ADVERTISEMENT

ರಾಮಚಂದ್ರಾಪುರ ಮಠ: ರಾಮೋತ್ಸವ ರದ್ದು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 14:19 IST
Last Updated 1 ಏಪ್ರಿಲ್ 2020, 14:19 IST

ಹೊಸನಗರ: ಕೊರೊನಾ ಭೀತಿಯಿಂದ ರಾಜ್ಯ ಸರ್ಕಾರ ಜಾತ್ರೆಗಳನ್ನು ನಡೆಸದಂತೆ ನಿಷೇಧ ಹೇರಿದ್ದರಿಂದ ತಾಲ್ಲೂಕಿನ ರಾಮಚಂದ್ರಾಪುರ ಮಠದದಲ್ಲಿ ರಾಮನವಮಿ ನಿಮಿತ್ತ ಏ.2ರಂದು ನಡೆಯಬೇಕಿದ್ದ ರಾಮೋತ್ಸವ ರದ್ದಾಗಿದೆ.

ಮೂರು ದಿನಗಳ ರಾಮೋತ್ಸವದಲ್ಲಿ ರಾಜ್ಯದ ನಾನಾ ಕಡೆಗಳಿಂದ ಭಕ್ತರು ಹಾಜರಿರುತ್ತಿದ್ದರು. ರಾಮೋತ್ಸವ, ಮಹಾ ರಥೋತ್ಸವ, ಅದ್ದೂರಿಯಾಗಿ ಶ್ರೀರಾಮನ ಗುಣಗಾನ ಮಾಡುವ ಹಬ್ಬದಂತೆ ನಡೆಸಲು ಮಠ ಅಣಿಯಾಗಿತ್ತು. ರಾಮ ನವಮಿಗೆ ಎರಡು ದಿನ ಮುನ್ನವೇ ರಾಮೋತ್ಸವ ಆರಂಭವಾಗುವುದು ವಾಡಿಕೆ. ರಾಮ ತಾರಕ ಯಾಗ, ಶ್ರೀರಾಮ ಪಟ್ಟಾಭೀಷೇಕ, ಸೀತಾ ಕಲ್ಯಾಣ, ರಾವಣ ದಹನ, ಅಖಂಡ ಭಜನೆ ಮತ್ತಿತರ ಕಾರ್ಯಕ್ರಮ ನಡೆಯುವುದು ಇಲ್ಲಿನ ವಿಶೇಷ. ಆದರೆ ಈ ಎಲ್ಲ ಸಮಾರಂಭಕ್ಕೂ ಕೊರೊನಾ ಕರಿ ನೆರಳು ಬೀರಿದ್ದರಿಂದ ಮಠದ ಪೀಠಾಧಿಪತಿ ರಾಘವೇಶ್ವರ ಭಾರತೀ ಸ್ವಾಮೀಜಿ ರಾಮೋತ್ಸವವನ್ನು ನಡೆಸದೆ ಇರಲು ತೀರ್ಮಾನಿಸಿದ್ದಾರೆ.

‘ಶ್ರೀಮಠದಲ್ಲಿ ಎಂದಿನಂತೆ ಪೂಜೆ ಮಾತ್ರ ನಡೆಯಲಿದೆ. ಸದ್ಯದ ಪರಿಸ್ಥಿತಿ ತಿಳಿಗೊಂಡ ನಂತರ ರಾಮೋತ್ಸವ ನಡೆಸಲು ಚಿಂತಿಸಲಾಗುವುದು’ ಎಂದು ರಾಮೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಚಿತ್ತಾರ ಮುರಳಿಧರ್ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.