ಸೊರಬ: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಅಡಿಕೆ, ಬಾಳೆ ಹಾಗೂ ನೀರಿಗಾಗಿ ಅಳವಡಿಸಿರುವ ಪೈಪ್ಗಳನ್ನು ನಾಶಪಡಿಸಿದ ಘಟನೆ ತಾಲ್ಲೂಕಿನ ಕಕ್ಕರಸಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಗುಂಡಶೆಟ್ಟಿಕೊಪ್ಪ ಗ್ರಾಮದ ಭೋಜರಾಜ್ ಅವರು ತಮ್ಮ ಅನುಭವದಲ್ಲಿರುವ ಕಕ್ಕರಸಿ ಗ್ರಾಮದ ಸರ್ವೆ ನಂ. 21ರಲ್ಲಿರುವ ಸಾಗುವಳಿ ಭೂಮಿಯಲ್ಲಿ ಅಡಿಕೆ, ಬಾಳೆ ಬೆಳೆದಿದ್ದರು.
‘ಏಕಾಏಕಿ ಬೆಳಗಿನ ಜಾವ ಕಕ್ಕರಸಿ ಗ್ರಾಮದ ಸತೀಶ, ಕೃಷ್ಣಪ್ಪ, ರಾಮಚಂದ್ರ, ಪರಸಪ್ಪ ಹಾಗೂ ಇತರರು ಸೇರಿ 700 ಅಡಿಕೆ ಸಸಿ, 50 ಬಾಳೆಗಿಡಗಳನ್ನು ಹಾಗೂ 20 ಕೃಷಿ ಪೈಪ್ಗಳನ್ನು ಕಡಿದು ನಾಶ ಪಡಿಸಿದ್ದಾರೆ. ಭೋಜರಾಜ್ ಅವರ ಸಹೋದರ ನಿಂಗರಾಜ್ ಅವರು ಬೆಳೆಗೆ ನೀರು ಹಾಯಿಸಲು ಹೋದ ಸಂದರ್ಭದಲ್ಲಿ ಕಕ್ಕರಸಿ ಗ್ರಾಮಸ್ಥರು ಹಲ್ಲೆ ಮಾಡಲು ಯತ್ನಿಸಿದ್ದಲ್ಲದೆ, ಅವಾಚ್ಯ ಪದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಕ್ಕರಸಿ ಗ್ರಾಮಸ್ಥರು ಹಾಗೂ ಸಾಗುವಳಿದಾರರ ನಡುವೆ ಮೊದಲಿನಿಂದಲೂ ಭಿನ್ನಾಭಿಪ್ರಾಯಗಳಿದ್ದವು ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.