ADVERTISEMENT

ಬೇಡಿಕೆ ಈಡೇರಿಕೆಗೆ ಎಂಪಿಎಂ ಅರಣ್ಯ ನೌಕರರ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 13:28 IST
Last Updated 8 ಜನವರಿ 2021, 13:28 IST
ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರ ಎಂಪಿಎಂ ಅರಣ್ಯ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರ ಎಂಪಿಎಂ ಅರಣ್ಯ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.   

ಶಿವಮೊಗ್ಗ: ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಎಂಪಿಎಂ ಅರಣ್ಯ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಮನವಿ ಸಲ್ಲಿಸಿದರು.

ಎಂಪಿಎಂ ಅರಣ್ಯ ವಿಭಾಗದಲ್ಲಿ 1978ರಿಂದಲೂ ಕೆಲಸ ಮಾಡುತ್ತಿದ್ದೇವೆ. ವಾಚರ್‌ಗಳಾಗಿ ಕೆಲಸ ಮಾಡುತ್ತಿದ್ದ ಎಲ್ಲರಿಗೂ ವೇತನ ಸಿಗುತ್ತಿತ್ತು. ಆದರೆ, ಈಗ ಸರಿಯಾಗಿ ಸಂಬಳ ನೀಡುತ್ತಿಲ್ಲ. ಎಂಪಿಎಂ ಮುಚ್ಚಿದರೂ ಅರಣ್ಯ ವಿಭಾಗ ಕಾರ್ಯನಿರ್ವಹಿಸುತ್ತಿರುವ ಕಾರಣ ದಿನಗೂಲಿ ನೌಕರರೆಂದು ಪರಿಗಣಿಸಲಾಗುತ್ತಿದೆ ಎಂದು ಅಳಲು ತೋಡಿಕೊಂಡರು.

ಎಂಪಿಎಂ ಕಾರ್ಖಾನೆ ಸ್ಥಗಿತದ ನಂತರ ಸುಮಾರು ₹76 ಕೋಟಿ ಬೆಲೆಬಾಳುವ 1.75 ಲಕ್ಷ ಟನ್ ನೀಲಗಿರಿ ಮತ್ತು ಅಕೇಶಿಯಾ ಮರಗಳನ್ನು ಕಡಿದು ಮಾರಾಟ ಮಾಡಲಾಗಿದೆ. ಈ ಹಣ ಇದ್ದರೂ ವೇತನ ಬಾಕಿ, ಗಳಿಕೆಯ ರಜೆಯ ಹಣ ನೀಡಿಲ್ಲ. ತಿಂಗಳ ವೇತನ ಸರಿಯಾಗಿ ನೀಡುತ್ತಿಲ್ಲ ಎಂದು ದೂರಿದರು.

ADVERTISEMENT

ಸರ್ಕಾರ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ವಿಧೇಯಕದ ಅಡಿ ಬರುವುದಿಲ್ಲ ಎಂಬ ಕಾರಣ ನೀಡಿ ತುಟ್ಟಿಭತ್ಯೆ ಕೊಟ್ಟಿಲ್ಲ. 2010ರಿಂದ ಬರಬೇಕಾದ ಬಾಕಿ ನೀಡಿಲ್ಲ. ನಿವೃತ್ತಿಯಾದ, ನಿಧನ ಹೊಂದಿದವರಿಗೆ ನೀಡಬೇಕಾದ ಸೌಲಭ್ಯ ದೊರಕಿಸಿಲ್ಲ. ಬಟ್ಟೆ, ಶೂ, ಉಪಹಾರ ಭತ್ಯೆ, ಬೋನಸ್‌ ಸೌಲಭ್ಯಗಳು ಸಿಕ್ಕಿಲ್ಲ ಎಂದರು.

ಸಂಘದ ಅಧ್ಯಕ್ಷ ಎಸ್.ಬಿ.ಮಂಜಪ್ಪ, ಪ್ರಧಾನ ಕಾರ್ಯದರ್ಶಿ ಉದಯಕುಮಾರ್, ಪದಾಧಿಕಾರಿಗಳಾದ ಗುರುರಾಜ್, ಪ್ರಭಾಕರ್, ಧರ್ಮಪ್ಪ, ಜೈಪಾಲ್ ಆಲ್ಬರ್ಟ್, ಲೋಕೇಶ್, ಈಶ್ವರ್‌, ಅರುಣ್ ಕುಮಾರ್, ಜಗನ್ನಾಥ್ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.