ಹೊಸನಗರ: ಹುಟ್ಟುವಾಗಲೇ ಎರಡು ಕೈಗಳ ಬೆಳವಣಿಗೆ ಕಳೆದುಕೊಂಡು ಅಂಗವಿಕಲೆ ಆಗಿದ್ದ ಇಟ್ಟಕ್ಕಿ ಗ್ರಾಮದ ಆಶಾಲತಾ ಅವರನ್ನು ಹಾಸನ ಜಿಲ್ಲೆಯ ಅರಸೀಕೆರೆಯ ಅರ್ಚಕ ಯುವಕ ಎ.ಪಿ.ಪ್ರಕಾಶ್ ವರಿಸಿದ್ದಾರೆ.
ತ್ರಿಣಿವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಟ್ಟಕ್ಕಿ ಶಾರದಮ್ಮ ಅವರ ಕೊನೆಯ ಮಗಳಾದ ಆಶಾಲತಾ ಅವರನ್ನು ಅರಸೀಕೆರೆಯ ಎಚ್.ಎಸ್.ವಿಜಯ ಅವರ ಪುತ್ರ ಎ.ಪಿ.ಪ್ರಕಾಶ್ ಭಾನುವಾರ ನಡೆದ ಸರಳ ಸಮಾರಂಭದಲ್ಲಿ ಮದುವೆಯಾದರು.
ಇಟ್ಟಕ್ಕಿಯ ಶಾರದಮ್ಮ ದಿವಂಗತ ಗೋಪಾಲ ಆಚಾರ್ ದಂಪತಿಗೆ ನಾಲ್ಕು ಹೆಣ್ಣು ಮಕ್ಕಳು. ಮನೆಯಲ್ಲಿರುವ ಅಲ್ಪ ಸ್ವಲ್ಪ ಪ್ರಮಾಣದ ಕೃಷಿ ಭೂಮಿಯೇ ಬದುಕಿಗೆ ಆಶ್ರಯ. ಮೊದಲ ಮೂವರೂ ಹೆಣ್ಣು ಮಕ್ಕಳು ಆರೋಗ್ಯವಾಗಿದ್ದು, ಕೊನೆಯ ಮಗಳು ಆಶಾಲತಾ ಹುಟ್ಟಿನಿಂದಲೇ ಅಂಗವಿಕಲೆ. ಎರಡೂ ಕೈಗಳು ಸರಿಯಾಗಿ ಬೆಳವಣಿಗೆ ಆಗಿಲ್ಲ. ಒಂದೊಂದು ಕೈಯಲ್ಲಿ ಒಂದೊಂದೇ ಬೆರಳುಗಳು ಇದ್ದು ಕುಬ್ಜ ಸ್ಥಿತಿಯಲ್ಲಿವೆ.
ಆಶಾಲತಾ ತನ್ನ ಅಂಗವೈಕಲ್ಯವನ್ನು ಶಾಪ ಎಂದೆಣಿಸದೆ ವಿದ್ಯಾಭ್ಯಾಸದಲ್ಲಿ ತಲ್ಲೀನರಾಗಿದ್ದರು. ಮೊದಲಿಗೆ ಆಡಲು, ಬರೆಯಲು ಆಗದೆ ಇರುವ ಪರಿಸ್ಥಿತಿ ತಲೆದೋರಿದರೂ ಅದಕ್ಕೆಲ್ಲ ಧೃತಿಗೆಟ್ಟಿಲ್ಲ. ತನ್ನೆರಡು ಕೈಗಳ ಒಂದೊಂದೇ ಬೆರಳನ್ನು ಜೋಡಿಸಿ ಬರೆಯಲು ಅಭ್ಯಾಸ ಮಾಡಿದ ಆಶಾಲತಾ, ‘ಬರವಣಿಗೆ ಕಷ್ಟವೇ ಅಲ್ಲ’... ಎಂಬಷ್ಟು ಚುರುಕುಮತಿಯಾಗಿ ರೂಪುಗೊಂಡರು. ಛಲದಿಂದ ಪದವಿವರೆಗೆ ವಿದ್ಯಾಭ್ಯಾಸ ಪಡೆದಿದ್ದಾರೆ.
ಪದವಿ ಮುಗಿದ ನಂತರ ಮನೆಯಲ್ಲಿ ಕೂರದೆ ಸ್ವಾಭಿಮಾನಿಯಾಗಿ ಬದುಕುವ ನಿಲುವು ತಾಳಿದ ಆಶಾಲತಾ, ಕೆಲಸಕ್ಕಾಗಿ ಹಲವೆಡೆ ಅಲೆದಾಡಿದರು. ಅಂಗವಿಕಲ ಕೋಟಾದ ಕೆಲಸಗಳು ಕೈತಪ್ಪಿ ಹೋಗಿವೆ.
ಸದ್ಯ ಮೂಡುಗೊಪ್ಪ ನಗರ ಗ್ರಾಮ ಪಂಚಾಯಿತಿಯಲ್ಲಿ ಅಂಗವಿಕಲ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.