ಸಾಗರ: ತಾಲ್ಲೂಕಿನ ಹೆಗ್ಗೋಡಿನ ಚರಕ ಹಾಗೂ ಗ್ರಾಮಸೇವಾ ಸಂಘ, ಅಖಿಲ ಭಾರತ ಕೈಮಗ್ಗ ನೇಕಾರರ ಒಕ್ಕೂಟದ ಆಶ್ರಯದಲ್ಲಿ ಸೆ.18ರಂದು ಹೆಗ್ಗೋಡಿನಲ್ಲಿ ‘ಗ್ರಾಮೋದ್ಯೋಗ ಉಳಿಸಿ’ ಆಂದೋಲನ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 11ಕ್ಕೆ ಹೊನ್ನೆಸರ ಗ್ರಾಮದ ಶ್ರಮಜೀವಿ ಆಶ್ರಮದಿಂದ ಹೆಗ್ಗೋಡು ಗ್ರಾಮ ಪಂಚಾಯಿತಿ ಕಚೇರಿಯವರೆಗೆ ಮೆರವಣಿಗೆ ಏರ್ಪಡಿಲಾಗಿದೆ. ಸೆ.21ರಿಂದ ಆರಂಭವಾಗಲಿರುವ ವಿಧಾನಸಭೆಯ ಅಧಿವೇಶನದಲ್ಲಿ ಜನಪ್ರತಿನಿಧಿಗಳಿಗೆ ಹತ್ತು ಪ್ರಶ್ನೆಗಳನ್ನು ಹೆಗ್ಗೋಡು ಪಂಚಾಯಿತಿ ಪ್ರತಿನಿಧಿಗಳ ಮೂಲಕ ಕೇಳುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಆಂದೋಲನವು ಗ್ರಾಮಸೇವಾ ಸಂಘ ನಡೆಸಿಕೊಂಡು ಬಂದಿರುವ ಪವಿತ್ರ ಆರ್ಥಿಕತೆ ಸತ್ಯಾಗ್ರಹದ ಮುಂದುವರಿದ ಭಾಗವಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಗ್ರಾಮೋದ್ಯೋಗದಲ್ಲಿ ನಿರತರಾಗಿರುವ ರಚನಾತ್ಮಕ ಕಾರ್ಯಕರ್ತರು, ಸಾಹಿತಿಗಳು, ಉತ್ತರ ಕರ್ನಾಟಕದ ನೇಕಾರ ಮುಖಂಡರು, ಸ್ಥಳೀಯ ಗ್ರಾಮಸ್ಥರು ಈ ಆಂದೋಲನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಚರಕ ಸಂಸ್ಥೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.