ADVERTISEMENT

ಶಿವಮೊಗ್ಗ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕಗಳ ಪ್ರದರ್ಶನ, ಮಾರಾಟಕ್ಕೆ ಇಲ್ಲ ಅವಕಾಶ!

ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ಗೋಷ್ಠಿಗಳು ಪ್ರೇಕ್ಷಕರಿಲ್ಲದೆ ಬಣಬಣ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2020, 12:38 IST
Last Updated 3 ಮಾರ್ಚ್ 2020, 12:38 IST
ಸಮ್ಮೇಳನದ ಆವರಣದಲ್ಲಿನ ಬೆರಳೆಣಿಕೆಯ ಮಳಿಗೆಗಳು.
ಸಮ್ಮೇಳನದ ಆವರಣದಲ್ಲಿನ ಬೆರಳೆಣಿಕೆಯ ಮಳಿಗೆಗಳು.   

ಶಿವಮೊಗ್ಗ:ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇಲ್ಲಿನ ಕುವೆಂಪು ರಂಗ ಮಂದಿರದಲ್ಲಿ ಆಯೋಜಿಸಿರುವ ಮೂರು ದಿನಗಳ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕಗಳ ಪ್ರದರ್ಶನ, ಮಾರಾಟಕ್ಕೆಆದ್ಯತೆ ನೀಡದ ಸಂಘಟಕರ ಧೋರಣೆಗೆ ಪುಸ್ತಕ ಪ್ರೇಮಿಗಳು, ಸಾಹಿತ್ಯಪ್ರಿಯರು, ಪ್ರಕಾಶಕರು, ಲೇಖಕರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ಸಾಹಿತ್ಯ ಸಮ್ಮೇಳನದಲ್ಲೂರಂಗ ಮಂದಿರದ ಆವರಣದಲ್ಲಿಹಲವು ಪುಸ್ತಕ ಮಳಿಗೆಗಳು ಕಾಣುತ್ತಿದ್ದವು. ಈ ಬಾರಿಪುಸ್ತಕಗಳ ಪ್ರದರ್ಶನ, ಮಾರಾಟಕ್ಕೆ ಅವಕಾಶ ಇರಲಿಲ್ಲ. ಮೊದಲ ದಿನ ಒಂದು ಪುಸ್ತಕ ಮಳಿಗೆ ತೆರೆದಿತ್ತು. ಎರಡನೇ ದಿನಕ್ಕೆ ಅವರೂ ಖಾಲಿ ಮಾಡಿದ್ದರು. ಪ್ರತಿ ವರ್ಷ ಹೆಚ್ಚು ಕನ್ನಡ ಪುಸ್ತಕಗಳ ಮಾರಾಟದ ದಾಖಲೆ ಬರೆಯುತ್ತಿದ್ದ ಗೀತಾಂಜಲಿ ಪ್ರಕಾಶನ, ಪುಸ್ತಕ ಮನೆ, ಆಹರ್ನಿಶಿ ಪ್ರಕಾಶನ ಮತ್ತಿತರ ಸಂಸ್ಥೆಗಳು ಈ ಬಾರಿ ಪುಸ್ತಕ ಮಳಿಗೆ ತೆರೆದಿಲ್ಲ.

ದುಬಾರಿ ದರ: ಆವರಣದಲ್ಲಿ ಮಳಿಗೆ ತೆರೆಯಲು ₨ 6 ಸಾವಿರ ನಿಗದಿ ಮಾಡಲಾಗಿದೆ. ವಾಣಿಜ್ಯ ಉದ್ದೇಶದ ಮಳಿಗೆಗಳಿಗೆ ಅದು ಸರಿ ಇರಬಹುದು. ಆದರೆ, ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟದ ಮಳಿಗೆಗಳಿಗೂ ಇದೇ ದರ ನಿಗದಿ ಮಾಡಿರುವುದು ಸಮಂಜಸವಲ್ಲ ಎಂದು ಮಾತು ಕೇಳಿಬಂತು.

