
ಸಾಗರ: ಯಾವ ಪ್ರದೇಶದಲ್ಲಿ ಸಹೃದಯರ ಸಂಖ್ಯೆ ಹೆಚ್ಚಿರುತ್ತದೆಯೊ ಅಲ್ಲಿ ಶಾಂತಿ, ಸಾಮರಸ್ಯ ನೆಲೆಸಿರುತ್ತದೆ ಎಂದು ಕೆಳದಿ ರಾಜಗುರು ಹಿರೇಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ಗಾಂಧಿ ಮೈದಾನದಲ್ಲಿ ಸಹೃದಯ ಬಳಗ ಶನಿವಾರ ಏರ್ಪಡಿಸಿದ್ದ ‘ರಜತ ಸಾಗರೋತ್ಸವ-2026’ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ‘ಸಹೃದಯ ಪುರಸ್ಕಾರ’ ಪ್ರಧಾನ ಮಾಡಿ ಅವರು ಮಾತನಾಡಿದರು.
ಸಾಧನೆ ಮಾಡಿದವರು ತಾವಾಗಿಯೆ ಪುರಸ್ಕಾರಗಳನ್ನು ಹುಡುಕಿಕೊಂಡು ಹೋಗುವುದಿಲ್ಲ. ಸನ್ಮಾನ ದೊರೆಯುತ್ತದೆ ಎಂಬ ನಿರೀಕ್ಷೆಯಿಂದ ಸಾಧನೆ ಅಥವಾ ಸೇವೆ ಮಾಡಿರುವುದಿಲ್ಲ. ಅಂತಹವರನ್ನು ಗುರುತಿಸುವುದು ಸಮಾಜದ ಸಹೃದಯತೆಯ ಲಕ್ಷಣ ಎಂದು ಅವರು ಅಭಿಪ್ರಾಯಪಟ್ಟರು.
ಸಾಗರ ಭಾಗದಲ್ಲಿ ನಿರಂತರವಾಗಿ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುವುದರಿಂದ ಒಂದು ಸುಸಜ್ಜಿತ ರಂಗಮಂದಿರದ ಅವಶ್ಯಕತೆಯಿದೆ. ಈ ಹಿನ್ನಲೆಯಲ್ಲಿ ರೂ. 12 ಕೋಟಿ ವೆಚ್ಚದಲ್ಲಿ ನಗರದ ಹೃದಯ ಭಾಗದಲ್ಲಿ ಟ್ಯಾಗೋರ್ ಕಲ್ಚರಲ್ ಕಾಂಪ್ಲೆಕ್ಸ್ ನಿರ್ಮಾಣವಾಗಲಿದ್ದು, ಶೀಘ್ರದಲ್ಲೆ ಶಂಕುಸ್ಥಾಪನೆ ನೆರವೇರಲಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ವಿವಿಧ ಕ್ಷೇತ್ರಗಳಲ್ಲಿನ ಸಾಧನೆಗಾಗಿ ಗೋಪಾಲಕೃಷ್ಣ ಬೇಳೂರು, ಬಿ.ಎಲ್.ನಾಗರಾಜ್, ವೇಣು ಗೋಪಾಲ್ ಗುರೂಜಿ, ಬಿ.ಎಲ್.ಸುರೇಶ್, ಮಂಜುನಾಥ್ ಜೆ.ಎಂ. ಅಮರೇಶ್ ಯತಗಲ್, ಪ್ರಸನ್ನ ಕುಮಾರ್, ಗೋಪಾಲ್ ಎಂ. ಇವರಿಗೆ ಸಹೃದಯ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಹೃದಯ ಬಳಗದ ಅಧ್ಯಕ್ಷ ಜಿ.ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಬಿ.ಟಾಕಪ್ಪ, ಪ್ರಮುಖರಾದ ಕೆ.ಎಂ.ಸೂರ್ಯನಾರಾಯಣ, ಅನಿತಾ ಕುಮಾರಿ, ಮಧುಮಾಲತಿ, ಶರಾವತಿ ಸಿ.ರಾವ್, ಚೇತನ್ ರಾಜ್ ಕಣ್ಣೂರು, ಎನ್.ಸಂತೋಷ್ ಕುಮಾರ್ ಇದ್ದರು.
ಶಾಂತಿ ಹೆಗಡೆ ಪ್ರಾರ್ಥಿಸಿದರು. ಲೋಕೇಶ್ ಕುಮಾರ್ ಸ್ವಾಗತಿಸಿದರು. ಸಂತೋಷ್ ಶೇಟ್ ವಂದಿಸಿದರು. ವಿ.ಟಿ.ಸ್ವಾಮಿ ನಿರೂಪಿಸಿದರು. ಶಾರದಾಂಬಾ ಕಲಾ ಕೇಂದ್ರದಿಂದ ಭರತನಾಟ್ಯ, ದೈವಜ್ಞ ಚಿಣ್ಣರ ಬಳಗದಿಂದ ಚಂಡೆ ವಾದನ, ಸಾಗರ ಕರಾಟೆ ಶಾಲೆಯ ವಿದ್ಯಾರ್ಥಿಗಳಿಂದ ಕರಾಟೆ ಪ್ರದರ್ಶನ, ಮನು ಹಂದಾಡಿ ಅವರಿಂದ ನಗೆ ಹಬ್ಬ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.