ಶಿವಮೊಗ್ಗ: ‘ಕವಿತೆಯ ಒಳ್ಳೆಯ ಮಾತು ಹೃದಯ ಸ್ವಚ್ಛಗೊಳಿಸುವುದಾದರೆ ಅದು ರಕ್ತದಾನ ಮಾಡಿದ್ದಕ್ಕಿಂತ ದೊಡ್ಡದು. ಅಳುವವರ ಅಳು ನಿಲ್ಲಿಸುವ ಶಕ್ತಿ ಕವನಕ್ಕಿದೆ’ ಎಂದು ಕವಿ ಅಸಾದುಲ್ಲಾ ಬೇಗ್ ಹೇಳಿದರು.
ಕನ್ನಡ ಸಾಹಿತ್ಯ ಸಾಂಸ್ಕೃತಿಕ ಜಿಲ್ಲಾ ವೇದಿಕೆಯಿಂದ ಆದಿಚುಂಚನಗಿರಿ ಮಠದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ದಸರಾ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಕವಿತೆಯ ಮೂಲಕ ಏನೇ ಹೇಳಿದರೂ ನಂಬುವಂತಿರಬೇಕು. ಕವನದ ಓದು ಬಾಡಿದ ಮೊಗವನ್ನು ಅರಳಿಸಬೇಕು. ಕವಿತೆಯಲ್ಲಿ ಪ್ರಾಸವಿರಬೇಕು ಎಂಬ ಕಟ್ಟುಪಾಡು ಬೇಕಿಲ್ಲ ಎನ್ನುತ್ತ ‘ದೇವರು ಮಲಗಿದ್ದಾನೆ’ ಶೀರ್ಷಿಕೆಯ ಕವನ ವಾಚಿಸಿದರು.
‘ದಸರಾ ಕವಿಗೋಷ್ಠಿ ಪ್ರತಿ ವರ್ಷ ಮಾಡುತ್ತಿದ್ದೇವೆ. ಈ ಬಾರಿ ರಾಜ್ಯದ ಬೇರೆ– ಬೇರೆ ಜಿಲ್ಲೆಗಳಿಂದ ಎಂಬತ್ತು ಕವಿಗಳು ತಮ್ಮ ಕವನ ಕಳುಹಿಸಿದ್ದರು. ಅವುಗಳಲ್ಲಿ ಆಯ್ದ ಐವತ್ತೈದು ಕವನಗಳನ್ನು ಆಯ್ಕೆಮಾಡಿ ಎರಡು ಕವಿಗೋಷ್ಠಿ ಏರ್ಪಡಿಸಿದ್ದೇವೆ’ ಎಂದು ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಅಧ್ಯಕ್ಷ ಡಿ. ಮಂಜುನಾಥ ಹೇಳಿದರು.
ಸಾಹಿತಿ ದೇವನೂರು ಅಚ್ಚುತರಾವ್ ಅವರ ‘ಚಿಂತನ-ಮಂಥನ ಪೋಷಕರು’, ‘ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೊಂದು ದಿನದರ್ಶಿಕೆ ಏನಂತೀರಾ’ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಮೂವತ್ತು ಕವಿಗಳು ಗೋಷ್ಠಿಯಲ್ಲಿ ಕವನ ವಾಚಿಸಿದರು.
ಆದಿಚುಂಚನಗಿರಿ ಪೀಠದ ನಾದಮಯಾನಂದನಾಥ ಸ್ವಾಮೀಜಿ, ಕವಯಿತ್ರಿ ಬಿ. ಟಿ. ಅಂಬಿಕಾ, ಸಿದ್ಧಾರ್ಥ, ಪ್ರತೀಕ, ಎಂ.ಎಂ.ಸ್ವಾಮಿ, ಕೆ.ಎಸ್.ಮಂಜಪ್ಪ, ಶಿವಪ್ಪಗೌಡ ಇದ್ದರು.
ಕವಿಗಳು ವರ್ತಮಾನದ ಬೇಗುದಿಗಳಿಗೆ ಧ್ವನಿಯಾಗಬೇಕು. ಬರೆಯುವವರಿಗೆ ಜವಾಬ್ದಾರಿ ಹೆಚ್ಚಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.ಡಿ. ಮಂಜುನಾಥ, ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.