ADVERTISEMENT

‘ಪುಸ್ತಕ ಖರೀದಿಸಿ ಓದುವರ ಸಂಖ್ಯೆಯೂಈಚೆಗೆ ಕಡಿಮೆಯಾಗಿದೆ. ಅಷ್ಟೊಂದು ಲಾಭವಿಲ್ಲ.₨ 6 ಸಾವಿರ ಲಾಭ ಮಾಡುವುದೂ ಸಾಧ್ಯವಿಲ್ಲ. ರಾಜ್ಯ ಸಮ್ಮೇಳನದಲ್ಲೇ ₨ 2.500 ದರವಿದೆ. ಅಲ್ಲದೆ ಪುಸ್ತಕ ಸಂಸ್ಕೃತಿ ಬೆಳೆಸುವುದು ಪರಿಷತ್ ಕರ್ತವ್ಯವೂ ಹೌದು. ಈಗಿರುವಾಗ ಪರಿಷತ್‌ ದುಬಾರಿ ದರನಿಗದಿ ಮಾಡಿದರೆ ಭರಿಸಲು ಸಾಧ್ಯವೇ? ಈ ಎಲ್ಲ ಕಾರಣಗಳಿಂದ ಪುಸ್ತಕ ಮಳಿಗೆಗಳನ್ನು ತೆರೆಯದಿರಲು ನಿರ್ಧರಿಸಿದೆವು’ ಎನ್ನುತ್ತಾರೆ ಆಹರ್ನಿಶಿ ಪ್ರಕಾಶನದ ಮಾಲೀಕರಾದ ಅಕ್ಷತಾ ಹುಂಚದ ಕಟ್ಟೆ, ಪುಸ್ತಕ ಮನೆಯ ಸುಂದರ್.

ಎರಡನೇ ದಿನ ಸಮ್ಮೇಳನದ ಆವರಣದಲ್ಲಿ ಇದ್ದ ಮಳಿಗೆಗಳ ಸಂಖ್ಯೆ ಕೇವಲನಾಲ್ಕು. ಧಾರವಾಡದ ಚಿಲಿಪಿಲಿ ಪ್ರಕಾಶನದಶಿಕ್ಷಕರ ಮಾಹಿತಿ ಪುಸ್ತಕಗಳ ಮಾರಾಟದ ಮಳಿಗೆ, ಮಹಾಲಿಂಗಪುರದ ಭಾರತೀಯ ಕೈಮಗ್ಗದ ಖಾದಿ ಬಟ್ಟೆಗಳ ಮಳಿಗೆ, ಬಾಗಲಕೋಟೆಯ ತಾಮ್ರದ ಸಾಮಗ್ರಿ ಮಾರಾಟ ಮಳಿಗೆ, ಬಟ್ಟೆಯ ಕಲೆ ತೆಗೆಯುವ ರಾಸಾಯನಿಕಮಳಿಗೆ ಕಂಡುಬಂದವು. ಜನರೇ ಇಲ್ಲದ ಕಾರಣ ಆ ಮಳಿಗಳಲ್ಲೂ ವ್ಯಾಪಾರ ಇರಲಿಲ್ಲ.

ಖಾಲಿ ಕುರ್ಚಿಗಳಿಗೆ ಉಪನ್ಯಾಸ: ಎರಡನೇ ದಿನ ಜನರಿಲ್ಲದೇ ಖಾಲಿ ಕುರ್ಚಿಗಳ ಪ್ರದರ್ಶನಕ್ಕೆ ಸಮ್ಮೇಳನ ಸಾಕ್ಷಿಯಾಯಿತು. 800ಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಇರುವ ರಂಗಮಂದಿರದಲ್ಲಿ ಮಂಗಳವಾರ ನಡೆದ ಗೋಷ್ಠಿಗಳಲ್ಲಿಶೇ 90ರಷ್ಟು ಕುರ್ಚಿಗಳು ಖಾಲಿ ಇದ್ದವು.

‘ಸರ್ಕಾರದ ಹಣ ಖರ್ಚು ಮಾಡಲಷ್ಟೇ ಸಮ್ಮೇಳನ ನಡೆಸುತ್ತಿದ್ದಾರೆ. ಯುವ ಪೀಳಿಗೆಗೆ ನಾಡು, ನುಡಿ, ಕನ್ನಡ ಸಾಹಿತ್ಯ ಪರಿಚಯಿಸುವ ಯಾವ ಪ್ರಯತ್ನವನ್ನೂ ಪರಿಷತ್ ಮಾಡಿಲ್ಲ’ ಎಂದು ಅಂಕಣಕಾರ ಬಿ.ಚಂದ್ರೇಗೌಡ ದೂರಿದರು.

ಊಟಕ್ಕೂ ಪರದಾಟ:ಸಮ್ಮೇಳನದಲ್ಲಿ ಭಾಗವಹಿಸಿದ ಅರ್ಧದಷ್ಟು ಜನರಿಗೆ ಊಟ, ತಿಂಡಿಯ ವ್ಯವಸ್ಥೆಯನ್ನೇ ಕಲ್ಪಿಸಿರಲಿಲ್ಲ. ಮಧ್ಯಾಹ್ನ ಊಟ ದೊರಕದೇ ಹಲವರು ಪರದಾಡಿದರು. ಕೆಲವರು ಗಲಾಟೆ ಮಾಡಿದ ನಂತರ ಹೋಟೆಲ್‌ನಿಂದ ಉಪಾಹಾರ ತರಿಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.