ADVERTISEMENT

ಸೊರಬ: ರಾಜೀವ್ ನಗರ ವೃತ್ತಕ್ಕೆ ಪುನೀತ್ ಹೆಸರು ನಾಮಕರಣ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 8:39 IST
Last Updated 28 ನವೆಂಬರ್ 2021, 8:39 IST
ಸೊರಬದ ರಾಜೀವ್‌ ನಗರದ ವೃತ್ತಕ್ಕೆ ಅಪ್ಪು ಗೆಳೆಯರ ಬಳಗದಿಂದ ನಟ ‘ಪುನೀತ್ ರಾಜ್‌ಕುಮಾರ್ ವೃತ್ತ’ ಎಂದು ಹೆಸರಿಡಲಾಯಿತು.
ಸೊರಬದ ರಾಜೀವ್‌ ನಗರದ ವೃತ್ತಕ್ಕೆ ಅಪ್ಪು ಗೆಳೆಯರ ಬಳಗದಿಂದ ನಟ ‘ಪುನೀತ್ ರಾಜ್‌ಕುಮಾರ್ ವೃತ್ತ’ ಎಂದು ಹೆಸರಿಡಲಾಯಿತು.   

ಸೊರಬ: ಪಟ್ಟಣದ ರಾಜೀವ್‌ ನಗರದ ವೃತ್ತಕ್ಕೆ ಅಪ್ಪು ಗೆಳೆಯರ ಬಳಗದಿಂದ ‘ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್’ ವೃತ್ತ ಎಂದು ಶನಿವಾರ ನಾಮಕರಣ ಮಾಡಲಾಯಿತು.

ಅಪ್ಪುವಿನ ನೆನಪಿಗಾಗಿ ಸರ್ಕಲ್ ನಿರ್ಮಿಸಿ, ಯುವರತ್ನನ ಬ್ಯಾನರ್ ಹಾಕಿ ವೃತ್ತವನ್ನು ಮಕ್ಕಳಿಂದ ಉದ್ಘಾಟಿಸಿದ್ದು ವಿಶೇಷವಾಗಿತ್ತು.

ಪುನೀತ್ ರಾಜ್‌ಕುಮಾರ್‌ ಸ್ಮರಣಾರ್ಥ ಇಡೀ ಬಡಾವಣೆಗೆ ಅನ್ನಸಂತರ್ಪಣೆ ಮಾಡಲಾಯಿತು. ಕಿಚ್ಚ ಸುದೀಪ್ ಹಿನ್ನೆಲೆಯ ಧ್ವನಿ ನೀಡಿರುವ ಪುನೀತ್ ರಾಜ್‌ಕುಮಾರ್ ಅವರ ಜೀವನ ಪಯಣ ವಿವರಿಸುವ ಆಡಿಯೊ ನೆರೆದಿದ್ದ ಜನತೆಗೆ ಕಂಬನಿ ತರಿಸಿತು. ನಂತರ ಅಪ್ಪು ಹೆಸರಿನಲ್ಲಿ 25 ಯುವಕರು ರಕ್ತದಾನ ಮಾಡಿದರು. 27 ಯುವಕರು ಮತ್ತು ಯುವತಿಯರು ನೇತ್ರದಾನಕ್ಕೆ ಹೆಸರು ನೋಂದಾಯಿಸಿದರು.

ADVERTISEMENT

ಅಪ್ಪು ಗೆಳೆಯರ ಬಳಗದ ರಂಗನಾಥ ಮೊಗವೀರ್ ಮಾತನಾಡಿ, ‘ನಮ್ಮೆಲ್ಲರ ಪ್ರೀತಿಯ ಅಪ್ಪು ನಮ್ಮನ್ನಗಲಿ ಒಂದು ತಿಂಗಳಾಗುತ್ತಿದೆ. ಆದರೆ, ಅವರ ನೆನಪು ಚಿರಸ್ಮರಣೀಯವಾಗಿರಲಿ. ಮುಂದಿನ ಪೀಳಿಗೆಯು ಪುನೀತ್ ರಾಜ್‌ಕುಮಾರ್ ಅವರನ್ನು ನೆನಪಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ವೃತ್ತಕ್ಕೆ ಅವರ ಹೆಸರನ್ನು ನಾಮಕರಣ ಮಾಡಲಾಗುತ್ತಿದೆ. ಈ ವೇಳೆ ಯುವಕರು ಮತ್ತು ಯುವತಿಯರು ನೇತ್ರದಾನಕ್ಕೆ ಹೆಸರನ್ನು ನೋಂದಾಯಿಸಲು ಮುಂದೆ ಬರುತ್ತಿರುವುದು ಪ್ರಶಂಸನೀಯ’ ಎಂದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನಾಗರಾಜಗೌಡ ಚಿಕ್ಕಾವಲಿ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಪಿ. ಈರೇಶಗೌಡ, ಯುವ ಬ್ರಿಗೇಡ್ ತಾಲ್ಲೂಕು ಸಂಚಾಲಕ ಮಹೇಶ್ ಖಾರ್ವಿ, ಮಂಜು, ಅಪ್ಪು ಗೆಳೆಯರ ಬಳಗದ ಎಸ್.ವೈ. ಪ್ರಫುಲ್ಲ ಕುಮಾರ್, ಡಿ.ಸಚಿನ್, ಎಸ್.ವೈ. ಪ್ರಮೋದ್ ಕುಮಾರ್, ಕೆ.ಪಿ.ಸುಭಾಷ್, ಸುಭಾಷ್ ಆಚಾರ್, ನಾಗರಾಜ ಆಚಾರ್, ಡಿ.ಸಂದೀಪ್, ದೀಪಕ್, ಮಂಜುನಾಥ ಭಂಡಾರಿ, ಸಿ.ಆರ್.ರವಿಚಂದ್ರ, ವಿಶಾಲ್ ಆಚಾರ್, ಎಲ್.ನಾಗಭೂಷಣ, ಮಂಜುನಾಥ್ ಮಾಸ್ತರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.