
ಶಿವಮೊಗ್ಗ: ನಾಡಿನ ಜ್ಞಾನ ಪರಂಪರೆಯ ಕೊಂಡಿ ಅನಿಸಿರುವ ಕುವೆಂಪು ವಿಶ್ವವಿದ್ಯಾಲಯದ ನೆಲೆ ಶಂಕರಘಟ್ಟವು ಈಗ ಅಕ್ಷರಶಃ ಕಸದ ತೊಟ್ಟಿಯಾಗಿ ಪರಿಣಮಿಸಿದೆ.
ಗ್ರಾಮ ಪಂಚಾಯಿತಿ ಮೈಮರೆವಿನಿಂದ ಕಸ ವಿಲೇವಾರಿ ವ್ಯವಸ್ಥೆ ಸಂಪೂರ್ಣ ನಿಷ್ಕ್ರಿಯಗೊಂಡಿದೆ. ಕುವೆಂಪು ವಿಶ್ವವಿದ್ಯಾಲಯದ ಸುತ್ತಮುತ್ತಲಿನ ರಸ್ತೆ ಹಾಗೂ ಹಾಸ್ಟೆಲ್ ಪ್ರದೇಶಗಳಲ್ಲಿ ಕಸ ವಿಲೇವಾರಿ ವ್ಯವಸ್ಥೆ ಸರಿಯಾಗಿ ನಡೆಯದೇ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ನಿರ್ದಿಷ್ಟ ಸಮಯಕ್ಕೆ ಕಸ ಸಂಗ್ರಹವಾಗದ ಕಾರಣ ರಸ್ತೆ ಬದಿಗಳಲ್ಲಿ ಹಾಗೂ ಜನವಸತಿ ಪ್ರದೇಶಗಳಲ್ಲಿ ಕಸದ ರಾಶಿ ಕಾಣಿಸುತ್ತಿವೆ. ಕಸ ವಿಲೇವಾರಿ ಸರಿಯಾಗಿ ನಡೆಯದಿರುವುದರ ಜೊತೆಗೆ, ಸಾರ್ವಜನಿಕರು ಕಸವನ್ನು ನೇರವಾಗಿ ರಸ್ತೆಗಳ ಮೇಲೆ ಎಸೆದು ಹೋಗುತ್ತಿದ್ದಾರೆ. ಇದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ.
ಸ್ವಚ್ಛತೆ ಕುರಿತ ಅರಿವಿನ ಕೊರತೆ ಮತ್ತು ನಿರ್ಲಕ್ಷ್ಯದಿಂದ ಹಲವು ಭಾಗಗಳಲ್ಲಿ ದುರ್ವಾಸನೆ ಹೆಚ್ಚಾಗಿದೆ. ಜನರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಇದೆ. ನೊಣ, ಸೊಳ್ಳೆಗಳೂ ಹೆಚ್ಚಳಗೊಂಡಿವೆ. ಇದರಿಂದ ಸಾರ್ವಜನಿಕರಿಗಷ್ಟೇ ಅಲ್ಲದೆ ಪ್ರಾಣಿ ಪಕ್ಷಿಗಳಿಗೂ ತೊಂದರೆಯಾಗುತ್ತಿದೆ. ಸುತ್ತಲೂ ಅರಣ್ಯ ಪ್ರದೇಶವಿದ್ದು, ನಾಡಿನತ್ತ ಆಹಾರ ಅರಸಿ ಬರುವ ಕಾಡು ಪ್ರಾಣಿಗಳು ಕಸವನ್ನೇ ಆಹಾರವಾಗಿ ಸೇವಿಸುತ್ತಿವೆ.
ಕಸ ಸಂಗ್ರಹ ವಾಹನ ಸಿಬ್ಬಂದಿ ತಮಗೆ ಸಂಬಳ ಸರಿಯಾಗಿ ದೊರಕುತ್ತಿಲ್ಲ ಎಂದು ಹಾಗೂ ವೈಯಕ್ತಿಕ ಕಾರಣಗಳಿಂದ ಕಸ ವಿಲೇವಾರಿ ಸರಿಯಾಗಿ ಮಾಡುತ್ತಿಲ್ಲ. ಇದರ ಪರಿಣಾಮವಾಗಿ ಈ ಸಮಸ್ಯೆ ಉಂಟಾಗಿದೆ. ಶೀಘ್ರ ಅವ್ಯವಸ್ಥೆ ಸರಿಪಡಿಸಲಾಗುವುದು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೇಳುತ್ತಾರೆ.
‘ಕಸ ವಿಲೇವಾರಿ ಸರಿಯಾಗಿ ಆಗದೆ ಇರುವ ಕಾರಣ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದೆ. ಸ್ಯಾನಿಟರಿ ಪ್ಯಾಡ್ಗಳನ್ನು ಹೊರಹಾಕಲು ಸಮಸ್ಯೆ ಆಗುತ್ತಿದೆ. ವಿಶ್ವವಿದ್ಯಾಲಯದ ಆಡಳಿತವಾದರೂ ಇದನ್ನು ಸರಿಪಡಿಸಲು ಮುಂದಾಗಬೇಕು’ ಎಂದು ಸ್ನಾತಕೋತ್ತರ ವಿದ್ಯಾರ್ಥಿನಿ ಯು.ಮೇಘನಾ ಮನವಿ ಮಾಡುತ್ತಾರೆ.
ಶಂಕರಘಟ್ಟದಿಂದ ಶಿವಮೊಗ್ಗದ ಕಡೆ ಹೋಗುವ ತಿರುವಿನಲ್ಲಿ ಒಂದು ಕಿ.ಮೀನಷ್ಟು ದೂರ ಕಸ ಸುರಿಯಲಾಗಿದೆ. ಈ ಸಮಸ್ಯೆ ಪರಿಹಾರಕ್ಕೆ ಗ್ರಾಮ ಪಂಚಾಯಿತಿ ಹಾಗೂ ವಿಶ್ವವಿದ್ಯಾಲಯದ ಆಡಳಿತ ಮುಂದಾಗಬೇಕಿದೆಭಾರ್ಗವಿ ಜಿ.ಆರ್ ಪತ್ರಿಕೋದ್ಯಮ ವಿದ್ಯಾರ್ಥಿನಿ ಕುವೆಂಪು ವಿ.ವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.