
ತೀರ್ಥಹಳ್ಳಿ: ‘ವೈದ್ಯಕೀಯ ಕ್ಷೇತ್ರ ವಿಸ್ತಾರವಾಗಿ ಬೆಳೆದಿದೆ. ಅನಾರೋಗ್ಯ ಉಂಟಾಗದಂತೆ ತಡೆಯಲು ವೈದ್ಯ ಸಾಹಿತ್ಯದ ಓದು ಜೀವನದಲ್ಲಿ ಸೂಕ್ಷ್ಮತೆ ಬೆಳೆಸುತ್ತದೆ’ ಎಂದು ನಿವೃತ್ತ ಪ್ರಾಧ್ಯಾಪಕ ಸಣ್ಣರಾಮ ಹೇಳಿದರು.
ಇಲ್ಲಿನ ಸಾಹಿತ್ಯಾಸಕ್ತ ಬಳಗ ಭಾನುವಾರ ಆಯೋಜಿಸಿದ್ದ ಲೇಖಕಿ ಗಾಯತ್ರಿ ಶೇಷಗಿರಿ ಅವರು ರಚಿಸಿರುವ ‘ಜೋಪಾನ ಸಖೀ ಜೋಪಾನ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಪುಸ್ತಕದಲ್ಲಿ ಸ್ತನ ಕ್ಯಾನ್ಸರ್ ಕುರಿತ ಅನೇಕ ಮಹತ್ವದ ಸಂಗತಿ ದಾಖಲಾಗಿವೆ. ರೋಗಕ್ಕೆ ಒಳಗಾದ ಮಹಿಳೆಯರ ನೋವಿನ ಅನುಭವ ದಾಖಲಾಗಿದೆ. ಮನಸ್ಸನ್ನು ಹಗುರಗೊಳಿಸುವ ಶಕ್ತಿ ಪುಸ್ತಕಕ್ಕಿದೆ’ ಎಂದರು.
‘ದೇಹದಲ್ಲಿ ಸೃಷ್ಟಿಯಾಗುವ ಗಂಟು, ಗಡ್ಡೆಗಳನ್ನು ನಿರ್ಲಕ್ಷ್ಯ ಮಾಡಬಾರದು. ಮಹಿಳೆಯರು ಪ್ರತಿ ತಿಂಗಳು ಸ್ತನವನ್ನು ಗಮನಿಸುತ್ತಿರಬೇಕು. ಬೊಜ್ಜು ಹೆಚ್ಚಾಗದಂತೆ ಆರೋಗ್ಯ ಕಾಪಾಡಿಕೊಳ್ಳಬೇಕು. ನಿತ್ಯ ಅರ್ಧಗಂಟೆ ವ್ಯಾಯಾಮ ಮಾಡಬೇಕು. ಕ್ರಮಬದ್ಧ ಬದುಕು ಕ್ಯಾನ್ಸರ್ ಮಾತ್ರವಲ್ಲ ಎಲ್ಲಾ ಕಾಯಿಲೆಗಳನ್ನು ದೂರ ಮಾಡುತ್ತದೆ’ ಎಂದು ಮೆಡಿಕಲ್ ಅಂಕಾಲಜಿಸ್ಟ್ ಡಾ.ಅಪರ್ಣಾ ಶ್ರೀವತ್ಸ ಮಾಹಿತಿ ನೀಡಿದರು.
ನಿವೃತ್ತ ಪ್ರಾಚಾರ್ಯ ಬಿ.ಗಣವತಿ ಉತ್ತುಂಗ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ, ಲೇಖಕಿ ಗಾಯತ್ರಿ ಶೇಷಗಿರಿ ಮಾತನಾಡಿದರು.
ಪ್ರಸನ್ನ ತಿರಳೇಬೈಲು ಸ್ವಾಗತಿಸಿದರು. ಸೌಳಿ ನಾಗರಾಜ್ ವಂದಿಸಿದರು. ಶಿಲ್ಪಾ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.