ADVERTISEMENT

ಶಿವಮೊಗ್ಗ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 10:55 IST
Last Updated 10 ಆಗಸ್ಟ್ 2020, 10:55 IST

ಶಿವಮೊಗ್ಗ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರ ಸಂಘದ ಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಕಾರ್ಖಾನೆಗಳ ಕಾಯ್ದೆ, ಕೈಗಾರಿಕಾ ವಿವಾದ ಕಾಯ್ದೆ, ಗುತ್ತಿಗೆ ಕಾರ್ಮಿಕರ ಕಾಯ್ದೆಗಳಿಗೆ ಪ್ರಗತಿ ವಿರೋಧಿ ತಿದ್ದುಪಡಿಗಳನ್ನು ತರಲಾಗಿದೆ. ವ್ಯತ್ಯಸ್ಥ ತುಟ್ಟಿಭತ್ಯೆ ಮುಂದೂಡುವಿಕೆಯ ಆದೇಶ ರೂಪಿಸಲಾಗಿದೆ ಎಂದು ದೂರಿದರು.

ಅಸಂಘಟಿತ ಕ್ಷೇತ್ರದ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆ ಅಡಿ ಸಾಮಾಜಿಕ ಭದ್ರತಾ ಯೋಜನೆಯ ಅನುಷ್ಠಾನಕ್ಕೆ ಕೇಂದ್ರ ಪ್ರತಿ ವರ್ಷ ₹ 10 ಸಾವಿರ ಕೋಟಿ ವರ್ತುಲ ನಿಧಿ ಸ್ಥಾಪಿಸಬೇಕು. ರಕ್ಷಣಾ ವಲಯ ಹಾಗೂ ರಕ್ಷಣಾ ಉಪಕರಣ ಕಾರ್ಖಾನೆಗಳು, ಸಾರಿಗೆ, ರೈಲ್ವೆ, ಜೀವವಿಮಾ ನಿಗಮ, ಸಾಮಾನ್ಯ ವಿಮಾ ನಿಗಮ, ಬ್ಯಾಂಕುಗಳು, ಬಂದರು, ವಿಮಾನ ನಿಲ್ದಾಣಗಳು ಮತ್ತಿತರ ಸಾರ್ವಜನಿಕ ಉದ್ಯಮಗಳ ಖಾಸಗೀಕರಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಕಾರ್ಮಿಕ ವರ್ಗದ ನೀತಿ ನಿರೂಪಣೆಯ ಎಲ್ಲ ಹಂತಗಳಲ್ಲೂ ಕಾರ್ಮಿಕರ ಅಭಿಪ್ರಾಯ, ಅನಿಸಿಕೆ ಪಡೆಯಬೇಕು. ಆರೋಗ್ಯ, ಶಿಕ್ಷಣ ಮತ್ತು ಕೃಷಿ ಕ್ಷೇತ್ರಗಳಲ್ಲಿ ಸರ್ಕಾರದ ಹೂಡಿಕೆಗಳನ್ನು ವಿಸ್ತರಿಸಬೇಕು. ಆನ್‌ಲೈನ್ ಶಿಕ್ಷಣ ನಿಷೇಧಿಸಬೇಕು. ಅಗತ್ಯ ಸಾಮಾಗ್ರಿ ಕಾಯ್ದೆಯ ತಿದ್ದುಪಡಿಯೂ ಸೇರಿದಂತೆ ಸುಗ್ರಿವಾಜ್ಞೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕರ ಗಳಿಕೆ ರಜೆ ಕಡಿತಗೊಳಿಸಬಾರದು. ಪ್ರತಿ ತಿಂಗಳು 7ರಂದು ವೇತನ, ತುಟ್ಟಿ ಭತ್ಯೆ ಹಾಗೂ ಇ-ಎಲ್ ನಗದೀಕರಣ ನೀಡಬೇಕು. ಪ್ರತಿ ಸಾರಿಗೆ ನಿಗಮಗಳಿಗೆ ಕನಿಷ್ಠ ₹ 500 ಕೋಟಿ ಸಂಕಷ್ಟ ಧನಸಹಾಯ ನೀಡಬೇಕು. ಬಜೆಟ್ ಬೆಂಬಲ ನೀಡುವ ಮೂಲಕ ಸಾರಿಗೆ ನಿಗಮಗಳನ್ನು ಸಂರಕ್ಷಿಸಬೇಕು ಎಂದು ಕೋರಿದರು.

ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಅಧ್ಯಕ್ಷೆ ಅಕ್ಕಮ್ಮ, ಮುಖಮಡರಾದ ಎಸ್.ಬಿ. ಶಿವಶಂಕರ್, ಹನುಮಮ್ಮ, ಎಚ್.ಎಂ.ವೀಣಾ, ನಾಗರತ್ನಾ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರ ಸಂಘ ಶಿವಮೊಗ್ಗ ವಿಭಾಗೀಯ ಅಧ್ಯಕ್ಷ ರಾಜು ಚಿನ್ನಸ್ವಾಮಿ, ಎಸ್.ರವಿ, ಎಂ.ಎಸ್.ಕರಬಸಪ್ಪ, ಹನುಮಂತಪ್ಪ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.