ADVERTISEMENT

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ: ಕರ್ನಾಟಕ ವಿದ್ಯುತ್ ನಿಗಮದ ವಿರುದ್ಧ ಆಕ್ರೋಶ

ವೆಂಕಟೇಶ ಜಿ.ಎಚ್.
Published 16 ಸೆಪ್ಟೆಂಬರ್ 2025, 20:02 IST
Last Updated 16 ಸೆಪ್ಟೆಂಬರ್ 2025, 20:02 IST
ಶಿವಮೊಗ್ಗ ಜಿಲ್ಲೆಯ ಕಾರ್ಗಲ್‌ನಲ್ಲಿ ಮಂಗಳವಾರ ನಡೆದ ಸಾರ್ವಜನಿಕರ ಅಹವಾಲು ಸಭೆಯ ನೋಟ
ಶಿವಮೊಗ್ಗ ಜಿಲ್ಲೆಯ ಕಾರ್ಗಲ್‌ನಲ್ಲಿ ಮಂಗಳವಾರ ನಡೆದ ಸಾರ್ವಜನಿಕರ ಅಹವಾಲು ಸಭೆಯ ನೋಟ   

ಕಾರ್ಗಲ್‌ (ಶಿವಮೊಗ್ಗ): ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಗೆ ಸಂಬಂಧಿಸಿ ಜಿಲ್ಲಾಡಳಿತವು ಮಂಗಳವಾರ ಇಲ್ಲಿ ಆಯೋಜಿಸಿದ್ದ ಅಹವಾಲು ಆಲಿಕೆ ಸಭೆಯಲ್ಲಿ ಯೋಜನೆಗೆ ಸ್ಥಳೀಯರು, ಪರಿಸರವಾದಿಗಳಿಂದ ವ್ಯಾಪಕ ವಿರೋಧ ವ್ಯಕ್ತವಾಯಿತು.

ಶರಾವತಿ ‍ಪಂಪ್ಡ್‌ ಸ್ಟೋರೇಜ್ ಯೋಜನೆಯ ವಿವರಗಳನ್ನು ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿ) ಅಧಿಕಾರಿಗಳು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕರಿಗೆ ನೀಡಿದರು.

ಶರಾವತಿ ನದಿ ಕಣಿವೆಯಲ್ಲಿ ಸುರಂದಲ್ಲಿ ನೀರು ಹರಿಸಿ, 2,000 ಮೆಗಾವಾಟ್ ವಿದ್ಯುತ್‌ ಉತ್ಪಾದಿಸಿ, ಸಂಗ್ರಹಿಸಿಟ್ಟು ಬೇಡಿಕೆ ಹೆಚ್ಚಿದಾಗ ಪೂರೈಸುವ ₹ 10,500 ಕೋಟಿ ವೆಚ್ಚದ ಯೋಜನೆಯು ಇದಾಗಿದೆ.

ADVERTISEMENT

ಸಭೆ ಮುಂದೂಡಲು ಆಗ್ರಹ

ಯೋಜನೆಯ ವಿಸ್ತೃತ ವರದಿ (ಡಿಪಿಆರ್‌)ಯನ್ನು ಕೆಪಿಸಿ ಈವರೆಗೆ ಬಹಿರಂಗಪಡಿಸಿಲ್ಲ. ಯೋಜನೆಯ ಅನುಷ್ಠಾನ ಕುರಿತಾದ ಮಾಹಿತಿ ಕನ್ನಡದಲ್ಲಿ ಲಭ್ಯವಿಲ್ಲ. ಅದನ್ನು  ಒದಗಿಸಿದ 6 ತಿಂಗಳ ನಂತರ ಅಹವಾಲು ಆಲಿಕೆ ಸಭೆ ಕರೆಯಬೇಕಿದೆ ಎಂದು ಒತ್ತಾಯಿಸಿದರು.

