ಶಿವಮೊಗ್ಗ: ಕೋವಿಡ್ ರೋಗಿಗಳಿಗೆ ಸಹಾಯಹಸ್ತ ಚಾಚಲು ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಸೇವಾ ಕೇಂದ್ರ ಆರಂಭಿಸಲಾಗಿದೆ.
ಸೇವಾಕೇಂದ್ರಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಆರ್ಎಸ್ಎಸ್ಹಿರಿಯ ಕಾರ್ಯಕರ್ತ ಜಿನ್ರಾಜ್ ಜೈನ್, ಕೋವಿಡ್ ಸುರಕ್ಷಾ ಪಡೆ, ಸೇವಾ ಭಾರತಿ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಸೇವಾ ಕೇಂದ್ರ ಆರಂಭಿಸಲಾಗಿದೆ ಎಂದರು.
ಕೊರೊನಾ ವೈರಸ್ ಸಾಂಕ್ರಮಿಕ ರೂಪತಾಳಿ ದೇಶವನ್ನೇ ನಲುಗಿಸುತ್ತಿದೆ. ಜನರು ದಿಕ್ಕು ತೋಚದಂತಾಗಿದ್ದಾರೆ. ಇಂತಹ ಸಮಯದಲ್ಲಿ ಸಂಘಸಂಸ್ಥೆಗಳು ಸಹಾಯ ಹಸ್ತ ಚಾಚಿರುವುದು ಶ್ಲಾಘನೀಯ. ಇತರ ಸಂಸ್ಥೆಗಳಿಗೂ ಮಾರ್ಗದರ್ಶಕ ಎಂದು ಶ್ಲಾಘಿಸಿದರು.
ಕೋವಿಡ್ಗೆ ಭಯಪಡುವ ಆವಶ್ಯಕತೆ ಇಲ್ಲ. ಆದರೆ, ನಿರ್ಲಕ್ಷ ಸಲ್ಲದು. ಜನತೆ ಸರ್ಕಾರದ ಮಾರ್ಗಸೂಚಿ ಅನುಸರಿಸಬೇಕು. ಇಲ್ಲಿ ಕಲ್ಪಿಸಿರುವ ಸೌಲಭ್ಯ ಪಡೆದುಕೊಳ್ಳಬೇಕು. ಸಾರ್ವಜನಿಕರೂ ಕೂಡ ಈ ಮಹಾತ್ ಕಾರ್ಯಕ್ಕೆ ಸಹಕರಿಸಬೇಕು ಎಂದರು.
ಆರ್ಎಸ್ಎಸ್ ದಕ್ಷಿಣ ಪ್ರಾಂತ್ಯ ಸಂಚಾಕ ಪಟ್ಟಾಭಿರಾಮ್, ಕೋವಿಡ್ ರೋಗಿಗಳ ಜತೆಗೆ ಇರುವ ಒಬ್ಬರಿಗೆ ತಂಗಲು ಈ ಸೇವಾ ಕೇಂದ್ರದಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಗತ್ಯ ಇರುವವರಿಗೆ ಊಟ, ಉಪಹಾರ, ವಸತಿ ಕಲ್ಪಿಸಲಾಗಿದೆ. ರಕ್ತ ತಪಾಸಣೆ ಮತ್ತು ಅಗತ್ಯಬಿದ್ದರೆ ಅಂತ್ಯ ಸಂಸ್ಕಾರಕ್ಕೂ ಸಹಾಯ ನೀಡಲಾಗುತ್ತದೆ. ಕುಡಿಯುವ ನೀರಿನ ವ್ಯವಸ್ಥೆ, ಶೌಚಕ್ಕೆ ಇ–ಟಾಯ್ಲೆಟ್ ವ್ಯವಸ್ಥೆ ಮಾಡಲಾಗಿದೆ. ರೋಗಿಗಳ ಸಂಬಂಧಿಕರು ಸ್ವಚ್ಚತೆ ಕಾಪಾಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಹಲವು ಸಂಘ ಸಂಸ್ಥೆಗಳು ಕೋವಿಡ್ ರೋಗಿಗಳ ಸಹಾಯಕ್ಕೆ ಮುಂದೆ ಬರುತ್ತಿವೆ. ಈ ಕೇಂದ್ರದಲ್ಲಿ ಉಚಿತ ಸೇವೆ ದೊರಕಲಿದೆ. ಜೈನ ಸಮುದಾಯ 11 ಆಮ್ಲಜನಕ ಸಿಲಿಂಡರ್ಗಳನ್ನು ನೀಡಿದೆ.ಅಮೃತ್ ನೋನಿ ವ್ಯಾಲ್ಯೂ ಪ್ರಾಡೆಕ್ಟ್ ಕೋವಿಡ್ ರೋಗಿಗಳಿಗೆ ಅಗತ್ಯವಿರುವ ಆಂಬುಬುಲೆನ್ಸ್ ಸೇವೆ ನೀಡಿದೆ ಎಂದರು.
ಮೇಯರ್ ಸುನೀತಾ ಅಣ್ಣಪ್ಪ, ಉಪ ಮೇಯರ್ ಶಂಕರ್ಗನ್ನಿ, ಆರ್ಯ ವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್.ದತ್ತಾತ್ರಿ, ವೈದ್ಯಕೀಯ ಕಾಲೇಜು ನಿರ್ದೇಶಕ ಡಾ.ಸಿದ್ದಪ್ಪ, ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್, ಜಿಲ್ಲಾ ಸರ್ಜನ್ಡಾ.ಶ್ರೀನಿವಾಸ್, ಡಾ.ರವಿಕಿರಣ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಸುದೇವ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.