ADVERTISEMENT

ನಿರಂತರ ಮಳೆ; ಜನಜೀವನ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 5:05 IST
Last Updated 18 ಜೂನ್ 2021, 5:05 IST
ಶಿವಮೊಗ್ಗ ನಗರ ಪಾಲಿಕೆ ಮುಂದಿನ ರಸ್ತೆಯಲ್ಲಿ ನೀರು ನಿಂತು ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ
ಶಿವಮೊಗ್ಗ ನಗರ ಪಾಲಿಕೆ ಮುಂದಿನ ರಸ್ತೆಯಲ್ಲಿ ನೀರು ನಿಂತು ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ   

ಶಿವಮೊಗ್ಗ: ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ನಗರಪಾಲಿಕೆ ವ್ಯಾಪ್ತಿಯ ಹಲವು ಬಡಾವಣೆಗಳ ರಸ್ತೆಗಳ ಮೇಲೆ ನೀರು ಹರಿಯುತ್ತಿದೆ. ಇದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಮಹಾನಗರ ಪಾಲಿಕೆ ಎದುರಿನ ರಸ್ತೆ ಸೇರಿ ಹಲವೆಡೆ ಮಳೆ ನೀರು ಚರಂಡಿ ಮೂಲಕ ಹರಿದುಹೋಗಲು ಸಾಧ್ಯವಾಗದೆ ರಸ್ತೆಗಳಲ್ಲೇ ನೀರು ಹಳ್ಳದಂತೆ ಹರಿಯುತ್ತಿತ್ತು. ರಾಜಕಾಲುವೆಗಳಲ್ಲೂ ನೀರು ಸರಾಗವಾಗಿ ಹರಿಯದೇ ಸಮಸ್ಯೆ ಎದುರಾಗಿತ್ತು. ಸ್ಮಾರ್ಟ್‌ ಸಿಟಿ ಕಾಮಗಾರಿಗೆ ಹಲವೆಡೆ ಗುಂಡಿ ಅಗೆದು ಬಿಟ್ಟಿರುವ ಪರಿಣಾಮ ಗುಂಡಿಗಳಲ್ಲಿ ನೀರು ತುಂಬಿಕೊಂಡು ಅಪಘಾತಗಳಾಗುತ್ತಿವೆ. ಗೋಪಾಳ ಬಡಾವಣೆಯ ಗುತ್ಯಪ್ಪ ಕಾಲೊನಿ ಬಳಿ ಗುರುವಾರ ತ್ರಿಚಕ್ರ ವಾಹನದಿಂದ ಬಿದ್ದು ಅಂಗವಿಕಲರೊಬ್ಬರು ಗಂಭೀರ ಗಾಯಗೊಂಡಿದ್ದಾರೆ. ನಿತ್ಯವೂ ಹಲವು ಬಡಾವಣೆಗಳಲ್ಲಿ ಇಂತಹ ಸಮಸ್ಯೆ ಎದುರಾಗುತ್ತಿವೆ.

ಮೇಯರ್ ಸುನೀತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ ಅವರು ಪಾಲಿಕೆ ಸದಸ್ಯರು, ಅಧಿಕಾರಿಗಳ ಜತೆ ಹಲವು ಬಡಾವಣೆಗಳಿಗೆ ಭೇಟಿ ನೀಡಿ ರಾಜಕಾಲುವೆಗಳ ಸ್ಥಿತಿಗತಿ ಪರಿ ಶೀಲಿಸಿದರು. ನೀರು ಸರಾಗವಾಗಿ ಹರಿದು ಹೋಗಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.