ADVERTISEMENT

ಶಿವಮೊಗ್ಗ: ವಿದ್ಯುತ್ ಸ್ಪರ್ಶದಿಂದ ಎರಡು ಕಾಡಾನೆ ಸಾವು

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2022, 11:20 IST
Last Updated 25 ಸೆಪ್ಟೆಂಬರ್ 2022, 11:20 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಶಿವಮೊಗ್ಗ: ಇಲ್ಲಿನ ಆಯನೂರು ಸಮೀಪದ ಚನ್ನಹಳ್ಳಿಗೆ ಭಾನುವಾರ ಬೆಳಗಿನ ಜಾವ ಆಹಾರ ಅರಸಿ ಬಂದ ಎರಡು ಗಂಡು ಕಾಡಾನೆಗಳು ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾಗಿವೆ.

ಚನ್ನಹಳ್ಳಿಯ ಚಂದ್ರಾ ನಾಯಕ್ ಎಂಬುವವರು ಕಾಡಂಚಿನ ಮೂರು ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದು, ಬೆಳೆ ರಕ್ಷಣೆಗೆ ಹೊಲಕ್ಕೆ ಸುತ್ತಲೂ ಬೇಲಿ ಹಾಕಿ ಅದಕ್ಕೆ ಮೇನ್‌ ಲೈನ್‌ನಿಂದಲೇ ವಿದ್ಯುತ್ ಸಂಪರ್ಕ ನೀಡಿದ್ದಾರೆ.

ಪ್ರತಿ ಮಳೆಗಾಲದಂತೆ ಈ ಬಾರಿಯೂ ಶಿವಮೊಗ್ಗ ಸಮೀಪದ ಶೆಟ್ಟಿಹಳ್ಳಿ ಅಭಯಾರಣ್ಯಕ್ಕೆ ಭದ್ರಾ ಅಭಯಾರಣ್ಯದಿಂದ ಏಳು ಆನೆಗಳು ಬಂದಿವೆ. ಅದರಲ್ಲಿ ಎರಡು ಸಮೀಪದ ಆನೆಸರದ ಮೂಲಕ ಚನ್ನಹಳ್ಳಿಯ ಹೊಲಕ್ಕೆ ಹೋಗಿವೆ. ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿವೆ. ಸಾವಿಗೀಡಾದ ಸಲಗಗಳ ವಯಸ್ಸು 14ರಿಂದ 15 ಇದೆ ಎಂದು ತಿಳಿದುಬಂದಿದೆ.

ADVERTISEMENT

ಎರಡೂ ಆನೆಗಳ ಮರಣೋತ್ತರ ಪರೀಕ್ಷೆ ಸಂಜೆ ಸ್ಥಳದಲ್ಲಿ ನಡೆಯಿತು. ಅಂತ್ಯಕ್ರಿಯೆ ಅಲ್ಲಿಯೇ ನೆರವೇರಿತು. ಹೊಲದ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.