ADVERTISEMENT

ಲಿಂಗನಮಕ್ಕಿ ಜಲಾಶಯ: 10,000 ಕ್ಯುಸೆಕ್ ನೀರು ಬಿಡುಗಡೆ

ಜೋಗ ಜಲಪಾತದಲ್ಲಿ ಮೈದಳೆದಿದೆ ದೃಶ್ಯ ವೈಭವ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 15:32 IST
Last Updated 1 ಆಗಸ್ಟ್ 2024, 15:32 IST
<div class="paragraphs"><p>ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಕಾರ್ಗಲ್‌ನ ಲಿಂಗನಮಕ್ಕಿ ಜಲಾಶಯದ 3 ಕ್ರಸ್ಟ್‌ಗೇಟ್‌ಗಳನ್ನು ತೆರದು ಗುರುವಾರ ಶರಾವತಿ ನದಿಗೆ ನೀರು ಹರಿಸಲಾಯಿತು</p></div>

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಕಾರ್ಗಲ್‌ನ ಲಿಂಗನಮಕ್ಕಿ ಜಲಾಶಯದ 3 ಕ್ರಸ್ಟ್‌ಗೇಟ್‌ಗಳನ್ನು ತೆರದು ಗುರುವಾರ ಶರಾವತಿ ನದಿಗೆ ನೀರು ಹರಿಸಲಾಯಿತು

   

ಪ್ರಜಾವಾಣಿ ಚಿತ್ರ: ಶಿವಮೊಗ್ಗ ನಾಗರಾಜ್

ಶಿವಮೊಗ್ಗ: ಮಲೆನಾಡಿನಲ್ಲಿ ಗುರುವಾರ ಮಳೆಯ ಆರ್ಭಟ ಕೊಂಚ ಕಡಿಮೆಯಾಗಿದೆ. ತುಂಗಾ, ಭದ್ರಾ, ವರದಾ, ಶರಾವತಿ ನದಿಗಳು ಇನ್ನೂ ಅಪಾಯದ ಹಂತ ಮೀರಿ ಹರಿಯುತ್ತಿವೆ. ಲಿಂಗನಮಕ್ಕಿ ಜಲಾಶಯ ಭರ್ತಿ ಆಗುವ ಹಂತ ತಲುಪಿದ್ದು, ನದಿಗೆ 10,000 ಕ್ಯುಸೆಕ್ ನೀರು ಹರಿಸಲಾಯಿತು.

ADVERTISEMENT

ಜಲಾಶಯದ 11 ಕ್ರಸ್ಟ್‌ ಗೇಟ್ ಗಳ ಪೈಕಿ ಮೂರು ಗೇಟ್ ತೆಗೆದು ನೀರು ಹರಿಸಿದ್ದು, ಜೋಗ ಜಲಪಾತದಲ್ಲಿ ದೃಶ್ಯ ವೈಭವ ಸೃಷ್ಟಿಯಾಗಿದೆ. ಜೋಗದ ಸಿರಿಯನ್ನು ಕಣ್ತುಂಬಿಕೊಳ್ಳಲು ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ.

ಶರಾವತಿ ಜಲಾನಯನ ಪ್ರದೇಶದ ಮಾಸ್ತಿಕಟ್ಟೆಯಲ್ಲಿ ಗುರುವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಅತಿಹೆಚ್ಚು 17.1 ಸೆಂ.ಮೀ ಮಳೆ ದಾಖಲಾಗಿದೆ. ಮಾಸ್ತಿಕಟ್ಟೆಯಲ್ಲಿ 16 ಸೆಂ.ಮೀ, ಯಡೂರಿನಲ್ಲಿ 12.30, ಮಾಣಿಯಲ್ಲಿ 10 ಸೆಂ.ಮೀ ಮಳೆ ಸುರಿದಿದೆ.

ಭದ್ರಾವತಿ ಹಾಗೂ ಹೊಳೆಹೊನ್ನೂರು ಸುತ್ತಲೂ ಭದ್ರಾ ನದಿಯ ಪ್ರವಾಹ ಸ್ಥಿತಿ ಇದೆ. ಭದ್ರಾವತಿಯಲ್ಲಿ ನೀರು ನುಗ್ಗಿದ ತಗ್ಗು ಪ್ರದೇಶದ 60ಕ್ಕೂ ಹೆಚ್ಚು ಕುಟುಂಬಗಳನ್ಬು ಸ್ಥಳಾಂತರಿಸಲಾಗಿದೆ.

ಹರಿಹರಕ್ಕೆ ನುಗ್ಗಿದ ನೀರು:

ದಾವಣಗೆರೆ ವರದಿ: ತುಂಗಾ ಮತ್ತು ಭದ್ರಾ ಜಲಾಶಯದಿಂದ ಅಪಾರ ಪ್ರಮಾಣದ ನೀರು ಹೊರಬಿಟ್ಟಿರುವುದರಿಂದ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ತುಂಗಭದ್ರಾ ನದಿ, ಹರಿಹರದ ಗಂಗಾನಗರಕ್ಕೆ ನುಗ್ಗಿದೆ. ಇಟ್ಟಿಗೆ ಬಟ್ಟಿ, ಕೃಷಿ ಭೂಮಿ ಜಲಾವೃತಗೊಂಡಿದ್ದು, ಉಕ್ಕಡಗಾತ್ರಿ ದೇಗುಲದ ಆವರಣ ಮುಳುಗಡೆಯಾಗಿದೆ.

ತುಂಗಾಭದ್ರಾ ನದಿಯಲ್ಲಿ 1.40 ಲಕ್ಷ ಕ್ಯುಸೆಕ್‌ ನೀರು ಹರಿಯುತ್ತಿದೆ. ಹರಿಹರದ ಗಂಗಾನಗರದ 23 ಮನೆಗಳಿಗೆ ಗುರುವಾರ ಬೆಳಿಗ್ಗೆ ನೀರು ನುಗ್ಗಿದೆ. ಪ್ರವಾಹ ಪರಿಸ್ಥಿತಿಯಿಂದ ಬೇಸತ್ತಿರುವ ಸ್ಥಳೀಯರು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಳ್ಳಲು ನಿರಾಕರಿಸಿದ್ದರು. ನದಿ ನೀರಿನ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಅರಿತ ಅಧಿಕಾರಿಗಳು, ಸಂತ್ರಸ್ತರ ಮನವೊಲಿಸಿದರು.

ನ್ಯಾಮತಿ, ಹೊನ್ನಾಳಿ ಹಾಗೂ ಹರಿಹರ ತಾಲ್ಲೂಕಿನ ತುಂಗಭದ್ರಾ ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿದೆ. ಭತ್ತ ನಾಟಿ ಮಾಡಲು ಸಜ್ಜಾಗಿದ್ದ ರೈತರು ಸಮಸ್ಯೆಗೆ ಸಿಲುಕಿದ್ದಾರೆ. ಮೆಕ್ಕೆಜೋಳ, ಅಡಿಕೆ, ತೆಂಗಿನ ತೋಟಗಳು ಜಲಾವೃತಗೊಂಡಿವೆ. ಹೊನ್ನಾಳಿ ಪಟ್ಟಣದಲ್ಲಿ ನಿರಾಶ್ರಿತರಾಗಿರುವ ಕುಟುಂಬಗಳಿಗೆ ಕಾಳಜಿ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.