ADVERTISEMENT

ಶಿವಮೊಗ್ಗ: ರಂಗದಸರಾ ಆಚರಣೆ 27ರಿಂದ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 3:05 IST
Last Updated 20 ಸೆಪ್ಟೆಂಬರ್ 2022, 3:05 IST

ಶಿವಮೊಗ್ಗ: ಮಹಾನಗರ ಪಾಲಿಕೆ ವತಿಯಿಂದ ಆಚರಿಸುವ ದಸರಾ 2022 ಅಂಗವಾಗಿ ರಂಗದಸರಾ ಸೆ. 27 ರಿಂದ ಅ. 1 ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ರಂಗದಸರಾ ಸಮಿತಿ ಅಧ್ಯಕ್ಷ ಚನ್ನಬಸಪ್ಪ ಹೇಳಿದ್ದಾರೆ.

‘ಈ ಬಾರಿಯ ರಂಗದಸರಾದಲ್ಲಿ ರಂಗಕಲೆಗಳ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ, ರಂಗ ಸಮಾಗಮ, ಮೂಕಾಭಿನಯ ಸ್ಪರ್ಧೆ, ರಂಗತುಣಕು, ಜಿಲ್ಲಾ ಮಟ್ಟದ ಏಕಪಾತ್ರಾಭಿನಯ ಸ್ಪರ್ಧೆ, ರಾಜ್ಯಮಟ್ಟದ ಹಾಸ್ಯನಾಟಕ ಸ್ಪರ್ಧೆ, ರಾಜ್ಯಮಟ್ಟದ ಹಾಸ್ಯ ನಾಟಕ ರಚನಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ’ ಎಂದುನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೆ. 27ರಂದು ಬೆಳಿಗ್ಗೆ 10.30ಕ್ಕೆ ಮಹಾನಗರ ಪಾಲಿಕೆಯಲ್ಲಿ ರಂಗಕರ್ಮಿ ಹಾಲೇಶ್ ಅವರು ರಂಗ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ. 11.30ಕ್ಕೆ ರಂಗಕರ್ಮಿ ಡಾ.ಗಜಾನನ ಶರ್ಮಾ ಅವರು ಕುವೆಂಪು ರಂಗಮಂದಿರದಲ್ಲಿ ರಂಗ ದಸರಾ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಜಿಲ್ಲಾ ಮಟ್ಟದ ರಂಗ ಸಮಾಗಮ, ರಂಗ ಕಲಾವಿದರ ಗೋಷ್ಠಿ, ಮಧ್ಯಾಹ್ನ 2.30ಕ್ಕೆ ಜಿಲ್ಲಾಮಟ್ಟದ ಮೂಕಾಭಿನಯ ಸ್ಪರ್ಧೆಗೆ ರಂಗ ನಿರ್ದೇಶಕ ಕಾಂತೇಶ್ ಕದರಮಂಡಲಗಿ ಚಾಲನೆ ನೀಡಲಿದ್ದಾರೆ. ಸಂಜೆ 6.30ಕ್ಕೆ ರಂಗ ತುಣಕು ಕಾರ್ಯಕ್ರಮಕ್ಕೆ ರಂಗಕರ್ಮಿ ರೇಣುಕಪ್ಪ ಚಾಲನೆ ನೀಡಲಿದ್ದಾರೆ ಎಂದರು.

ADVERTISEMENT

ಸೆ. 28ರಂದು ಬೆಳಿಗ್ಗೆ 10.30ಕ್ಕೆ ಸರ್ಕಾರಿ ನೌಕರರ ಭವನದಲ್ಲಿ ಜಿಲ್ಲಾ ಮಟ್ಟದ ಏಕಪಾತ್ರಾಭಿನಯ ಸ್ಪರ್ಧೆ (ಶಾಲಾ, ಕಾಲೇಜು ಮತ್ತು ಸಾರ್ವಜನಿಕ ವಿಭಾಗಗಳಲ್ಲಿ) ನಡೆಯಲಿದ್ದು, ಅಂದು ಸಂಜೆ 5ಕ್ಕೆ ಕುವೆಂಪು ರಂಗಮಂದಿರದಲ್ಲಿ ರಾಜ್ಯಮಟ್ಟದ ಹಾಸ್ಯನಾಟಕ ಸ್ಪರ್ಧೆ ನಡೆಯಲಿದೆ.