‘ಈ ವಿಚಾರದಲ್ಲಿ ಸ್ಥಳೀಯರನ್ನು ಕತ್ತಲೆಯಲ್ಲಿಟ್ಟು ಕೆಪಿಸಿ ಏಕಪಕ್ಷೀಯವಾಗಿ ವರ್ತಿಸಿದ್ದರಿಂದ ಸಭೆ ಮುಂದೂಡಬೇಕು ಎಂದು ಜನಸಂಗ್ರಾಮ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಅಖಿಲೇಶ್ ಚಿಪ್ಪಳಿ ಒತ್ತಾಯಿಸಿದ್ದಕ್ಕೆ ಸಭೆಯಲ್ಲಿದ್ದವರು ಬೆಂಬಲ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು, ‘45 ದಿನ ಮೊದಲೇ ಸಾರ್ವಜನಿಕರಿಗೆ ಸಭೆ ಮಾಹಿತಿ ನೀಡಲಾಗಿದ್ದು, ಮುಂದೂಡಲಾಗದು. ಆಕ್ಷೇಪಣೆಗಳನ್ನು ಲಿಖಿತವಾಗಿ ಕೊಟ್ಟರೆ ಕೇಂದ್ರದ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ಕಳುಹಿಸಿಕೊಡುವೆ’ ಎಂದು ಹೇಳಿದರು.

‘ಪಶ್ಚಿಮ ಘಟ್ಟದ ಧಾರಣಾ ಸಾಮರ್ಥ್ಯಕ್ಕೆ ಧಕ್ಕೆಯಾಗುವ ಯಾವುದೇ ಯೋಜನೆ ಜಾರಿ ವಿರುದ್ಧ ಹಿಂದೆಯೇ ಐಐಎಸ್‌ಸಿ ವಿಜ್ಞಾನಿಗಳು ವರದಿ ನೀಡಿದ್ದಾರೆ. ಅಳಿವಿನ ಅಂಚಿನಲ್ಲಿರುವ ಸಿಂಹ ಬಾಲದ ಸಿಂಗಳೀಕದ ಆವಾಸ ಸ್ಥಾನ ಬಾಧಿತವಾಗಲಿದೆ ಎಂದು ಯೋಜನೆಗೆ ಅರಣ್ಯ ಇಲಾಖೆ ಆಕ್ಷೇಪಿಸಿದೆ. ಎಲ್ಲ ಧಿಕ್ಕರಿಸಿ ಸರ್ಕಾರ ಜಾರಿಗೆ ಮುಂದಾಗಿದೆ ಎಂದು ರಾಜ್ಯ ಜೀವ ವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಆಕ್ಷೇಪಿಸಿದರು.

ಡಿಪಿಆರ್‌ ಬಹಿರಂಗಗೊಳಿಸದೇ, ಜನಾಭಿಪ್ರಾಯ ಸಂಗ್ರಹಕ್ಕೆ ಮುನ್ನವೇ ಮೆಗಾ ಎಂಜಿನಿಯರ್ಸ್ ಸಂಸ್ಥೆಗೆ ಟೆಂಡರ್‌ ಮೂಲಕ ಕಾಮಗಾರಿ ವಹಿಸಲಾಗಿದೆ. ಈಗಾಗಲೇ ₹ 8,000 ಕೋಟಿ ಬಿಡುಗಡೆ ಮಾಡಲಾಗಿದೆ ಎಂಬ ಮಾಹಿತಿ ಇದೆ. ಸರ್ಕಾರದ ಈ ನಡೆ ಅನುಮಾನಾಸ್ಪದ ಎಂದು ವನ್ಯಜೀವಿ ಕಾರ್ಯಕರ್ತ ಚಿಕ್ಕಮಗಳೂರಿನ ವೀರೇಶ್ ಹೇಳಿದರು.

‘ಊರಿಗೆ ರಸ್ತೆ ಮಾಡಿಕೊಡುವಂತೆ 30 ವರ್ಷಗಳಿಂದ ಕೇಳುತ್ತಿದ್ದೇವೆ. ಅದಕ್ಕೆ ಕಿವಿಗೊಡದ ಕೆಪಿಸಿ ಏಕಾಏಕಿ ಯೋಜನೆ ಅನುಷ್ಠಾನ ಪ್ರದೇಶಕ್ಕೆ ಸಂಪರ್ಕ ಕಲ್ಪಿಸಲು ರಸ್ತೆ ನಿರ್ಮಿಸಲು ಮುಂದಾಗಿದೆ. ಈ ವಿಚಾರದಲ್ಲಿ ಸ್ಥಳೀಯರಾದ ನಮ್ಮನ್ನು ಕತ್ತಲೆಯಲ್ಲಿಡಲಾಗಿದೆ’ ಎಂದು ತಳಕಳಲೆಯ ಸೂರಜ್ ಮುಪ್ಪಾನೆ ಆಕ್ಷೇಪಿಸಿದರು.

