಿನ ಪೀಳಿಗೆಗಾಗಿ ಕಾಡು ಬೆಳೆಸಿ ಉಳಿಸಿಕೊಳ್ಳಲು ಸಹಕಾರಿಯಾಗಿದೆ. ನಮ್ಮೂರಿನಲ್ಲಿ ಅರಣ್ಯಕ್ಕೇನೂ ಕೊರತೆ ಇಲ್ಲ. ಆದರೆ ಉದ್ಯೋಗ ಖಾತರಿ ಯೋಜನೆಯಡಿ ರಸ್ತೆ ಬದಿಗಳಲ್ಲಿ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಗಿಡ ನೆಡುವ ಮೂಲಕ ಉತ್ತಮವಾದ ನೆಡುತೋಪು ನಿರ್ಮಾಣ ಮಾಡಲು ಸಾಧ್ಯವಾಗಿದೆ ಎಂದು ಮಾಸೂರು ನಿವಾಸಿ ಸುಬ್ಬಯ್ಯ ಭಟ್ ಹೇಳುತ್ತಾರೆ.

ಪೂರಕ ಮಾಹಿತಿ: ಆಕಾಶ್ ಆರ್.ಎಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.