ಸೆ. 29ರಂದು ಸಂಜೆ 5ಕ್ಕೆ ರಾಜ್ಯಮಟ್ಟದ ಹಾಸ್ಯ ನಾಟಕ ಸ್ಪರ್ಧೆ ನಡೆಯಲಿದೆ. ಸೆ. 30ರಂದು ಕುವೆಂಪು ರಂಗಮಂದಿರದಲ್ಲಿ ಸಂಜೆ 5 ಗಂಟೆಗೆ ರಾಜ್ಯಮಟ್ಟದ ಹಾಸ್ಯನಾಟಕ ಸ್ಪರ್ಧೆ ಹಾಗೂ ರಾಜ್ಯಮಟ್ಟದ ಹಾಸ್ಯ ನಾಟಕ ರಚನಾ ಸ್ಪರ್ಧೆ ನಡೆಯಲಿದೆ.

ಅ. 1ರಂದು ಬೆಳಿಗ್ಗೆ 10ಕ್ಕೆ ಕುವೆಂಪು ರಂಗಮಂದಿರದಲ್ಲಿ ಮಕ್ಕಳ ರಂಗೋತ್ಸವ ನಡೆಯಲಿದ್ದು, ಸರ್ಕಾರಿ ಶಾಲಾ ಮಕ್ಕಳಿಂದ ಐದು ನಾಟಕ ಪ್ರದರ್ಶನ ನಡೆಯಲಿದೆ. ಅಂದು ಸಂಜೆ 5ರಿಂದ ಕುವೆಂಪು ರಂಗಮಂದಿರದಲ್ಲಿ ರಂಗದಸರಾ ಸಮಾರೋಪ ಸಮಾರಂಭ ನಡೆಯಲಿದೆ.

ಸೆ. 28ರಂದು ರಂಗಬೆಳಕು ತಂಡದಿಂದ ವಿನೋಬನಗರ ಪಿ ಅಂಡ್ ಟಿ ಕಾಲೊನಿಯಲ್ಲಿ, ಸೆ. 29ರಂದು ಸಹ್ಯಾದ್ರಿ ಕಲಾತಂಡದಿಂದ ಇಸ್ಲಾಪುರ ನಾಗಚೌಡೇಶ್ವರಿ ದೇವಾಲಯದಲ್ಲಿ, ಸೆ. 30ರಂದು ನಮ್ ಟೀಂ ವತಿಯಿಂದ ರಾಜೇಂದ್ರ ನಗರ ಪಾರ್ಕ್ ನಲ್ಲಿ, ಅ. 1ರಂದು ಚೆಲುವರಂಗ ತಂಡದಿಂದ ಕೋಟೆ ಬಯಲು ರಂಗಮಂದಿರದಲ್ಲಿ ರಂಗಗೀತೆ ಗಾಯನ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಂಗದಸರಾ ಸಮಿತಿ ಸದಸ್ಯರಾದ ಆರ್.ಸಿ. ನಾಯಕ್, ಪ್ರಭಾಕರ್, ಎಚ್. ಮೂರ್ತಿ, ಶಿರೀಶ್, ಎಂಜಿನಿಯರ್ ಮಧು ಇದ್ದರು.

ಹಾಸ್ಯ ನಾಟಕ: ಸಾವಿರ ನಾಟಕ ಮುದ್ರಣ

ಹಾಸ್ಯನಾಟಕ ರಚನಾ ಸ್ಪರ್ಧೆಯಲ್ಲಿ ವಿಜೇತರಿಗೆ ಒಂದು ತಿಂಗಳ ನಂತರ ಬಹುಮಾನ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳ
ಲಾಗುವುದು.

ಹಾಸ್ಯ ನಾಟಕದ ರಚನೆ ಪುಸ್ತಕ ರೂಪದಲ್ಲಿ ಒಂದು ಸಾವಿರ ಪ್ರತಿ ಮುದ್ರಿಸಿ ನೀಡಲು ರಂಗಾಯಣ ನಿರ್ದೇಶಕರು ಮುಂದೆ ಬಂದಿದ್ದಾರೆ. ಸಾವಿರಕ್ಕೂ ಹೆಚ್ಚು ಮಕ್ಕಳು ರಂಗದಸರಾದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಚನ್ನಬಸಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.