ADVERTISEMENT

ಅಂತರ್ಜಾತಿ ವಿವಾಹ ತಡೆಗೆ ಮಾತೃ ಮಂಡಳಿ: ಪೇಜಾವರ ಶ್ರೀ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2021, 12:40 IST
Last Updated 16 ಮಾರ್ಚ್ 2021, 12:40 IST
ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ
ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ   

ಶಿವಮೊಗ್ಗ: ಬ್ರಾಹ್ಮಣ ಹೆಣ್ಣು ಮಕ್ಕಳು ಇತರೆ ಜಾತಿ, ಧರ್ಮದ ಯುವಕರನ್ನು ವರಿಸುತ್ತಿರುವ ಕುರಿತು ಗಂಭೀರ ಚಿಂತನೆಯ ಅಗತ್ಯವಿದೆ. ಇಂತಹ ಪ್ರಕರಣಗಳ ತಡೆಗೆ ಕುಟುಂಬದ ಹಿರಿಯರನ್ನು ಒಳಗೊಂಡ ಮಾತೃಮಂಡಳಿ ರಚಿಸಬೇಕು ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಸಲಹೆ ನೀಡಿದರು.

ನಗರದ ಬ್ರಾಹ್ಮಣ ವಿದ್ಯಾರ್ಥಿನಿಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀಯಜುಃ ಸಂಹಿತಾಯಾಗ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮನೆಗಳಲ್ಲಿ ನಮ್ಮ ಹೆಣ್ಣು ಮಕ್ಕಳ ಸ್ಥಿತಿ ಏನಿದೆ? ಅವರು ಇಂತಹ ಸುಸಂಸ್ಕೃತ ಸಮಾಜ ತೊರೆದು ಬೇರೆ ಸಮಾಜದ ಯುವಕರನ್ನು ವರಿಸಲು ಕಾರಣಗಳೇನು? ಎನ್ನುವ ಅಂಶಗಳನ್ನು ಮಾತೃಮಂಡಳಿ ಮೂಲಕ ಅರಿಯಬೇಕಿದೆ. ಮಕ್ಕಳಿಗೆ ಬಾಲ್ಯದಿಂದಲೇ ಲೌಕಿಕ ಶಿಕ್ಷಣದ ಜತೆಗೆ ಧಾರ್ಮಿಕ ಸಂಸ್ಕಾರ ಕಲಿಸಬೇಕಿದೆ. ಗಣನೀಯವಾಗಿ ಇಳಿಕೆಯಾಗುತ್ತಿರುವ ಬ್ರಾಹ್ಮಣರ ಜನಸಂಖ್ಯೆಗೂ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.

ADVERTISEMENT

ರಾಮ ಮಂದಿರಕ್ಕೆ ಮತಾಂತರಿಗಳಿಂದಲೇ ಆಪತ್ತು

‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಇದ್ದ ಅಡೆತಡೆ ನಿವಾರಣೆಯಾಗಿದೆ. ಶೀಘ್ರ ಮಂದಿರವೂ ಸಿದ್ಧವಾಗಲಿದೆ. ಈಗಿರುವುದು ಅದರ ನಿರ್ವಹಣೆಯ ಸವಾಲು. ಮತಾಂತರ ಹೊಂದುತ್ತಿರುವ ಹಿಂದೂ ಯುವಕರಿಂದಲೇ ಭವಿಷ್ಯದಲ್ಲಿ ಮಂದಿರಕ್ಕೆ ಆಪತ್ತು ಎದುರಾಗಬಹುದು. ಇಂತಹ ಆಪತ್ತುಗಳನ್ನು ನಿವಾರಿಸಲು ಈಗಲೇ ಸಿದ್ಧತೆಗಳು ಆರಂಭವಾಗಬೇಕು. ಮಕ್ಕಳಿಗೆ ದೇವರ ವೇಷಭೂಷಣ ತೊಡಿಸಬೇಕು. ಸಂಸ್ಕಾರ ಧಾರೆ ಎರೆಯಬೇಕು. ಮಾತೃ ಮಂಡಳಿ ಪ್ರಾಥಮಿಕ ಹಂತದಲ್ಲೇ ಇಂತಹ ಜವಾಬ್ದಾರಿ ನಿಭಾಯಿಸಬೇಕು. ಮಕ್ಕಳಲ್ಲಿ ಧರ್ಮ, ಸಂಸ್ಕೃತ ಭಾಷೆಯ ಅಭಿರುಚಿ ಮೂಡಿಸಬೇಕು’ ಎಂದು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.