ತೀರ್ಥಹಳ್ಳಿ: ‘ಸವರ್ಣೀಯರ ಗುಲಾಮರಾಗಿ ಸ್ತ್ರೀಯರು, ಶೂದ್ರರು ಇರಬೇಕು. ಸಮಾನತೆ ನಿರಾಕರಣೆ ಮಾಡುವ ಮನುವಾದಿಗಳು ಆಡಳಿತದ ಆಯಕಟ್ಟಿನ ಜಾಗದಲ್ಲಿದ್ದಾರೆ. ಶೋಷಣೆಯನ್ನೇ ಬಂಡವಾಳ ಮಾಡಿಕೊಂಡಿರುವ ಆರ್ಎಸ್ಎಸ್ ಕೊಳಕು, ಹುಳುಕುಗಳ ಸಂಘಟನೆ’ ಎಂದು ರೈತ ಮುಖಂಡ ಕಂಬಳಿಗೆರೆ ರಾಜೇಂದ್ರ ಕಟುವಾಗಿ ಟೀಕಿಸಿದರು.
ತಾಲ್ಲೂಕಿನ ಜನಪರ ಸಂಘಟನೆಗಳ ಒಕ್ಕೂಟ ಗುರುವಾರ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿ, ‘ಬುದ್ಧ, ಬಸವ,
ಗಾಂಧಿ, ಪೆರಿಯಾರ್ ಅವರಂತಹ ಮಹಾನ್ ಚೇತನಗಳ ಪಠ್ಯವನ್ನು ಕೈಬಿಡಲಾಗಿದೆ. ರಾಜ್ಯವೇ
ಸೆಟೆದು ನಿಂತಿದ್ದರೂ ನಾವು ಪ್ರಶ್ನಾತೀತರು ಎಂಬ ಧೋರಣೆ ಮುಂದುವರಿಸಲಾಗಿದೆ’ ಎಂದು ಆರೋಪಿಸಿದರು.
‘ಶೇಕಡಾ 40ರ ಹಿಂದೆ ಬಿದ್ದು ಕಾರ್ಪೊರೇಟ್ ಕಂಪನಿಗಳಿಗೆ ಕೃಷಿ ಜಮೀನು ಮಾರುವ ಹುನ್ನಾರವನ್ನು ರೈತ ನಾಯಕ ರಾಕೇಶ್ ಟಿಕಾಯತ್ ತಡೆ ಹಿಡಿದಿದ್ದಾರೆ. ಹೋರಾಟದ ಫಲವಾಗಿ ಕೇಂದ್ರ ಮುಖಂಡರಿಗೆ ಸಾವಿರಾರು ಕೋಟಿ ನಷ್ಟವಾಗಿದೆ. ಆರ್ಎಸ್ಎಸ್ ಕಮಂಗಿಗಳಿಗೆ ದಿಗಿಲು ಹೊಡೆದಂತಾಗಿದ್ದು,
ಹಲ್ಲೆಗೆ ಪ್ರೇರೇಪಿಸಿದ್ದಾರೆ’ ಎಂದು ಟೀಕಿಸಿದರು.
ಹಿರಿಯ ಸಾಹಿತಿ ಡಾ.ಜೆ.ಕೆ.ರಮೇಶ್ ಮಾತನಾಡಿ, ‘20ನೇ ಶತಮಾನದ ಮೊದಲಾರ್ಧ ಭಾಗದಲ್ಲೇ ಕುವೆಂಪು ಅವರ ಜಲಗಾರ, ಸ್ಮಶಾನ ಕುರುಕ್ಷೇತ್ರ ಟೀಕೆಗೆ ಗುರಿಯಾಗಿದೆ. ಬ್ರಾಹ್ಮಣರನ್ನು ವಿರೋಧಿಸುತ್ತಿಲ್ಲ ಬ್ರಾಹ್ಮಣ್ಯ ಎಂದಿದ್ದ ಕುವೆಂಪು ವಾದವನ್ನು ಡಿವಿಜಿ, ಮಾಸ್ತಿ ಒಪ್ಪಿದ್ದರು’ ಎಂದರು.
ಚಿಂತಕ ನೆಂಪೆ ದೇವರಾಜ್, ಸಾಹಿತಿ ಎಲ್.ಸಿ.ಸುಮಿತ್ರಾ, ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ವೆಂಕಟೇಶ್ ಹೆಗಡೆ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಬನಮ್, ಕಸಪಾ ಅಧ್ಯಕ್ಷ ಟಿ.ಕೆ. ರಮೇಶ್ ಶೆಟ್ಟಿ ಮಾತನಾಡಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಅಧ್ಯಕ್ಷ ಕೋಡ್ಲು ವೆಂಕಟೇಶ್, ಕಾರ್ಯದರ್ಶಿ ಹೊರಬೈಲು ರಾಮಕೃಷ್ಣ, ಹಸಿರು ಸೇನೆ ಮುಖ್ಯಸ್ಥ ನಿಶ್ಚಲ್ ಜಾದೂಗಾರ್, ಮುಖಂಡರಾದ ಎಸ್.ಟಿ.ದೇವರಾಜ್, ಹೊಸಕೊಪ್ಪ ಸುಂದರೇಶ್, ಡಾ.ಬಿ.ಗಣಪತಿ, ಕೊರೋಡಿ ಕೃಷ್ಣಪ್ಪ, ಹಿತ್ಲಗದ್ದೆ ಪ್ರಸನ್ನ, ಕಸಾಪ ಕಾರ್ಯದರ್ಶಿ ಗಾಯತ್ರಿ ಶೇಷಗಿರಿ, ಕೋಶಾಧ್ಯಕ್ಷ ಹಾಲಿಗೆ ನಾಗರಾಜ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.