ರಿಪ್ಪನ್ಪೇಟೆ: ಕೆರೆಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಜುಲೈ ತಿಂಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, ಕೃಷಿ ಚಟುವಟಿಕೆ ಭರದಿಂದ ಸಾಗಿದೆ ಎಂದು ಸ್ಥಳೀಯ ಕೃಷಿ ಇಲಾಖಾ ಅಧಿಕಾರಿ ಶರಣಗೌಡ ಎಸ್.ಬಿರಾದಾರ ಮಾಹಿತಿ ನೀಡಿದರು.
ಈ ವ್ಯಾಪ್ತಿಯಲ್ಲಿ ವಾಡಿಕೆ ಮಳೆ 1067.6 ಮಿ.ಮೀ. ಆಗಿದ್ದು, ಜನವರಿ 2024ರಿಂದ ಇಲ್ಲಿಯವರೆಗೆ 1297.8 ಮಿ.ಮೀ. ಮಳೆ ದಾಖಲಾಗಿದೆ. 230.2 ಮಿ.ಮೀ. ಮಳೆ ಹೆಚ್ಚಳವಾದಂತಾಗಿದೆ. ಸ್ಥಳೀಯ ಹವಾಮಾನಕ್ಕೆ ಹೊಂದಿಕೊಳ್ಳುವ ಭತ್ತದ ತಳಿಗಳಾದ ಅಭಿಲಾಷ, ಆರ್ಎನ್ಆರ್, ಎಂಟಿಯು 1001 ಹಾಗೂ ವಿವಿಧ ತಳಿಯ ಮುಸುಕಿನ ಜೋಳದ ಬೀಜಗಳು ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
‘ಈವರೆಗೆ ಸುಮಾರು 750 ಎಕರೆ ಮುಸುಕಿನ ಜೋಳ ಹಾಗೂ ಶೇ 40ರಷ್ಟು ಪ್ರದೇಶದಲ್ಲಿ ಭತ್ತದ ನಾಟಿ ಮಾಡಲಾಗಿದೆ. ರೈತರು ತುಂತುರು ನೀರಾವರಿ ಯೋಜನೆಯಡಿ ಕಪ್ಪು ಪೈಪ್ಗಳನ್ನು ಹಾಗೂ ಕೃಷಿ ಯಾಂತ್ರೀಕರಣ ಯೋಜನೆಯಡಿ, ವಿವಿಧ ಯಂತ್ರೋಪಕರಣಗಳ ಸವಲತ್ತು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.