ADVERTISEMENT

ಬೆಂಗಳೂರಿಗೆ ಶರಾವತಿ: ಅಧಿಕೃತ ವಿವರ ಅನಾವರಣ

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 12:34 IST
Last Updated 9 ಜುಲೈ 2019, 12:34 IST

ಶಿವಮೊಗ್ಗ: ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ತೆಗೆದುಕೊಂಡು ಹೋಗುವ ಯೋಜನೆ ಕುರಿತು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕೃತ ಆದೇಶ ಹೊರಡಿಸಿದೆ ಎಂದು ರಾಷ್ಟ್ರೀಯ ಸ್ವಾಭಿಮಾನ್ ಆಂದೋಲನದ ಜಿಲ್ಲಾಧ್ಯಕ್ಷ ನಂದನ್ ಹೇಳಿದರು.

ಈ ಪತ್ರದ ಪ್ರಕಾರ ಬಿ.ಎನ್.ತ್ಯಾಗರಾಜು ಅವರ ಅಧ್ಯಕ್ಷತೆಯಲ್ಲಿ ರಚಿಸಿದ ತಜ್ಞರ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ. ಬೆಂಗಳೂರು ಜಲಮಂಡಳಿ ಮುಖ್ಯ ಎಂಜಿನಿಯರ್ ಈ ವರದಿ ಪ್ರಸ್ತಾಪಿಸಿ ಲಿಂಗನಮಕ್ಕಿ ಜಲಾಶಯ ಬೆಂಗಳೂರಿನಿಂದ ಸುಮಾರು 300ಕಿ.ಮೀ.ದೂರದಲ್ಲಿದೆ. ಅಲ್ಲಿಂದ ಯಗಾಚಿ ಜಲಾಶಯಕ್ಕೆ 130 ಕಿ.ಮೀ. ದೂರವಿರುತ್ತದೆ. 410 ಮೀಟರ್ ಎತ್ತರಕ್ಕೆ ಪಂಪ್ ಮಾಡಬೇಕಾಗುತ್ತದೆ. ಅಲ್ಲಿಂದ ಬೆಂಗಳೂರು ಅಂದರೆ 170 ಕಿ.ಮೀ. ಗುರುತ್ವಾಕರ್ಷಣೆ ಮೂಲಕ ನೀರು ಸರಬರಾಜು ಮಾಡಬಹುದು. ತಜ್ಞರ ಸಮಿತಿ ವರದಿ ಪ್ರಕಾರ ಪೈಪ್‌ಲೈನ್‌ ಯಾವುದೇ ಕಾಡು ಪ್ರದೇಶದಲ್ಲಿ ಹಾದುಹೋಗದೆ ಪಶ್ಚಿಮಘಟ್ಟಗಳ ಬೆಟ್ಟದ ಮೇಲೆ ಹಾದು ಹೋಗುತ್ತದೆ. ಸದರಿ ಪ್ರಸ್ತಾವ ವೈಜ್ಞಾನಿಕ. ಇದರಿಂದ ಪರಿಸರ ನಾಶವಾಗುವುದಿಲ್ಲ ಎಂದು ಹೇಳಿದೆ. ಇದು ಸತ್ಯಕ್ಕೆ ದೂರ ಎಂದು ಆರೋಪಿಸಿದರು.

ಪ್ರಸ್ತಾವನೆಯಲ್ಲಿ ಅಂದಾಜುಪಟ್ಟಿಯ ವಿವರಗಳೇ ಇವೆ. ಇದು 2013ರ ಅಂದಾಜುಪಟ್ಟಿ. ಅಂದರೆ 2013ರಲ್ಲಿಯೇ ಈ ಯೋಜನೆಗೆ ಸಿದ್ಧತೆ ನಡೆದಿದೆ. ಸುಮಾರು ₹12,500 ಕೋಟಿ ವೆಚ್ಚದ ಯೋಜನೆ. ಭೂ ಸ್ವಾಧೀನಕ್ಕೆ ₹75 ಕೋಟಿ, ಪೈಪ್‌ಲೈನ್‌ ಕಾಮಗಾರಿಗೆ ₹ 9 ಸಾವಿರ ಕೋಟಿ, ಪಂಪಿಂಗ್ ಸ್ಟೇಷನ್‌ಗೆ ₹1000 ಕೋಟಿ ಸುರಂಗ ಮಾರ್ಗಕ್ಕೆ ₹30 ಕೋಟಿ, ನೀರು ಶುದ್ದೀಕರಣಕ್ಕೆ ₹ 1500 ಕೋಟಿ, ಪಂಪ್ ಮಾಡಲು ₹95 ಕೋಟಿ ಏರಿಕೆ ಹಾಗೂ ಅನಿರೀಕ್ಷಿತ ವೆಚ್ಚಕ್ಕಾಗಿ ₨ 800 ಕೋಟಿ ಅಂದಾಜು ಮಾಡಲಾಗಿದೆ ಎಂದರು.

ADVERTISEMENT

2015ರಲ್ಲಿಯೇ ಬೆಂಗಳೂರು ಜಲಮಂಡಳಿ ಕಾರ್ಯತಂತ್ರ ಹೆಣೆದಿದೆ. 2050ಕ್ಕೆ ಹೊಂದಿಕೊಳ್ಳುವಂತೆ ರೂಪಿಸಲಾಗಿದೆ ಎಂಬ ವಿವರಗಳು ಇದರಲ್ಲಿವೆ. ಇದು ದೀರ್ಘಕಾಲದ ಯೋಜನೆ. ಪೂರ್ವಭಾವಿ ಕೆಲಸ ಈಗಿನಿಂದಲೇ ಮಾಡಬೇಕು ಎಂದು ವರದಿಯಲ್ಲಿ ಹೇಳಲಾಗಿದೆ ಎಂದು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಆಂದೋಲನದ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ, ನವ್ಯಶ್ರೀ ನಾಗೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.