ADVERTISEMENT

ತೀರ್ಥಹಳ್ಳಿ ರಸ್ತೆ ಅಭಿವೃದ್ಧಿ: ನಿಯಮ ಅಡ್ಡಿ ಆತಂಕ

ತೀರ್ಥಹಳ್ಳಿ-ಶೃಂಗೇರಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಚಾಲನೆ

ಶಿವಾನಂದ ಕರ್ಕಿ
Published 27 ನವೆಂಬರ್ 2020, 19:30 IST
Last Updated 27 ನವೆಂಬರ್ 2020, 19:30 IST
ತೀರ್ಥಹಳ್ಳಿ ಪಟ್ಟಣದ ಕೊಪ್ಪ ವೃತ್ತದಿಂದ ಶೃಂಗೇರಿವರೆಗಿನ ರಾಷ್ಟ್ರೀಯ ಹೆದ್ದಾರಿ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿರುವುದು
ತೀರ್ಥಹಳ್ಳಿ ಪಟ್ಟಣದ ಕೊಪ್ಪ ವೃತ್ತದಿಂದ ಶೃಂಗೇರಿವರೆಗಿನ ರಾಷ್ಟ್ರೀಯ ಹೆದ್ದಾರಿ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿರುವುದು   

ತೀರ್ಥಹಳ್ಳಿ:ತೀರ್ಥಹಳ್ಳಿ ಪಟ್ಟಣದ ಕೊಪ್ಪ ವೃತ್ತದಿಂದ ಶೃಂಗೇರಿವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಆದರೆ ಅರಣ್ಯ ಸಂರಕ್ಷಣೆ ನಿಯಮಗಳಿಂದ ರಸ್ತೆ ವಿಸ್ತರಣೆಗೆ ಅಡ್ಡಿ ಉಂಟಾಗುವ ಆತಂಕ ಎದುರಾಗಿದೆ.

ಕುವೆಂಪು ಜೈವಿಕ ಅರಣ್ಯಧಾಮ, ಮೀಸಲು ಅಧಿಸೂಚಿತ ಅರಣ್ಯ ಪ್ರದೇಶದ ವ್ಯಾಪ್ತಿಗೆ ಸೇರಿದ ಮಾರ್ಗದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಕಾರಣ ಅರಣ್ಯ ಪ್ರದೇಶ ಉಳಿಸಿಕೊಂಡು ಕಾಮಗಾರಿ ನಡೆಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

ರಸ್ತೆ ಅಭಿವೃದ್ಧಿಯಿಂದ ಮಲೆನಾಡ ತವರು ತೀರ್ಥಹಳ್ಳಿಯ ಪ್ರಗತಿಗೆ ವೇಗ ಸಿಕ್ಕಂತಾಗಿದೆ.ತೀರ್ಥಹಳ್ಳಿಯನ್ನು ಹಾದು ಹೋಗುವ ರಸ್ತೆ ಮಾರ್ಗವನ್ನು 20 ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಮಾರ್ಗವನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಪಟ್ಟಣದ ಕೊಪ್ಪ ವೃತ್ತದಿಂದ ಮೇಲಿನಕುರುವಳ್ಳಿ, ದೇವಂಗಿ, ಕೊಪ್ಪ, ಹರಿಹರಪುರ, ಶೃಂಗೇರಿ ಮಾರ್ಗದ ರಸ್ತೆ ವಿಸ್ತರಣೆ ಕಾಮಗಾರಿಗೆ ಈಗ ₹ 96 ಕೋಟಿ ಅನುದಾನ ಮಂಜೂರಾಗಿದ್ದು, ಕಾಮಗಾರಿ ಆರಂಭಿಸಲಾಗಿದೆ.

ADVERTISEMENT

ರಸ್ತೆ ಮಾರ್ಗವು ಅನೇಕ ಕಡಿದಾದ ತಿರುವುಗಳನ್ನು ಒಳಗೊಂಡಿದ್ದು, ರಸ್ತೆ ಪಕ್ಕದ ಅಧಿಸೂಚಿತ ಅರಣ್ಯ ಪ್ರದೇಶಕ್ಕೆ ಧಕ್ಕೆಯಾಗದಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ನಿಗಾವಹಿಸಿದೆ. ದೂರು ಬರದಂತೆ ಮುನ್ನೆಚ್ಚರಿಕೆ ವಹಿಸಿರುವ ಅರಣ್ಯ ಇಲಾಖೆ ರಸ್ತೆ ವಿಸ್ತರಣೆ ಕಾಮಗಾರಿ ಮೇಲೆ ಕಣ್ಣಿಟ್ಟಿದೆ.

ಶಿವಮೊಗ್ಗ-ಉಡುಪಿ ಸಂಪರ್ಕದ ತೀರ್ಥಹಳ್ಳಿ ಮಾರ್ಗದ 13.4 ಕಿ.ಮೀ ದೂರದ ₹ 74 ಕೋಟಿ ಅನುದಾನದ ರಸ್ತೆ ವಿಸ್ತರಣೆ ಕಾಮಗಾರಿಯ ವೇಳೆ ಅರಣ್ಯ ಇಲಾಖೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಡುವೆ ಕಾನೂನು ಸಮರ ಏರ್ಪಟ್ಟಿತ್ತು. ಸಾರ್ವಜನಿಕರು, ಸಂಘ ಸಂಸ್ಥೆಗಳು, ಪರಿಸರ ಪ್ರೇಮಿಗಳು ರಸ್ತೆ ಬದಿಯ ಮರಗಳನ್ನು ತೆರವು ಮಾಡದಂತೆ ಆಕ್ಷೇಪ ವ್ಯಕ್ತಪಡಿಸಿದ್ದರು. ಶಾಸಕ ಆರಗ ಜ್ಞಾನೇಂದ್ರ ಅವರು ಹೆದ್ದಾರಿ ಪ್ರಾಧಿಕಾರ, ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಸಂದಾನದ ಮೂಲಕ ರಸ್ತೆ ವಿಸ್ತರಣೆಗೆ ಅನುವು ಮಾಡಿಕೊಟ್ಟಿದ್ದರು.

ಈಗ ಮತ್ತೆ ಅಂತಹ ಸಮಸ್ಯೆ ಬರುವ ಆತಂಕ ಎದುರಾಗಿದೆ. ತೀರ್ಥಹಳ್ಳಿಯ ಕೊಪ್ಪ ವೃತ್ತದಿಂದ ಶೃಂಗೇರಿ ಸಮೀಪದ ಆನೆಗುಂದದವರೆಗೆ 50 ಕಿ.ಮೀ ರಸ್ತೆ ವಿಸ್ತರಣೆ ಕಾಮಗಾರಿ ನಡೆಯಲಿದೆ. ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ ಈಚೆಗೆ ಕಾಮಗಾರಿಗೆ ಚಾಲನೆ ನೀಡಿದ್ದರು.

ರಸ್ತೆ ವಿಸ್ತರಣೆ ಸಂದರ್ಭದಲ್ಲಿ ರಸ್ತೆ ಬದಿಯ ಮರಗಳನ್ನು ಸಾಧ್ಯವಾದಷ್ಟು ಉಳಿಸಿಕೊಳ್ಳುವ ಮೂಲಕ ಕಾಮಗಾರಿ ಕೈಗೊಳ್ಳಬೇಕು ಎಂದು ಕುರುವಳ್ಳಿಯ ನಿಶ್ಚಲ್ ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.