ಹೊಸನಗರ: ಮೇಯಲು ಹೋಗಿದ್ದ 9 ವರ್ಷದ ಮಲೆನಾಡು ಗಿಡ್ಡ ತಳಿಯ ಹಸುವಿನ ಕೆಚ್ಚಲು ಕೊಯ್ಯಲಾಗಿದೆ ಎಂದು ಆರೋಪಿಸಿ ಹಸುವಿನ ಮಾಲೀಕ ಗಣೇಶ್ ಎಂಬುವವರು ಹೊಸನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
‘ಎಂದಿನಂತೆ ದನಗಳನ್ನು ಮೇಯಲು ಬಿಟ್ಟಿದ್ದೆವು. ಶನಿವಾರ ಸಂಜೆ ಊರಿನವರು ಕರೆ ಮಾಡಿ, ನಿಮ್ಮ ಹಸುವಿನ ಕೆಚ್ಚಲಿನಲ್ಲಿ ರಕ್ತ ಸೋರುತ್ತಿದೆ ಎಂದು ತಿಳಿಸಿದರು. ತಕ್ಷಣ ಸ್ಥಳಕ್ಕೆ ಹೋದೆವು. ಗ್ರಾಮಸ್ಥರ ಸಹಾಯದಿಂದ ಹಸುವನ್ನು ಮನೆಗೆ ತಂದು ಚಿಕಿತ್ಸೆ ಕೊಡಿಸಲಾಗಿದೆ. ಪಶು ವೈದ್ಯರು ಕೆಚ್ಚಲಿಗೆ ಹೊಲಿಗೆ ಹಾಕಿದ್ದಾರೆ’ ಎಂದು ವಿಜಾಪುರ ಗ್ರಾಮದ ತೋಟದಕೊಪ್ಪದ ಗಣೇಶ್ ದೂರಿನಲ್ಲಿ ತಿಳಿಸಿದ್ದಾರೆ.
‘ಗ್ರಾಮದ ವ್ಯಕ್ತಿಯೊಬ್ಬನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದೆ. ಕೆಚ್ಚಲಿಗೆ ತಂತಿ ತಗುಲಿ ಗಾಯವಾಗಿರಬಹುದು. ನಾನು ಕೃತ್ಯ ನಡೆಸಿಲ್ಲ ಎಂದು ಆತ ಹೇಳಿಕೆ ನೀಡಿದ್ದಾನೆ. ಪಶು ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಕೆಚ್ಚಲಲ್ಲಿ ಆಗಿರುವ ಗಾಯದ ಕುರಿತು ಅವರಿಂದ ಮಾಹಿತಿ ಪಡೆಯುತ್ತೇವೆ. ಕೆಚ್ಚಲು ಕೊಯ್ದಿರುವುದು ದೃಢಪಟ್ಟರೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ’ ಎಂದು ಎಸ್ಐ ಶಂಕರ ಗೌಡ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.