ಅರಣ್ಯ ಇಲಾಖೆಯ ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ, ಮಾಲಿನ್ಯ ನಿಯಂತ್ರಣ ಮಂಡಳಿ ಹಿರಿಯ ಪರಿಸರ ಅಧಿಕಾರಿ ರಮೇಶ ನಾಯಕ್, ಜಿಲ್ಲಾ ಪರಿಸರ ಅಧಿಕಾರಿ ಶಿಲ್ಪಾ ಹಾಗೂ ಕೆಪಿಸಿ ಎಂಜಿನಿಯರ್‌ ವಿಜಯಕುಮಾರ್ ಇದ್ದರು.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಅನುಷ್ಠಾನ ತಡೆಯುವ ಅಧಿಕಾರ ನನಗೆ ಇಲ್ಲ. ಆದರೆ ಜನಾಭಿಪ್ರಾಯ ಆಕ್ಷೇಪಣೆಗಳನ್ನು ಕೇಂದ್ರದ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ಕಳಿಸಿಕೊಡುವೆ
– ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ ಶಿವಮೊಗ್ಗ
ರೂಢಿಗತ ಹೆಸರಿಗೆ ಆಗ್ರಹ; ಸಭೆಯಲ್ಲಿ ಗದ್ದಲ
ಪಿಪಿಟಿ ಪ್ರದರ್ಶನದ ವೇಳೆ ಕೆಪಿಸಿ ಅಧಿಕಾರಿಗಳು ಯೋಜನಾ ಬಾಧಿತ ಪ್ರದೇಶದಲ್ಲಿರುವ ಸಸ್ತನಿ ಸರೀಸೃಪ ಹಾಗೂ ಜಲಚರಗಳಿಗೆ ಸ್ಥಳೀಯವಾಗಿ ರೂಢಿಗತ ಹೆಸರು ಉಲ್ಲೇಖಿಸದೇ ವೈಜ್ಞಾನಿಕ ಹೆಸರನ್ನು ಬಳಸಿದ್ದು ಸಭೆಯಲ್ಲಿ ಗದ್ದಲಕ್ಕೆ ಕಾರಣವಾಯಿತು. ಜಿಲ್ಲಾಧಿಕಾರಿ ಸೂಚನೆಯ ನಂತರ ರೂಢಿಗತ ಹೆಸರನ್ನು ಉಲ್ಲೇಖಿಸಿ ಕೆಪಿಸಿ ಅಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಅಹವಾಲು ಸಭೆಯಲ್ಲಿ ಆನ್‌ಲೈನ್‌ ಮೂಲಕ 14090 ಹಾಗೂ ಲಿಖಿತವಾಗಿ 800ಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾದವು.

ಬಿಜೆಪಿಯಿಂದ ಆಕ್ಷೇಪಣೆ ಸಲ್ಲಿಕೆ

‘ಉತ್ಪಾದನೆ ಆದ ವಿದ್ಯುತ್ತನ್ನು ಪಂಪ್‌ಹೌಸ್‌ಗೆ ಹೇಗೆ ಕೊಂಡೊಯ್ಯಲಾಗುತ್ತದೆ ಎಂಬುದರ ಮಾಹಿತಿ ಇಲ್ಲ. ಅಷ್ಟು ಪ್ರಮಾಣದ ವಿದ್ಯುತ್ ಸಾಗಣೆಗೆ ಈಗ ಅಸ್ತಿತ್ವದಲ್ಲಿರುವ ಸಾಗಣೆ ಮಾರ್ಗದಿಂದ ಸಾಧ್ಯವಿಲ್ಲ. ಹೊಸ ಸಾಗಣೆ ಮಾರ್ಗ ನಿರ್ಮಿಸಲು ಮತ್ತೆ ಎಷ್ಟು ಸಾವಿರ ಎಕರೆ ಅರಣ್ಯ ಪ್ರದೇಶ ನಾಶವಾಗುತ್ತದೆ. ಎಷ್ಟು ಹಣ ಖರ್ಚಾಗುತ್ತದೆ ಎಂಬ ಮಾಹಿತಿ ಬಹಿರಂಗಪಡಿಸಿಲ್ಲ. ಈ ವಿಚಾರದಲ್ಲಿ ಕೆಪಿಸಿ ಜನರನ್ನು ವಂಚಿಸುತ್ತಿದೆ. ಇದನ್ನು ನಾವು ವಿರೋಧಿಸುತ್ತೇವೆ’ ಎಂದು ಬಿಜೆಪಿಯ ರಾಜ್ಯ ಘಟಕದ ಉಪಾಧ್ಯಕ್ಷ ಹರತಾಳು ಹಾಲಪ್ಪ ಜಿಲ್ಲಾಧಿಕಾರಿಗೆ ಲಿಖಿತವಾಗಿ ಆಕ್ಷೇಪಣೆ ಸಲ್ಲಿಸಿದರು.

