ಶಿವಮೊಗ್ಗ: ಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸಬಾರದು ಎಂದು ರೈತ ಸಂಘದ ಹಿರಿಯ ಮುಖಂಡ ಕೆ.ಟಿ.ಗಂಗಾಧರ್ ಆಗ್ರಹಿಸಿದರು.
ನದಿಗೆ6ಟಿಎಂಸಿ ನೀರು ಹರಿಸುವ ಪ್ರಯತ್ನಸರ್ಕಾರ ಕೈಬಿಡಬೇಕು. ಮುಂಗಾರು ಹಂಗಾಮಿನಲ್ಲಿ ತಡವಾಗಿ ಸುರಿದ ಮಳೆಗೆಭದ್ರಾ ಜಲಾಶಯ ಭರ್ತಿಯಾಗಿತ್ತು. ಜಲಾಶಯ ತುಂಬಿದ ನಂತರ ಅಚ್ಚುಕಟ್ಟು ಪ್ರದೇಶದ ರೈತರು ಭತ್ತ ಬೆಳೆದಿದ್ದಾರೆ. ನದಿಗೆ ನೀರು ಹರಿಸಿದರೆ ಮುಂದೆ ನೀರಿನ ಕೊರತೆಯಾಗುತ್ತದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.
ಭದ್ರಾ ಜಲಾಶಯದಲ್ಲಿ ಪ್ರಸ್ತುತ 53.090ಟಿಎಂಸಿ ಅಡಿನೀರು ಲಭ್ಯವಿದೆ.ಬೇಸಿಗೆ ಹಂಗಾಮಿಗೆ ಎಡ ಮತ್ತು ಬಲನಾಲೆಗಳಿಗೆ ಹರಿಸುವ ನೀರಿನ ಪ್ರಮಾಣ 29 ಟಿಎಂಸಿ ಅಡಿ. ತರೀಕೆರೆ, ಭದ್ರಾವತಿ, ಹರಿಹರ, ರಾಣೆಬೆನ್ನೂರು, ಗದಗನಗರಗಳಿಗೆ ಕುಡಿಯುವ ನೀರು ಮತ್ತು ಕೈಗಾರಿಕಾ ಪ್ರದೇಶಗಳಿಗೆ 7.048 ಟಿಎಂಸಿ ಅಡಿ ನೀರುಮೀಸಲಿಡಬೇಕು.ಭೂಮಿಯಲ್ಲಿ ಇಂಗುವ ನೀರಿನ ಪ್ರಮಾಣ ಸುಮಾರು 1.389 ಟಿಎಂಸಿ ಅಡಿ. ಡೆಡ್ ಸ್ಟೋರೇಜ್ 13.830 ಟಿಎಂಸಿ ಅಡಿ. ಹಾಗಾಗಿ, ಬೇಸಿಗೆ ಆರಂಭಕ್ಕೆ ಮೊದಲೇ ನದಿಗೆ ನೀರು ಹರಿಸುವುದು ಸರಿಯಾದ ನಿರ್ಧಾರವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಲಾಶಯದ ನೀರನ್ನೇ ಕುಡಿಯಲು ನೆಚ್ಚಿಕೊಂಡಿರುವ ನಗರಗಳಿಗೆ ಬೇಸಿಗೆಯ ಕೊನೆಯ ದಿನಗಳಲ್ಲಿ ತೊಂದರೆಯಾಗುತ್ತದೆ. ಜಲಾಶಯದಲ್ಲಿನ ನೀರು ಪೋಲಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೇಂದ್ರ, ರಾಜ್ಯ ಸರ್ಕಾರ ರೈತರ ಸಾಲಮನ್ನಾ ಮಾಡುತ್ತದೆ ಎಂದು ರೈತರು ಸಾಲ ಮರುಪಾವತಿಸಿಲ್ಲ. ಮುಖ್ಯಮಂತ್ರಿ ಬಜೆಟ್ನಲ್ಲಿ ಹಣ ನೀಡಬೇಕು. ಋಣಮುಕ್ತ ಕಾಯ್ದೆ ಜಾರಿಯ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಯಶವಂತರಾವ್ ಘೋರ್ಪಡೆ, ಡಿ.ವಿ.ವೀರೇಶ್, ಹಿರಿಯಣ್ಣಯ್ಯ, ಎಂ.ಮೋಹನ್ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.