ADVERTISEMENT

ಸೊರಬ | ಶಾಶ್ವತ ಕುಡಿಯುವ ನೀರಿಗಾಗಿ ಯೋಜನೆ ಸಿದ್ಧ; ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 5:43 IST
Last Updated 15 ಅಕ್ಟೋಬರ್ 2025, 5:43 IST
ಸೊರಬ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಎದುರು ಪುರಸಭೆ ವ್ಯಾಪ್ತಿಯ ವಿವಿಧ ಕಾಮಗಾರಿ ಭೂಮಿ ಪೂಜೆ ಸಮಾರಂಭ ಉದ್ಘಾಟಿಸಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು.
ಸೊರಬ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಎದುರು ಪುರಸಭೆ ವ್ಯಾಪ್ತಿಯ ವಿವಿಧ ಕಾಮಗಾರಿ ಭೂಮಿ ಪೂಜೆ ಸಮಾರಂಭ ಉದ್ಘಾಟಿಸಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು.   

ಸೊರಬ: ತಾಲ್ಲೂಕಿನ ಪ್ರತಿಯೊಂದು ಗ್ರಾಮಕ್ಕೂ ಶರಾವತಿ ಹಿನ್ನೀರಿನಿಂದ ಕುಡಿಯುವ ನೀರು ಪೂರೈಸಲು ₹680 ಕೋಟಿ ವೆಚ್ಚದಲ್ಲಿ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು.

ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಎದುರು ಭಾನುವಾರ ಪುರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪುರಸಭೆ ವ್ಯಾಪ್ತಿಯ ವಿವಿಧ ಕಾಮಗಾರಿ ಭೂಮಿ ಪೂಜೆ ಸಮಾರಂಭ ಉದ್ಘಾಟಿಸಿ ಅವರು‌ ಮಾತನಾಡಿದರು.

ಸರ್ಕಾರದ ಅಧಿಕಾರ ಅವಧಿಯಲ್ಲಿ ತಾಲ್ಲೂಕಿನ ಪ್ರತಿಯೊಂದು ಗ್ರಾಮಕ್ಕೂ ಶುದ್ಧ ಕುಡಿಯುವ ನೀರು ಒದಗಿಸಲು ಹಾಗೂ ಕೃಷಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಲು ನೀಲನಕ್ಷೆ ತಯಾರಿಸಲಾಗಿದೆ. ಈ ಯೋಜನೆ ವ್ಯಾಪ್ತಿಗೆ ಆನವಟ್ಟಿ ಹಾಗೂ ಶಿರಾಳಕೊಪ್ಪ, ಪಟ್ಟಣ ಸೇರಿದಂತೆ 354 ಗ್ರಾಮಗಳಿಗೆ ಸೇರಿಸಿಕೊಳ್ಳಲಾಗಿದೆ ಎಂದರು.‌

ADVERTISEMENT

ಪುರಸಭೆ ವ್ಯಾಪ್ತಿಯಲ್ಲಿ‌ ₹2.5 ಕೋಟಿ ವೆಚ್ಚದಲ್ಲಿ ಪುರಸಭೆ ವ್ಯಾಪ್ತಿಯ ಕಾಮಗಾರಿಗೆ ಗುದ್ದಲಿ‌ಪೂಜೆ ಮಾಡಲಾಗಿದೆ. ಕೂಡಲೇ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿದೆ.‌ ಬೀದಿ ದೀಪ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳ‌ ಕುರಿತು ನನ್ನ ಗಮನಕ್ಕೆ ತನ್ನಿ.‌ ಸರ್ಕಾರದಿಂದ ಅನುದಾನ ಪಡೆಯುವುದು ನನ್ನ‌ ಜವಾಬ್ದಾರಿ.‌ ಪೌರ ಕಾರ್ಮಿಕರನ್ನು ಗೌರವದಿಂದ ಕಾಣಬೇಕು. ಪಟ್ಟಣದ ಸ್ವಚ್ಚತೆಗೆ ಆಧ್ಯತೆ ನೀಡುವ ಜತೆಗೆ ಹೆಚ್ಚುವರಿ ಪೌರ ಕಾರ್ಮಿಕರನ್ನು ನಿಯೋಜನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಪುರಸಭೆ ಮುಖ್ಯಾಧಿಕಾರಿ ಚಂದನ್ ಪ್ರಾಸ್ತಾವಿಕ‌ ಮಾತನಾಡಿದರು. ಪುರಸಭೆ ಅಧ್ಯಕ್ಷ ಪ್ರಭು ಮೇಸ್ತ್ರಿ, ಸದಸ್ಯರಾದ ಪ್ರಸನ್ನ ಕುಮಾರ್, ವೀರೇಶ್ ಮೇಸ್ತ್ರಿ, ಮಧುರಾಯ್ ಶೇಟ್,‌ ಅನ್ಸರ್ ಅಹ್ಮದ್, ಸುಲ್ತಾನ ಬೇಗಂ, ನಾಮ ನಿರ್ದೇಶಿತ ಸದಸ್ಯ ಪರುಶುರಾಮ್ ಸಣ್ಣಬೈಲು, ದಾನಪ್ಪ, ಶಿವಪ್ಪ, ಕಾಂಗ್ರೆಸ್ ಮುಖಂಡ ಗಣಪತಿ ಹುಲ್ತಿಕೊಪ್ಪ, ತಬಲಿ‌ ಬಂಗಾರಪ್ಪ, ಗ್ಯಾರಂಟಿ ಅನುಷ್ಠಾ‌ನ ಸಮಿತಿ ಅಧ್ಯಕ್ಷ ಜಯಶೀಲ ಗೌಡ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ‌ ಶೇಖರ್, ತಾ‌ಪಂ ಇಓ ಶಶಿಧರ್, ಕ್ಷೇತ್ರಶಿಕ್ಷಣಾಧಿಕಾರಿ ಆರ್.‌ಪುಷ್ಪಾ ಸೇರಿದಂತೆ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.