ಆನವಟ್ಟಿ: ಹಳೆಯದಾದ ಬೃಹತ್ ಅರಳಿಮರವೊಂದು ಸಂಪೂರ್ಣವಾಗಿ ಒಣಗಿದ್ದು, ಮರದ ಕೊಂಬೆಗಳು ಗಾಳಿ, ಮಳೆಗೆ ಯಾವುದೇ ಕ್ಷಣದಲ್ಲಿ ಬೀಳುವ ಸ್ಥಿತಿಯಲ್ಲಿವೆ.
ಭಾನುವಾರ ಮರದ ದೊಡ್ಡ ಕೊಂಬೆಯೊಂದು ಮುರಿದು, ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣುಮಕ್ಕಳ ಶಾಲೆಯ ಕಾಂಪೌಂಡ್ ಮೇಲೆ ಬಿದ್ದಿದೆ. ಶಾಲೆಯಲ್ಲಿ ಆ ಸಮಯದಲ್ಲಿ ವಿದ್ಯಾರ್ಥಿಗಳು ಇರಲಿಲ್ಲ. ಹಾಗಾಗಿ ಯಾವುದೇ ಅಪಾಯ ಸಂಭವಿಸಿಲ್ಲ.
ಈ ಬೃಹತ್ ಮರದ ಎದುರೇ ಅಂಗನವಾಡಿ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದ್ದು, ನೂರಾರು ಮಕ್ಕಳು ಮರದ ಪಕ್ಕದಲ್ಲೇ ಹಾದು ಶಾಲೆಗೆ ಹೋಗಬೇಕು. ಸಮೀಪದಲ್ಲಿ ವಾಸಿಸುವ ಜನರೂ ಜೀವ ಭಯದಲ್ಲೇ ದಿನ ದೂಡುತ್ತಿದ್ದಾರೆ.
ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು. ಸಾರ್ವಜನಿಕರ ಮನವಿ ಮೇರೆಗೆ ಈಚೆಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮರದ ಅರ್ಧಭಾಗವನ್ನು ಕತ್ತರಿಸಿದ್ದರು. ಇನ್ನರ್ಧ ತೆರವು ಮಾಡಬೇಕಾದರೆ ಸ್ಥಳೀಯರ ಮನೆಗಳಿಗೆ ತೊಂದರೆಯಾಗಲಿದೆ ಎಂದು ನೆಪ ಹೇಳಿದ್ದರು. ಮನೆಗಳನ್ನು ಖಾಲಿ ಮಾಡಿಸಿದ ಬಳಿಕ ತೆರವು ಮಾಡುವ ಭರವಸೆ ನೀಡಿದ್ದರು. ಮನೆ ಖಾಲಿ ಮಾಡಲು ಸಿದ್ಧವಿರುವುದಾಗಿ ಸ್ಥಳೀಯರು ತಿಳಿಸಿದ್ದರು. ಆದಷ್ಟು ಬೇಗ ಮರ ತೆರವುಗೊಳಿಸಿ ಅಪಾಯ ತಪ್ಪಿಸಬೇಕು ಎಂದು ಸ್ಥಳೀಯ ನಿವಾಸಿ ಸರಸ್ವತಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.