ಶಿವಮೊಗ್ಗ: ಶಿವಾಜಿ ಮಹಾರಾಜರು ಧೈರ್ಯ, ಶೌರ್ಯ ಮತ್ತು ಸ್ವಾಭಿಮಾನದ ಸಂಕೇತವಾಗಿದ್ದರು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್. ಚಂದ್ರಭೂಪಾಲ ಹೇಳಿದರು.
ಜಿಲ್ಲಾಡಳಿತದಿಂದ ಗುರುವಾರ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಶಿವಾಜಿ ಮಹಾರಾಜರು ಹಿಂದೂಸ್ತಾನಕ್ಕೆ ನೀಡಿದ ಕೊಡುಗೆ ಅಪಾರ. ಎಲ್ಲ ಕ್ಷೇತ್ರಗಳಲ್ಲಿ ಮರಾಠ ಸಮಾಜದ ಅಸ್ತಿತ್ವ ಕಾಣಬಹುದಾಗಿದೆ. ನಮ್ಮ ಮಕ್ಕಳಿಗೆ ಶಿವಾಜಿ ಮಹಾರಾಜರ ಬಗ್ಗೆ ತಿಳಿಸಬೇಕಿದೆ. ಧೈರ್ಯ, ಶೌರ್ಯ, ಮಹಿಳೆಯರಿಗೆ ಗೌರವ, ಹೋರಾಟದ ಶ್ರದ್ಧೆ ಮತ್ತು ಸ್ವಾಭಿಮಾನದಂತಹ ಗುಣಗಳನ್ನು ಶಿವಾಜಿ ಅವರಿಂದ ಕಲಿಯಬೇಕಿದೆ’ ಎಂದರು.
ತೀರ್ಥಹಳ್ಳಿ ಚಿಟ್ಟೆಬೈಲು ಪ್ರಜ್ಞಾಭಾರತಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಲೋಹಿತಾಶ್ವ ಕೇದಿಗ್ಗೆರೆ ವಿಶೇಷ ಉಪನ್ಯಾಸ ನೀಡಿ, ‘ಶಿವಾಜಿ ಚಿಕ್ಕವನಿರುವಾಗಲೇ ಧೈರ್ಯದ, ಶೌರ್ಯದ, ಸ್ವಾಭಿಮಾನದ ಶಿಕ್ಷಣವನ್ನು ತಾಯಿ ಜೀಜಾಬಾಯಿ ನೀಡಿದ್ದರು. ಶಿವಾಜಿಯವರ ಚಿಂತನೆಗಳು, ತತ್ವಗಳು ನಮ್ಮ ಮಕ್ಕಳಲ್ಲಿ ಬರಬೇಕೆಂದರೆ ಎಲ್ಲ ತಾಯಂದಿರು ಜೀಜಾಬಾಯಿ ಆಗಬೇಕು. ಶಿವಾಜಿ 12ನೇ ವಯಸ್ಸಿನಲ್ಲಿಯೇ ಸ್ವಯಂಭು ಲಿಂಗದ ಮುಂದೆ ಹಿಂದುವೀ ಸಾಮ್ರಾಜ್ಯ ನಿರ್ಮಾಣ ಮಾಡುವ ಸಂಕಲ್ಪ ಮಾಡಿದ್ದರು’ ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ವಿ.ಅಭಿಷೇಕ್ ಮಾತನಾಡಿ, ‘ದೇಶದ ಅತ್ಯಂತ ಪ್ರಮುಖ ರಾಜರಲ್ಲಿ ಶಿವಾಜಿ ಮಹಾರಾಜರು ಒಬ್ಬರಾಗಿದ್ದರು. ಧೈರ್ಯ, ಶೌರ್ಯಕ್ಕೆ ಅವರು ಮಾದರಿಯಾಗಿದ್ದರು. ಸಂಘಟಿತ ನೌಕಾಪಡೆಯನ್ನು ನಿರ್ಮಿಸಿದ ಮಹಾನ್ ಯೋಧರಾಗಿದ್ದರು. ಇಂತಹ ಮಹಾನ್ ವ್ಯಕ್ತಿಯ ಸಂದೇಶ, ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ’ ಎಂದರು.
ಎಎಸ್ಪಿ ಕಾರಿಯಪ್ಪ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ನ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಚಂದ್ರರಾವ್ ಗಾರ್ಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.