ಕುಂಸಿ: ಸತತವಾಗಿ ಸುರಿಯುತ್ತಿರುವ ಮಳೆ ಶನಿವಾರ ಬಿಡುವು ನೀಡಿದ್ದರಿಂದ ಕುಂಸಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತರು ಕೃಷಿ ಕೆಲಸದಲ್ಲಿ ತೊಡಗಿದ್ದರು. ಆದರೆ ಸತತ ಮಳೆಯಿಂದಾಗಿ ಹಳ್ಳ, ಕೊಳ್ಳಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಕೆಲವೆಡೆ ಸೇತುವೆಗಳು ಜಲಾವೃತಗೊಂಡಿವೆ.
ಕುಂಸಿಯಿಂದ ರೆಚಿಕೊಪ್ಪ ಗ್ರಾಮಕ್ಕೆ ಹೋಗುವ ರಸ್ತೆಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಮೇಲೆಲ್ಲಾ ನೀರು ಹರಿಯುತ್ತಿದೆ. ಕುಂಸಿಯಿಂದ ರಚಿಕೊಪ್ಪ ಮಾರ್ಗವಾಗಿ ಹೊಸಳ್ಳಿ, ಮಂಡಘಟ್ಟ, ದ್ಯಾವಿನಕೆರೆ, ಮಡೆನೂರು, ಶೆಟ್ಟಿಕೆರೆ, ಶಾಂತಿಕೆರೆ, ಸೂಡೂರು ಗ್ರಾಮಗಳಿಗೆ ಹೋಗುವ ಜನರು ಪರ್ಯಾಯ ಮಾರ್ಗ ಬಳಸಿದರು.
ಶನಿವಾರ ಕುಂಸಿಯಲ್ಲಿ ಬೃಹತ್ ಮರವೊಂದು ಕೆಇಬಿ ವಸತಿ ಗೃಹಗಳ ಮೇಲೆ ಬಿದ್ದಿದ್ದು, ಮನೆ ಸಂಪೂರ್ಣ ಹಾನಿಯಾಗಿದೆ. ಎರಡು ವಿದ್ಯುತ್ ಕಂಬಗಳು ಮುರಿದುಬಿದ್ದಿದ್ದು, ಮೆಸ್ಕಾಂ ಸಿಬ್ಬಂದಿ ಸರಿಪಡಿಸಿದರು. ಸಮೀಪದ ಕೊರಗಿ ಕ್ರಾಸ್ ಬಳಿ ಕಂಬ ಮುರಿದಿದೆ. ಸನ್ನಿವಾಸ ಗ್ರಾಮದಲ್ಲಿಯೂ ನಾಲ್ಕು ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. ಜೋರಾದ ಮಳೆ ಹಾಗೂ ಗಾಳಿಗೆ ಸುತ್ತಮುತ್ತಲಿನ ಗ್ರಾಮಗಳ ವಿದ್ಯುತ್ ಕಂಬಗಳು ಮುರಿದು ಬೀಳುತ್ತಿವೆ. ಕರೆ ಮಾಡಿದ ತಕ್ಷಣ ಸಿಬ್ಬಂದಿ ಸ್ಪಂದಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಶಿವಮೊಗ್ಗದಿಂದ ಸಾಗರ ಹೋಗುವ ತುಪ್ಪೂರಿನ ರಾಷ್ಟ್ರೀಯ ಹೆದ್ದಾರಿ ಬಳಿ ಬೃಹತ್ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು ತಕ್ಷಣವೇ ಮೆಸ್ಕಾಂ ಸಿಬ್ಬಂದಿ ಹಾಗೂ ಊರಿನ ಜನರು ಮರ ತೆರವುಗೊಳಿಸಿದರು. ಕೋಣೆಹೊಸೂರಿನ ರಾಷ್ಟ್ರೀಯ ಹೆದ್ದಾರಿ ಬಳಿಯೂ ಬೃಹತ್ ಮರ ಬಿದ್ದಿತ್ತು. ಸುತ್ತಮುತ್ತಲಿನ ಹಳ್ಳಿಗಳಲ್ಲಿಯೂ ಮರಗಳು ನೆಲಕಚ್ಚುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.