ಹೊಸನಗರ: ‘ಮರಳು ಸಾಗಣೆ ಕುರಿತು ಶಾಸಕ ಎಚ್. ಹಾಲಪ್ಪ ಹರತಾಳು ಒಂದು ರೂಪಾಯಿಯನ್ನೂ ಮುಟ್ಟಿಲ್ಲ. ಈ ವಿಚಾರದಲ್ಲಿ ಯಾವ ದೇವಸ್ಥಾನಕ್ಕೆ ಬಂದುಆಣೆ ಪ್ರಮಾಣ ಮಾಡಲು ನಾವು ಸಿದ್ಧ’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಆಲುವಳ್ಳಿ ವೀರೇಶ್ ಹೇಳಿದರು.
‘ತಾಲ್ಲೂಕಿನಲ್ಲಿ ಶರಾವತಿ ನದಿ ದಂಡೆ ಮತ್ತು ಹಳ್ಳಕೊಳ್ಳಗಳಲ್ಲಿ ಮರಳು ಸಾಗಣೆ ನಡೆಯುತ್ತಿದೆ. ಲಾರಿ ಮಾಲೀಕರು ಕ್ಷೇತ್ರದ ಅಭಿವೃದ್ಧಿ ಕಾಮಗಾರಿ ಸೇರಿ ಮರಳು ಸಾಗಣೆ ವಹಿವಾಟು ನಡೆಸುತ್ತಿದ್ದಾರೆ. ಇದರಲ್ಲಿ ಶಾಸಕ ಹಾಲಪ್ಪ ಅವರ ಪಾತ್ರವೇನೂ ಇಲ್ಲ. ಮರಳು ಸಾಗಣೆಗೆ ಅವಕಾಶ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ಒತ್ತಡ ತಂದಿದ್ದಾರೆ ಅಷ್ಟೆ. ಆದರೆ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಮರಳು ಗಣಿಗಾರಿಕೆಯಲ್ಲಿ ಶಾಸಕ ಹಾಲಪ್ಪ ಅವರ ಪಾತ್ರವಿದೆ. ಅವರು ಮರಳು ಸಾಗಾಣಿಕೆದಾರರಿಂದ ಹಫ್ತಾ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಆರೋಪದಲ್ಲಿ ಹುರುಳಿಲ್ಲ. ಶಾಸಕರು ಮರಳು ಸಾಗಣೆದಾರರಿಂದ ಒಂದು ಪೈಸೆಯನ್ನೂ ಮುಟ್ಟಿಲ್ಲ. ನಾವೂಕೊಟ್ಟಿಲ್ಲ. ಬೇಕಿದ್ದರೆ ಸಿಗಂದೂರು ದೇವಸ್ಥಾನಕ್ಕೆ ಬರಲಿ. ಅಲ್ಲಿ ಶಾಸಕರಪರವಾಗಿ ನಾವು ಆಣೆ ಪ್ರಮಾಣ ಮಾಡುತ್ತೇವೆ’ ಎಂದು ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.
‘ಬೇಳೂರು ಗೋಪಾಲಕೃಷ್ಣ ಅವರು ಶಾಸಕರ ಮೇಲೆ ಸುಮ್ಮನೆ ಆರೋಪ ಮಾಡುತ್ತ ಮರಳುಗಾರಿಕೆಗೆ ಅಡ್ಡಿಯಾಗಿದ್ದಾರೆ. ಅವರು ಶಾಸಕರಾಗಿದ್ದಾಗ ಮರಳು ವಿಚಾರದಲ್ಲಿ ಏನೆಲ್ಲ ಮಾಡಿದರು ಎಂಬುದು ಜನರಿಗೆ ಗೊತ್ತಿದೆ’ ಎಂದು ಟೀಕಿಸಿದರು.
ಆನಂದ ಮೆಣಸೆ, ‘ಬೇಳೂರು ಗೋಪಾಲಕೃಷ್ಣ ಅವಧಿಯಲ್ಲಿ ಮರಳು ಸಾಗಣೆ ಯಾವ ಸ್ಥಿತಿ ಇತ್ತು ಎನ್ನುವುದು ತಿಳಿದಿದೆ’ ಎಂದರು.
ಗಿರೀಶ್, ಅಶೋಕ್ ಸಂಪಳ್ಳಿ, ರಾಜೇಶ ಜೈನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.