ಶಿವಮೊಗ್ಗ: ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಯುದ್ಧ ಸನ್ನದ್ಧತೆಯ ಭಾಗವಾಗಿ ಬುಧವಾರ ಇಲ್ಲಿನ ರಾಗಿಗುಡ್ಡದಲ್ಲಿರುವ ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯದ (ಆರ್ಆರ್ಯು) ಆವರಣದಲ್ಲಿ ನಾಗರಿಕರ ಸ್ವರಕ್ಷಣೆಯ ತಾಲೀಮು ನಡೆಸಲಾಯಿತು.
ಶತ್ರುಗಳ ದಾಳಿಯ ಬಗ್ಗೆ ಎಚ್ಚರಿಕೆಯ ಸೈರನ್ ಮೊಳಗುತ್ತಿದ್ದಂತೆಯೇ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸ್ವರಕ್ಷಣೆಯ ತಾಲೀಮು ನಡೆಸಿದರು. ವೈರಿಗಳ ದಾಳಿಯ ವೇಳೆ ಅಡಗುವಿಕೆ, ಗಾಯಗೊಂಡವರ ತೆರವುಗೊಳಿಸುವುದು, ಹಿರಿಯರು, ಮಕ್ಕಳನ್ನು ರಕ್ಷಿಸುವುದು, ಬಯಲು ಪ್ರದೇಶದಲ್ಲಿ ದಾಳಿಯಿಂದ ರಕ್ಷಣೆಯ ಬಗ್ಗೆ ತಾಲೀಮು ನಡೆಯಿತು.
ದಾಳಿಯ ವೇಳೆ ಗಾಯಗೊಂಡವರನ್ನು ಹೊತ್ತು ತರುವುದು. ಅವರಿಗೆ ಪ್ರಾಥಮಿಕ ಚಿಕಿತ್ಸೆ ಕೊಡುವ ತಾಲೀಮಿನ ಜೊತೆಗೆ ರಾತ್ರಿ ವೇಳೆ ಬಾಂಬ್ ದಾಳಿ ನಡೆದರೆ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಲಾಯಿತು.
ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯದ ನಿರ್ದೇಶಕಿ ಕಾವೇರಿ ಟಂಡನ್ ನೇತೃತ್ವದಲ್ಲಿ ಈ ಸ್ವರಕ್ಷಣೆಯ ತಾಲೀಮು ನಡೆಯಿತು.
ಸಿವಿಲ್ ಡಿಫೆನ್ಸ್ ಇಸ್ರೇಲ್ ಮಾದರಿ:
‘ಸ್ವರಕ್ಷಣೆಯ ತಾಲೀಮನ್ನು ಇಸ್ರೇಲ್ ದೇಶದಲ್ಲಿ ಶಾಲಾ ಹಂತದಲ್ಲಿಯೇ ಹೇಳಿಕೊಡಲಾಗುತ್ತದೆ. ಸದಾ ಯುದ್ಧ ಭೀತಿಯಲ್ಲಿರುವ ಇಸ್ರೇಲ್ಗೆ ಅದು ಅನಿವಾರ್ಯವೂ ಹೌದು. ವಾಸ್ತವವಾಗಿ ಸ್ವರಕ್ಷಣೆ ತಾಲೀಮು ಮಹಾಭಾರತದಲ್ಲಿನ ಪರಿಕಲ್ಪನೆ. ಯುದ್ಧದ ಸಂದರ್ಭದಲ್ಲಿ ನಾಗರಿಕರ ರಕ್ಷಣೆಗೆ ಈ ತಾಲೀಮು ಅನಿವಾರ್ಯ. ನಮ್ಮನ್ನು ರಕ್ಷಣೆ ಮಾಡಿಕೊಳ್ಳುವ ಜೊತೆಗೆ ಜೊತೆಯಲ್ಲಿರುವವರನ್ನು ರಕ್ಷಿಸಲು ಇದು ನೆರವಾಗುತ್ತದೆ. ಮಹಾಭಾರತದಲ್ಲಿ ಇದು ನಕುಲ ನೀತಿ ಎಂದು ಬಳಕೆಯಲ್ಲಿತ್ತು’ ಎಂದು ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯದ ಡಿಫೆನ್ಸ್ ವಿಭಾಗದ ಸಹ ಪ್ರಾಧ್ಯಾಪಕ ಡಾ.ಸಿದ್ಧಾರ್ಥ ಹೇಳಿದರು.
‘ಸ್ವರಕ್ಷಣೆಯ ತಾಲೀಮಿನ ವೇಳೆ ನಾವು ಇರುವ ಪರಿಸರವನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ವೈರಿಯ ದಾಳಿಯನ್ನು ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಂಡು ಕನಿಷ್ಠ ಅವಕಾಶಗಳಲ್ಲಿ ಗರಿಷ್ಠ ಜೀವ ಉಳಿಸುವ ಕಲೆ ಅರಿತುಕೊಳ್ಳಬೇಕಿದೆ’ ಎಂದರು.
ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಶಿವಲಿಂಗಪ್ಪ ಅಂಗಡಿ ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿ ನೀಡಿದರು.
ಯುದ್ಧ ಸಂದರ್ಭದಲ್ಲಿ ಸೈನಿಕರಿಗೆ ಪರೋಕ್ಷವಾಗಿ ನೆರವಾಗುವುದು, ಗಾಯಾಳುಗಳಿಗೆ ಚಿಕಿತ್ಸೆ ಕೊಡಲು ನೆರವಾಗುವುದು, ರಾತ್ರಿ ವೇಳೆ ಬಾಂಬ್ ದಾಳಿಯಿಂದ ರಕ್ಷಣೆಗೆ ಸಾಮೂಹಿಕವಾಗಿ ವಿದ್ಯುತ್ ಬೆಳಕು ಆರಿಸುವ ಬಗ್ಗೆಯೂ ತಿಳಿಸಿಕೊಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.