ತೀರ್ಥಹಳ್ಳಿ: ಇಲ್ಲಿನ ಸಹ್ಯಾದ್ರಿ ಸಮೂಹ ಸಂಸ್ಥೆ ವಾರ್ಷಿಕ ₹ 1,463 ಕೋಟಿ ವ್ಯವಹಾರ ನಡೆಸಿದ್ದು, ₹ 11.82 ಕೋಟಿ ಲಾಭಗಳಿಸಿದೆ ಎಂದು ಸಹ್ಯಾದ್ರಿ ವಿವಿಧೋದ್ದೇಶ ಅಡಿಕೆ ಬೆಳೆಗಾರರ ಮಾರಾಟ ಸಹಕಾರ ಸಂಸ್ಥೆ ಅಧ್ಯಕ್ಷ ಬಸವಾನಿ ವಿಜಯದೇವ್ ತಿಳಿಸಿದ್ದಾರೆ.
‘ಸುಮಾರು ₹ 96.60 ಕೋಟಿ ಠೇವಣಿ ಹೊಂದಿದ್ದು, ಪ್ರಸ್ತುತ ಸಾಲಿನಲ್ಲಿ ₹ 140 ಕೋಟಿ ಸಾಲ ನೀಡಿದೆ. ವಸೂಲಾತಿ ಪ್ರಮಾಣ ಶೇ 76 ರಷ್ಟಿದೆ. ದೂರದೃಷ್ಟಿ, ಕಠಿಣ ನಿಲುವು, ಶಿಸ್ತುಬದ್ಧ ವ್ಯವಹಾರದಿಂದ ಸಂಸ್ಥೆ ಪ್ರತಿವರ್ಷ ಲಾಭಗಳಿಸುತ್ತಿದೆ. ಸಂಸ್ಥೆಯ ಸ್ವಾವಲಂಬನೆಗಾಗಿ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಬೆಲೆಬಾಳುವ ನಿವೇಶನ ಖರೀದಿಸಲಾಗಿದೆ. ವಿವಿಧ ಕಡೆಗಳಲ್ಲಿ ₹ 48 ಕೋಟಿ ವಿನಿಯೋಗಿಸಿದ್ದೇವೆ’ ಎಂದು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.
ಅಡಿಕೆ ವ್ಯವಹಾರ, ಸುಣ್ಣ, ಮೈಲುತುತ್ತ, ರಾಳ, ಕೃಷಿ ಉಪಯೋಗಿ ಔಷಧಿ ವ್ಯಾಪಾರದಿಂದ ₹ 1.26 ಕೋಟಿ, ಠೇವಣಿ ಮೇಲಿನ ಬಡ್ಡಿ, ಸಾಲದ ಮೇಲಿನ ಬಡ್ಡಿಯಿಂದ ₹ 6.80 ಕೋಟಿ, ಚೀಟಿ ನಿಧಿಯಲ್ಲಿ ₹ 3.34 ಕೋಟಿ, ಸಹ್ಯಾದ್ರಿ ಪೆಟ್ರೋಲ್ ಬಂಕ್ ವ್ಯವಹಾರದಿಂದ ₹ 41.76 ಲಕ್ಷ, ನಂದಿನಿ ಪಾರ್ಲರ್ ₹6.50 ಲಕ್ಷ, ಸರ್ವೋ ಆಯಿಲ್ ವ್ಯಾಪಾರದಿಂದ ₹ 7.75 ಲಕ್ಷ, ಸಹ್ಯಾದ್ರಿ ಕುಡಿಯುವ ನೀರು ₹7.87 ಲಕ್ಷ, ಇತರೆ ವ್ಯವಹಾರದಿಂದ ₹57.97 ಲಕ್ಷ ಲಾಭ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
‘ಷೇರುದಾರರ ನಿರೀಕ್ಷೆ ಮೀರಿ ಕೇವಲ 23 ವರ್ಷಗಳ ಅವಧಿಯಲ್ಲಿ ಸಂಸ್ಥೆ ಬೆಳೆದಿದೆ. ಇದಕ್ಕೆ ಸಕಾಲದಲ್ಲಿ ಸಲಹೆ, ಸೂಚನೆ ನೀಡುತ್ತಿರುವ ಸಂಸ್ಥೆಯ ನಿರ್ದೇಶಕರು, ವ್ಯವಸ್ಥಾಪಕ ನಿರ್ದೇಶಕಿ ಚಂದ್ರಕಲಾ ಹಾಗೂ ಪ್ರಾಮಾಣಿಕತೆಯಿಂದ ಸಂಸ್ಥೆ ತನ್ನದೆಂಬ ಭಾವನೆಯಿಂದ ಶ್ರಮಿಸುತ್ತಿರುವ ಸಿಬ್ಬಂದಿ ಕಾರಣ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.