ಪ್ರಾತಿನಿಧಿಕ ಚಿತ್ರ
ಶಿವಮೊಗ್ಗ: ರೈತರು ಗೇಣಿ ಸಾಗುವಳಿ ಮಾಡಿಕೊಂಡು ಬರುತ್ತಿರುವ ಶಾಲಾ ಜಮೀನುಗಳನ್ನು ವಶಕ್ಕೆ ಪಡೆಯಲು ಸರ್ಕಾರ ಮುಂದಾಗಿದೆ. ಅದು ಅವೈಜ್ಞಾನಿಕ ಎಂದು ಶಾಲಾ ಜಮೀನು ಗೇಣಿ ರೈತರ ಹೋರಾಟ ಸಮಿತಿ ಅಧ್ಯಕ್ಷ ಕಲ್ಲೂರು ಮೇಘರಾಜ್ ಹೇಳಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಶಾಲಾ ಜಮೀನುಗಳ ಗೇಣಿದಾರರು, ರೈತ ಮುಖಂಡರ ಸಭೆ ಕರೆದು ಚರ್ಚಿಸದೇ ಶಾಲಾ ಜಮೀನುಗಳ ಬಗ್ಗೆ ವಿಶೇಷ ಕಾನೂನು ತರಲು ಹೊರಟಿರುವುದು ಅಸಂಬದ್ಧ ಹಾಗೂ ಅಪರಿಪಕ್ವ ನಿರ್ಧಾರ. ಅದನ್ನು ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದರು.
ಭೂವಿದ್ಯಾದಾನ ಚಳವಳಿ ವೇಳೆ ಸರ್ಕಾರಿ ಶಾಲೆಗಳಿಗೆ ರಾಜ್ಯದಾದ್ಯಂತ ಸಾವಿರಾರು ಎಕರೆ ಜಮೀನನ್ನು ದಾನಿಗಳು ಕೊಟ್ಟಿದ್ದರಿಂದ ಆಟದ ಮೈದಾನ, ಕಟ್ಟಡ ಇನ್ನಿತರ ಉದ್ದೇಶಕ್ಕೆ ಅವು ಬಳಕೆಯಾಗುತ್ತಿವೆ. ಶಾಲೆಯಿಂದ ದೂರವಿದ್ದ ಜಮೀನನ್ನು ಆ ಗ್ರಾಮದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಗೇಣಿಗೆ ನೀಡಲಾಗಿತ್ತು ಎಂದರು.
ಶಾಲಾ ಜಮೀನು ವಶಪಡಿಸಿಕೊಂಡಲ್ಲಿ ಸರ್ಕಾರದ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದರು.
ಕೆ.ಆರ್.ಶಿವಣ್ಣ, ಕೊಡ್ಲೂರು ಶ್ರೀಧರ್, ಅರಸಾಳು ರಂಗನಾಥ್, ಅಲೀಂ ಖಾನ್, ಲೋಕೇಶ್ ಶಿರಾಳಕೊಪ್ಪ, ಶಂಕ್ರಾನಾಯ್ಕ, ಎಚ್.ಎಂ.ಸಂಗಯ್ಯ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.