ಶಿವಮೊಗ್ಗ: ಇಲ್ಲಿನ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಒಂದೇ ದಿನದಲ್ಲಿ ಐದು ಮೊಬೈಲ್ ಬೇರಿಂಗ್ ಪಾರ್ಶಿಯಲ್ ನೀ ರಿಪ್ಲೇಸ್ಮೆಂಟ್ ಸರ್ಜರಿ (ಒಳ ಭಾಗದ ಅರ್ಧ ಮೊಣಕಾಲು ಬದಲಾವಣೆ ಶಸ್ತ್ರಚಿಕಿತ್ಸೆ) ಯಶಸ್ವಿಯಾಗಿ ನೆರವೇರಿಸಿದ್ದಾರೆ.
ಎಲುಬು, ಕೀಲು ಶಸ್ತ್ರಚಿಕಿತ್ಸಕ ಡಾ.ಎಂ.ಬಿ ಅಭಿಷೇಕ್ ನೇತೃತ್ವದ ತಜ್ಞರ ತಂಡ, ಮತ್ತು ಅನಸ್ತೇಶಿಯಾ ತಜ್ಞ ಡಾ. ಅಜಿತ್ ಶೆಟ್ಟಿ ಹಾಗೂ ಡಾ. ಚಕ್ರವರ್ತಿ ಸೊಂಡೂರು ಸಹಯೋಗದಲ್ಲಿ ಯಶಸ್ವಿಯಾಗಿ ಈ ಚಿಕಿತ್ಸೆ ನೆರವೇರಿಸಲಾಗಿದೆ.
50ರಿಂದ 75 ವರ್ಷ ವಯೋಮಿತಿಯಲ್ಲಿರುವ ಐದು ರೋಗಿಗಳು ಈ ಶಸ್ತ್ರಚಿಕಿತ್ಸೆಗೊಳಗಾಗಿದೆ. ಚಿಕಿತ್ಸೆಯ ನಂತರ ಯಾವುದೇ ನೋವು ಇಲ್ಲದೆ ದೈನಂದಿನ ಚಟುವಟಿಕೆಗಳನ್ನು ಪುನಃ ಪ್ರಾರಂಭಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಆಸ್ಪತ್ರೆಯ ಡಾ. ಅಭಿಷೇಕ್ ಎಂ.ಬಿ., ‘ಈ ಶಸ್ತ್ರ ಚಿಕಿತ್ಸೆ ದೇಹದಲ್ಲಿ ಯಾವುದೇ ದೊಡ್ಡ ಛೇಧನವಿಲ್ಲದೇ ನೇರವೇರಿಸಬಹುದಾದ ಶಸ್ತ್ರ ಚಿಕಿತ್ಸೆಯಾಗಿದೆ. ಇದು ಮೊಣಕಾಲಿನ ಒಳಭಾಗದ (ಮೀಡಿಯಲ್ ಕಂಪಾರ್ಟ್ಮೆಂಟ್) ಅಸ್ಥಿ ಸಂಧಿವಾತದಿಂದ ಬಳಲುವವರಿಗೆ ಉಪಯುಕ್ತ’ ಎಂದು ಹೇಳಿದರು.
ಈ ಎಲ್ಲಾ ರೋಗಿಗಳು ಸಂಧಿವಾತದ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಹೇಳಿದ ಅಭಿಷೇಕ್. ‘ಈ ಚಿಕಿತ್ಸೆಯಲ್ಲಿ, ಸ್ಥಿರ ಪ್ಲಾಸ್ಟಿಕ್ ಬೇರಿಂಗ್ ಮತ್ತು ಮೊಬೈಲ್ ಪ್ಲಾಸ್ಟಿಕ್ ಬೇರಿಂಗ್ ಎಂಬ ಎರಡು ಪ್ರಕಾರಗಳಿವೆ. ಮೊಬೈಲ್ ಬೇರಿಂಗ್ ಪ್ರಕಾರ ದೀರ್ಘಕಾಲದ ಬಾಳಿಕೆ ಹೊಂದಿದೆ. ಈ ಚಿಕಿತ್ಸೆಗೆ ಒಳಪಟ್ಟ ರೋಗಿಯು ಶೀಘ್ರ ಗುಣಮುಖನಾಗುವುದಲ್ಲದೆ, ರೋಗಿಯು ಯಾವುದೇ ತೊಂದರೆ ಇಲ್ಲದೆ ತನ್ನ ದೈನಂದಿನ ಕಾರ್ಯಗಳ ಮಾಡಬಹುದಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.