ADVERTISEMENT

9ರಿಂದ ಯಕ್ಷಗಾನ ಕಲಿಕಾ ತರಬೇತಿ ಆರಂಭ

​ಪ್ರಜಾವಾಣಿ ವಾರ್ತೆ
Published 5 ಜೂನ್ 2019, 15:19 IST
Last Updated 5 ಜೂನ್ 2019, 15:19 IST

ಶಿವಮೊಗ್ಗ: ನಗರದ ಯಕ್ಷ ಸಂವರ್ಧನಾ ಸಂಸ್ಥೆ ಯಕ್ಷಗಾನ ಕಲೆಯ ಉಳಿವಿಗಾಗಿ ಕಲಿಕಾ ತರಬೇತಿ ಆರಂಭಿಸಿದೆ

ಹತ್ತು ವರ್ಷಗಳ ಹಿಂದೆ ರವೀಂದ್ರ ನಗರದಲ್ಲಿ ಆರಂಭವಾದ ಸಂಸ್ಥೆ ಯಕ್ಷಗಾನ ಕಲೆಯ ಉಳಿವಿಗಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನೀಡಿದೆ ಎಂದು ಸಂಸ್ಥೆಯ ಮುಖ್ಯಸ್ಥ ಭಾಗವತ ಪರಮೇಶ್ವರ ಹೆಗಡೆ ಬುಧವಾರ ಪತ್ರಿಕಾಗೊಷ್ಠಿಯಲ್ಲಿ ಮಾಹಿತಿ ನೀಡಿದರು.

ಈ ವರ್ಷದ ಕಲಿಕಾ ತರಬೇತಿಗಳು ಜೂನ್ 9ರಿಂದ ಆರಂಭವಾಗುತ್ತವೆ. ಪ್ರತಿ ಭಾನುವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನರವರೆಗೆ ಪೊಲೀಸ್ ಚೌಕಿ ಹತ್ತಿರವಿರುವ ಕ್ರಿಯೇಟಿವ್ ರೆಡ್ಸ್ ಶಾಲೆಯಲ್ಲಿ ಆರಂಭವಾಗುತ್ತವೆ ಎಂದು ವಿವರ ನೀಡಿದರು.

ಯಕ್ಷಗಾನ ಕಲೆ ಕೇವಲ ಗಂಡು ಮಕ್ಕಳಿಗೆ ಸೀಮಿತವಲ್ಲ. ಹೆಣ್ಣುಮಕ್ಕಳೂ ಕಲಿಯಬಹುದು. ಈ ಸಂಸ್ಥೆ ಈಗಾಗಲೇ ಒಂದು ಸಾವಿರಕ್ಕೂ ಹೆಚ್ಚು ಜನರಿಗೆ ಕಲೆ ಕಲಿಸಿಕೊಟ್ಟಿದೆ. ಪುರುಷರು ಮತ್ತು ಮಹಿಳೆಯರ ಸಾಕಷ್ಟು ತಂಡಗಳು ರೂಪುಗೊಂಡಿವೆ ಎಂದರು.

ADVERTISEMENT

ಪೋಷಕರು ಮಕ್ಕಳನ್ನು ಯಕ್ಷಗಾನ ತರಗತಿಗಳಿಗೆ ಕಳಿಸಿಕೊಡಬೇಕು. ಇಲ್ಲಿ ಯಕ್ಷಗಾನದ ಹೆಜ್ಜೆ, ವೇಷಭೂಷಣ, ಭಾಗವತಿಕೆ, ಮದ್ದಳೆವಾದನ ಮತ್ತು ಚಂಡೆ ವಾದನ ಕಲಿಸಿಕೊಡಲಾಗುವುದು ಎಂದು ಹೇಳಿದರು.

ಸಂಸ್ಥೆಯ ಕಾರ್ಯದರ್ಶಿ ಶ್ರೀನಿವಾಸ ಆಚಾರ್ಯ ಮಾತನಾಡಿ, ರವೀಂದ್ರನಗರದ ಗಣಪತಿ ದೇವಸ್ಥಾನದ ಅ.ಪ. ರಾಮಭಟ್ಟ ಹಾಗೂ ಐನಬೈಲು ಪರಮೇಶ್ವರ ಹೆಗಡೆ ಅವರ ಸಹಕಾರದ ಫಲವಾಗಿ ಈ ಯಕ್ಷಗಾನ ಸಂಸ್ಥೆ ಪ್ರತಿಷ್ಠಿತವಾಗಿ ಬೆಳೆದುಬರುತ್ತಿದೆ. ಮಕ್ಕಳಲ್ಲಿ ಇರುವ ಕಲಾ ಪ್ರೌಢಿಮೆ ಹೊರಜಗತ್ತಿಗೆ ಕಲಿಸಿಕೊಡುತ್ತಿದೆ. ಯಕ್ಷಗಾನದ ಜತೆಗೆ, ಮಕ್ಕಳಲ್ಲಿ ಪುರಾಣದ ಜ್ಞಾನ ಮೂಡಿಸಲಾಗುತ್ತಿದೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಆನಂದ ಶೆಟ್ಟಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.