ಸೊರಬ: ಮನುಷ್ಯನ ಬದುಕಿಗೆ ಧರ್ಮಾಚರಣೆ ಮುಖ್ಯವಾಗಿದ್ದು, ಅರಿವು ಆದರ್ಶಗಳಿಂದ ಬದುಕು ಹಸನು ಮಾಡಿಕೊಳ್ಳುವ ಅಗತ್ಯವಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಮಠದ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.
ಶನಿವಾರ ತಾಲ್ಲೂಕಿನ ದುಗ್ಲಿ ಮಠದಲ್ಲಿ ಹಮ್ಮಿಕೊಂಡಿದ್ದ ರೇವಣಸಿದ್ದೇಶ್ವರ ರಥೋತ್ಸವ ಹಾಗೂ 47ನೇ ವರ್ಷದ ವಾರ್ಷಿಕೋತ್ಸವ ಮತ್ತು ಧರ್ಮಸಭೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಕೃತಿಯಲ್ಲಿ ಸೂರ್ಯ,ಚಂದ್ರರ ಉಗಮ ಎಷ್ಟು ಮುಖ್ಯವೊ ಹಾಗೆಯೇ ಮನುಷ್ಯನ ಆಚಾರ, ವಿಚಾರಗಳ ವಿಷಯದಲ್ಲೂ ಧರ್ಮ ಮುಖ್ಯವಾಗುತ್ತದೆ. ರೇಣುಕಾಚಾರ್ಯರು ಯುಗಪುರುಷರಾಗಿ ಧರ್ಮ ಕೇಂದ್ರಿತ ವಿಚಾರಗಳನ್ನು ಬಿತ್ತಿ ಮನುಷ್ಯನ ಉದ್ಧಾರಕ್ಕಾಗಿ ಶ್ರಮಿಸಿದ್ದಾರೆ ಎಂದರು.
ಪರಧರ್ಮ ಸಹಿಷ್ಣುತೆ ಎಲ್ಲ ಧರ್ಮಿಯರಲ್ಲೂ ಅವಶ್ಯಕ ಗುಣವಾಗಿ ಅಳವಡಿಸಿಕೊಳ್ಳಬೇಕು. ಸಾಮರಸ್ಯದಿಂದ ಬದುಕಿ ಬಾಳಿದಾಗ ಮಾನವೀಯತೆ ಉಳಿದು ಧರ್ಮ ಉತ್ತುಂಗಕ್ಕೆ ಏರಲಿದೆ. ಕೊಲ್ಲುವ ಸಂಸ್ಕೃತಿಗಿಂತ ಹರಸಿ ಪ್ರೀತಿಸುವ ಸಂಸ್ಕಾರವೆ ಮನುಷ್ಯನನ್ನು ಜೀವಂತವಾಗಿಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸಾಧು, ಸಂತರು ದೇಶದ ಸಂಸ್ಕೃತಿ ಉಳಿವಿಗೆ ಹೋರಾಡುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.
12ನೇ ಶತಮಾನದ ಶಿವ ಶರಣರು ವೈಚಾರಿಕ ಚಿಂತನೆಗಳನ್ನು ಬಿತ್ತುವ ಮೂಲಕ ಸಮ ಸಮಾಜದ ಕನಸು ಕಂಡಿದ್ದರು. ದಾರ್ಶನಿಕರ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಇನ್ನೊಬ್ಬರಿಗೆ ಅನ್ಯಾಯ ಮಾಡಿದಂತೆ ಬದುಕುವುದೆ ಧರ್ಮವಾಗಬೇಕು ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಜು ತಲ್ಲೂರು, ಡಾ.ಜ್ಞಾನೇಶ್, ಸರಿತಾ, ಮಂಜುನಾಥ ಸಿ.ಎಚ್., ಚಂದ್ರಪ, ರೂಪಾ, ಬಸವರಾಜಪ್ಪ ಭಾರಂಗಿ, ಗುರುಪ್ರಸನ್ನಗೌಡ, ಅರುಣಕುಮಾರ, ದೇಸಾಯಿ ಶಂಕ್ರಪ್ಪಗೌಡ, ಟಿ.ಜಿ.ನಾಡಿಗೇರ್, ದ್ಯಾಮಣ್ಣ ದೊಡ್ಡಮನಿ, ಪ್ರದೀಪಗೌಡ, ಪ್ರಶಾಂತಗೌಡ, ಹನುಮಂತಪ್ಪ ಮಡ್ಲೂರ, ಡಾ.ಪ್ರಭು ಸಾಹುಕಾರ್, ಡಾ.ಗುರುಪಾದಯ್ಯ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.