ADVERTISEMENT

ಶಿಕಾರಿಪುರ: ಜನಮನ ಸೆಳೆದ ಶಿವಾಚಾರ್ಯ ಸದ್ಭೋದನಾ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 2:57 IST
Last Updated 22 ಜನವರಿ 2026, 2:57 IST
ಶಿಕಾರಿಪುರ ತಾಲ್ಲೂಕು ಕಡೇನಂದಿಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದ ಶಿವಾಚಾರ್ಯ ಸದ್ಭೋದನಾ ಪಾದಯಾತ್ರೆಯ ನೋಟ
ಶಿಕಾರಿಪುರ ತಾಲ್ಲೂಕು ಕಡೇನಂದಿಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದ ಶಿವಾಚಾರ್ಯ ಸದ್ಭೋದನಾ ಪಾದಯಾತ್ರೆಯ ನೋಟ   

ಶಿಕಾರಿಪುರ: ವೀರಶೈವ ಧರ್ಮ ಪ್ರಸಾರ ಮಾಡುವ ಉದ್ದೇಶಕ್ಕಾಗಿ ತಾಲ್ಲೂಕಿನ ಕಡೇನಂದಿಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದ ಶಿವಾಚಾರ್ಯ ಸದ್ಭೋದನಾ ಪಾದಯಾತ್ರೆ ಗ್ರಾಮದ ಜನರ ಮನಸೆಳೆಯುವಲ್ಲಿ ಯಶಸ್ವಿಯಾಯಿತು.

ಅಖಿಲ ಭಾರತ ಶಿವಾಚಾರ್ಯ ಸಂಸ್ಥೆ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಜಿಲ್ಲೆಯಲ್ಲಿನ ಶಿವಾಚಾರ್ಯ ಪರಂಪರೆಯ ಸ್ವಾಮೀಜಿಗಳು ಗ್ರಾಮದಲ್ಲಿ ಪಾದಯಾತ್ರೆ ಮೂಲಕ ಸಂಚರಿಸಿದರು. ಭಕ್ತರಿಗೆ ವಿಭೂತಿ ಹಚ್ಚಿ, ರುದ್ರಾಕ್ಷಿ ಧಾರಣೆ ಮಾಡಿದರು. ವೀರಶೈವ ಧರ್ಮಗ್ರಂಥ ಸಿದ್ಧಾಂತ ಶಿಖಾಮಣಿಯ ಸಣ್ಣ ಪುಸ್ತಕ, ಮಾಹಿತಿ ಪತ್ರ ನೀಡಿ, ಲಿಂಗಧಾರಣೆ ಮಹತ್ವ ತಿಳಿಸುತ್ತಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು.

ವಿಭೂತಿ, ರುದ್ರಾಕ್ಷಿ, ಲಿಂಗಧಾರಣೆ ವೈಜ್ಞಾನಿಕ ಮಹತ್ವ ಹೊಂದಿವೆ. ತಮ್ಮ ‘ಇಷ್ಟ’ವನ್ನು ಲಿಂಗರೂಪದಲ್ಲಿ ಧರಿಸಿ ಅದಕ್ಕೆ ಷೋಡಶ ಪೂಜೆ ಸಲ್ಲಿಸಿ ಏಕಾಗ್ರತೆಯಲ್ಲಿ ಮಂತ್ರ ಜಪಿಸಿದರೆ ಅದು ಮನುಷ್ಯನ ಮಾನಸಿಕ, ದೈಹಿಕ, ಸಾಮಾಜಿಕ ಬದಲಾವಣೆಗೆ ಕಾರಣವಾಗುತ್ತದೆ. ರಾಜ್ಯದ ಆರು ಜಿಲ್ಲೆಯ ನೂರಾರು ಗ್ರಾಮಗಳಲ್ಲಿ ಶಿವಾಚಾರ್ಯ ಸಂಸ್ಥೆ ಮೂಲಕ ಧರ್ಮ ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ ಎಂದು ಕಡೇನಂದಿಹಳ್ಳಿಯ ದುಗ್ಲಿ ಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ADVERTISEMENT

ಸ್ವಾಮೀಜಿಗಳು ಸಾಮೂಹಿಕವಾಗಿ ಗ್ರಾಮದಲ್ಲಿ ಪಾದಯಾತ್ರೆ ನಡೆಸಿ ಧರ್ಮಜಾಗೃತಿ ಮೂಡಿಸಿರುವುದಲ್ಲದೆ ಧರ್ಮದ ವೈಜ್ಞಾನಿಕ ದೃಷ್ಟಿಕೋನ ತಿಳಿಸಿ ಧರ್ಮರಕ್ಷಣೆ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಮುಖಂಡ ಬಸವರಾಜಪ್ಪ ಹೇಳಿದರು.

ವಿವಿಧೆಡೆಯಲ್ಲಿ ನಡೆದ ಪಾದಯಾತ್ರೆಯಲ್ಲಿ ಸ್ವಾಮೀಜಿಗಳೊಂದಿಗೆ ಪಾಲ್ಗೊಂಡಿದ್ದ 80ಕ್ಕೂ ಹೆಚ್ಚು ಜನರಿಗೆ ಗುರುರಕ್ಷೆ ನೀಡಲಾಯಿತು. 20ಕ್ಕೂ ಹೆಚ್ಚು ಸ್ವಾಮೀಜಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.