ADVERTISEMENT

ಸದಾಶಿವ ಆಯೋಗ ವರದಿ ತಿರಸ್ಕಾರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 6:43 IST
Last Updated 24 ಸೆಪ್ಟೆಂಬರ್ 2021, 6:43 IST

ಶಿವಮೊಗ್ಗ: ಸದಾಶಿವ ಆಯೋಗದ ವರದಿ ತಿರಸ್ಕರಿಸದಿದ್ದರೆ ರಾಜ್ಯದಾದ್ಯಂತ ಶಾಂತಿಯುತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ನ್ಯಾ. ಸದಾಶಿವ ಆಯೋಗ ವಿರೋಧಿ ಹೋರಾಟ ಸಮಿತಿ ಗೌರವಾಧ್ಯಕ್ಷ ಚೂಡಾನಾಯ್ಕ್ ಎಚ್ಚರಿಸಿದರು.

‘ಸದಾಶಿವ ಆಯೋಗದ ವರದಿ ಅವೈಜ್ಞಾನಿಕ. ವರದಿ ತಿರಸ್ಕರಿಸದೆ ಎಲ್ಲ ಸರ್ಕಾರಗಳು ಪರಿಶಿಷ್ಟ ಜಾತಿಯ 99 ಸಮುದಾಯಗಳ ಮೇಲೆ ತೂಗುಗತ್ತಿ ಬೀಸುತ್ತಿವೆ. ಸಂವಿಧಾನ ಜಾರಿಯಾದ ಇಲ್ಲಿಯವರೆಗೂ ಪರಿಶಿಷ್ಟ ಜನಾಂಗದ 101 ಸಮುದಾಯಗಳು ಯಾವುದೇ ಭಿನ್ನಾಭಿಪ್ರಾಯವಿಲ್ಲದೇ ಜೀವನ ಸಾಗಿಸುತ್ತಾ ಬಂದಿವೆ. ಆದರೆ, ಸರ್ಕಾರ ಆಯೋಗ ನೇಮಕ ಮಾಡಿ ಸೋದರ ಸಮುದಾಯಗಳಲ್ಲಿ ಬಿರುಕು ಮೂಡಿಸಿದೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಇದು ಮೇಲ್ನೋಟಕ್ಕೆ ಆಯೋಗವು ಸಂಘ ಪರಿವಾರದ ಹತೋಟಿಯಲ್ಲಿ ವರದಿ ಮಾಡಿದೆ ಎಂಬುದು ತಿಳಿಯುತ್ತದೆ. ಇದರಿಂದ ಆಯೋಗದ ವರದಿ ಯಥಾವತ್ತಾಗಿ ಜಾರಿಗೊಳಿಸಲು ಸರ್ಕಾರಕ್ಕೆ ಒತ್ತಡ ಹೇರುತ್ತಿರುವ ಸಚಿವ ಗೋವಿಂದ ಕಾರಜೋಳ, ಕೇಂದ್ರ ಸಚಿವ ನಾರಾಯಣಸ್ವಾಮಿ ಅವರನ್ನು ಸರ್ಕಾರ ಹತೋಟಿಯಲ್ಲಿಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಸಮಿತಿ ಅಧ್ಯಕ್ಷ ಎಸ್. ಪ್ರಕಾಶ್, ಕಾರ್ಯಾಧ್ಯಕ್ಷ ಶಾಂತವೀರನಾಯ್ಕ್, ಮುಖಂಡರಾದ ಬಿ. ಜಗದೀಶ್, ಈರಾನಾಯ್ಕ್, ಚಂದ್ರಕುಮಾರ್, ಜನ್ನಾಪುರ ಮಂಜುನಾಥ್, ರೇಖ್ಯಾನಾಯ್ಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.