ಆನಂದಪುರ: ‘ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸುತ್ತದೆ ಎಂಬ ಕಾಂಗ್ರೆಸ್ ಅಪಪ್ರಚಾರಕ್ಕೆ ಕಿವಿಗೊಡಬೇಡಿ’ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಮನವಿ ಮಾಡಿದರು.
ಅವರು ಆನಂದಪುರದಲ್ಲಿ ಬುಧವಾರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
‘ಉತ್ತಮ ಉದ್ದೇಶವನ್ನು ಹೊಂದಿರುವ ಸಂವಿಧಾನವನ್ನು ಬದಲಿಸುವುದು ಅಸಾಧ್ಯ. ಅಂಬೇಡ್ಕರ್ ಅವರ ಹುಟ್ಟು ಸಾವಿನ ಸ್ಥಳ ಸೇರಿ 5 ಸ್ಥಳಗಳನ್ನು ಪಂಚ ಕ್ಷೇತ್ರಗಳಾಗಿ ಅಭಿವೃದ್ಧಿ ಮಾಡುತ್ತಿದ್ದಾರೆ. ಬಿಜೆಪಿ ಯಾವಗಲೂ ಸಂವಿಧಾನಕ್ಕೆ ಧಕ್ಕೆ ಆಗುವ ಕೆಲಸ ಮಾಡುವುದಿಲ್ಲ’ ಎಂದು ತಿರುಗೆಟು ನೀಡಿದರು.
‘ಈ ಬಾರಿ ನಡೆಯುತ್ತಿರುವುದು ರಾಷ್ಟ್ರಕ್ಕಾಗಿ ಚುನಾವಣೆ, ಜಾತಿಗಾಗಿ ಮತವಲ್ಲ. ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದ್ದು, ದಲ್ಲಾಳಿಗಳ ಮೂಲಕ ವಸೂಲಿ ಮಾಡುವುದೇ ಅವರ ಕಾರ್ಯಕ್ರಮವಾಗಿದೆ’ ಎಂದು ಮಾಜಿ ಸಚಿವ ಕುಮಾರ ಬಂಗಾರಪ್ಪ ಹೇಳಿದರು.
‘ನಮ್ಮ ಬಾವ, ತಂಗಿ, ತಮ್ಮ ಯಾರೇ ಬಂದರೂ ಬಿಜೆಪಿಯನ್ನು ಅಲುಗಾಡಿಸುವುದಕ್ಕೆ ಅಗುವುದಿಲ್ಲ. ಕೈಯ ಮುಷ್ಠಿ ಕಟ್ಟಿದಾಗ ರಾಜಕಾರಣದಲ್ಲಿ ಯಾವಾಗಲೂ ಹೆಬ್ಬಟ್ಟಿನ ಕೆಲಸವನ್ನು ಅಂದರೆ ಎದ್ದು ನಿಲ್ಲುವ ಕೆಲಸವನ್ನು ಬಿಜೆಪಿ ಮಾಡುತ್ತದೆ. ರಾಘಣ್ಣನ ಕೆಲಸದ ಮುಂದೆ ಅವರ ಆಟ ನಡೆಯಲ್ಲ’ ಎಂದು ತಮ್ಮ ವಿರೋಧಿ ಗುಂಪಿಗೆ ಟಾಂಗ್ ನೀಡಿದರು.
‘ಚಿತ್ರರಂಗದಲ್ಲಿ ನಾಯಕ ನಾಯಕಿ ಹೀಗಿರಬೇಕು ಹಾಗಿರಬೇಕು ಎಂದು ಹೇಳುತ್ತೇವೆ. ಆದರೆ ರಾಜಕೀಯ ರಂಗದಲ್ಲಿ ನಾಯಕನಿಗಿಂತ ಸೇವಕ ಬೇಕು. ಕಷ್ಟಗಳನ್ನು ಆಲಿಸುವ, ಬದುಕು ಕಟ್ಟಿಕೊಡುವಂತಹ ಮಹಾನ್ ಸೇವಕ ಬೇಕು. ಆ ರೀತಿಯಲ್ಲಿ ಸೇವೆ ಮಾಡುತ್ತಾ ಮನೆ ಮಗನಾಗಿ ಕೆಲಸ ನಿರ್ವಹಿಸುತ್ತಿರುವ ಸಹೋದರ ರಾಘಣ್ಣನನ್ನು ಅತ್ಯಧಿಕ ಅಂತರದಿಂದ ಗೆಲ್ಲಿಸಬೇಕು’ ಎಂದು ಚಿತ್ರನಟಿ ತಾರ ಹೇಳಿದರು.
ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಹರತಾಳು ಹಾಲಪ್ಪ, ಪ್ರಮುಖರಾದ ರತ್ನಾಕರ್ ಹೊನಗೋಡು, ಮಲ್ಲಿಕಾರ್ಜುನ ಹಕ್ರೆ, ಶಾಂತಪ್ಪಗೌಡ, ರಾಜನಂದಿನಿ ಕಾಗೋಡು, ಪ್ರಸನ್ನ ಕರೆಕೈ, ದೇವೆಂದ್ರಪ್ಪ, ಮೋಹನ್ ಕುಮಾರ್, ಗುರುರಾಜ್, ಹಿರಣಯ್ಯ, ಪ್ರಕಾಶ್, ಮೋಹನ್ ಕಾಲೊನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.