ಶಿರಾಳಕೊಪ್ಪ: ಪಟ್ಟಣದಲ್ಲಿ ಸೋಮವಾರ ಹಿಂದೂ ಜಾಗರಣ ವೇದಿಕೆಯು ಸ್ವಯಂ ಪ್ರೇರಿತ ಬಂದ್ಗೆ ಕರೆ ನೀಡಿದ್ದರಿಂದ ಪೊಲೀಸರು ಎರಡೂ ಸಮುದಾಯದ ಪ್ರಮುಖರೊಂದಿಗೆ ಭಾನುವಾರ ಪ್ರತ್ಯೇಕವಾಗಿ ಶಾಂತಿ ಸಭೆ ನಡೆಸಿದರು.
‘ಹಿಂದೂ ಜಾಗರಣ ವೇದಿಕೆ ಹೊರಡಿಸಿರುವ ಭಿತ್ತಿಪತ್ರದ ಅಂಶಗಳು ಸತ್ಯಕ್ಕೆ ದೂರವಾಗಿವೆ. ಒಂದುವೇಳೆ ಅವು ನಿಜವಾಗಿದ್ದರೆ ಅವುಗಳನ್ನು ತೋರಿಸಿಕೊಡಬೇಕು. ವಿನಾಕಾರಣ ಸಮುದಾಯವನ್ನು ಆರೋಪಿತರನ್ನಾಗಿ ಮಾಡುವುದು ಸರಿಯಲ್ಲ’ ಎಂದು ಪಟ್ಟಣದ ಅಂಜುಮನ್ ಇಸ್ಲಾಂ ಕಮಿಟಿಯ ಸದಸ್ಯರು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ಕುಮಾರ್ ಎಸ್. ಭೂಮರೆಡ್ಡಿ, ‘ಹಿಂದೂ ಜಾಗರಣ ವೇದಿಕೆ ಬಂದ್ ಕುರಿತು ನಮ್ಮ ಬಳಿ ಯಾವುದೇ ಅನುಮತಿ ಪಡೆದಿಲ್ಲ. ಪ್ರತಿಭಟನೆ ಮಾಡಲು ಸಂವಿದಾನ ಬದ್ಧ ಹಕ್ಕಿದೆ. ಪ್ರತಿಭಟನೆಯ ವೇಳೆ ಪ್ರಚೋದನಕಾರಿ ಭಾಷಣ, ಅಹಿತಕರ ಘಟನೆ, ಬಲವಂತವಾಗಿ ಬಂದ್ಗೆ ಒತ್ತಾಯಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಭಿತ್ತಿ ಪತ್ರದಲ್ಲಿ ನಮೂದಿಸಿರುವ ಅಂಶಗಳ ಕುರಿತು ವಿವರ ಪಡೆಯಲಾಗುವುದು. ಸಾರ್ವಜನಿಕರು ಪೊಲೀಸ್ ಇಲಾಖೆಯ ಜತೆಗೆ ಶಾಂತಿಯಿಂದ ಸಹಕರಿಸಿ’ ಎಂದರು.
ನಂತರದ ಹಿಂದೂ ಜಾಗರಣ ವೇದಿಕೆಯೊಂದಿಗೆ ನಡೆದ ಶಾಂತಿಸಭೆಯಲ್ಲಿ ಕಾರ್ಯಕರ್ತರು, ‘ಪೊಲೀಸರು ಹಿಂದೂ ಯುವಕರ ಮೇಲೆ ಹಲ್ಲೆ ನಡೆಸಿ ಮೊಕದ್ದಮೆ ದಾಖಲಿಸಿದ್ದಾರೆ. ಹಿಂದೂ ಯುವಕರ ಮೇಲೆ ದೌರ್ಜನ್ಯ ಎಸಗಿದ ಅಧಿಕಾರಿಗಳನ್ನು ಅಮಾನತು ಮಾಡಬೇಕು’ ಎಂದು ಆಗ್ರಹಿಸಿದರು.
‘ನಾವು ಸ್ವಯಂ ಪ್ರೇರಿತ ಬಂದ್ಗೆ ಕರೆ ನೀಡಿದ್ದೇವೆ. ಯಾರ ಮೇಲೂ ಒತ್ತಡ ಹೇರಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.