ಕೆಪಿಸಿ ಅಧಿಕಾರಿ ವಿಜಯಕುಮಾರ್ ಗೇರುಸೊಪ್ಪಾದಿಂದ ಈಗ ಅಸ್ತಿತ್ವದಲ್ಲಿರುವ ಮಾರ್ಗದಲ್ಲಿಯೇ ವಿದ್ಯುತ್ ಸಾಗಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು. ‘ಸಭೆಗೆ ತಪ್ಪು ಮಾಹಿತಿ ನೀಡುತ್ತಿದ್ದೀರಿ. ಅದು ಕಾರ್ಯಸಾಧುವಲ್ಲ. ಯೋಜನೆಯ ಸಮಗ್ರ ಮಾಹಿತಿ ಕನ್ನಡಕ್ಕೆ ತರ್ಜುಮೆ ಮಾಡಿ ಕೊಡಿ ನಂತರ ಬಹಿರಂಗ ಚರ್ಚೆಗೆ ಬನ್ನಿ’ ಎಂದು ಹಾಲಪ್ಪ ಸವಾಲು ಎಸೆದರು.

ಮುಂದೆ ನಮಗೆ ಜಾಗವಿರುವುದಿಲ್ಲವೇನೊ?
‘ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ ವ್ಯಾಪ್ತಿಯ ಪ್ರದೇಶದಲ್ಲಿ ನೆಲೆಸಿರುವವರಲ್ಲಿ ಹಕ್ಕುಪತ್ರ ಇರುವವರಿಗೆ ಪರಿಹಾರ ಕೊಡಲಾಗುವುದು ಎಂದು ಕೆಪಿಸಿಯವರು ಹೇಳುತ್ತಿದ್ದಾರೆ. ಅಜ್ಜ ಮುತ್ತಜ್ಜನ ಕಾಲದಿಂದಲೂ ಅರಣ್ಯ ಪ್ರದೇಶದಲ್ಲಿ ವಾಸವಿದ್ದೇವೆ. ಶರಾವತಿ ಕಣಿವೆ ವ್ಯಾಪ್ತಿಯ ಹೆನ್ನಿ ಅಂಜಕ್ಕಿ ಸುಂಕಮನೆ ಹರಕುಣೆ ಮರಾಠಿಕೇರಿ ಹಾರೆಕ್ಕೆ ಸುತ್ತಲೂ ವಾಸವಿರುವ ನಮ್ಮಂತೆಯೇ ನೂರಾರು ಮಂದಿಗೆ ಮನೆ ಜಾಗಕ್ಕೆ ಹಕ್ಕುಪತ್ರ ಇಲ್ಲ. ಭವಿಷ್ಯ ಏನು? ಮುಂದೆ ನಮಗೆ ಜಾಗವಿರುವುದಿಲ್ಲವೇನೋ ಎಂಬ ಅಂಜಿಕೆ ಈಗಲೇ ಕಾಡುತ್ತಿದೆ’ ಎಂದು ಸಾಗರ ತಾಲ್ಲೂಕಿನ ಹೆನ್ನಿಯ ದುರುಗಪ್ಪ ಹಾಗೂ ಹಾರೆಕ್ಕೆಯ ತಿಮ್ಮಪ್ಪ ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.