
ಶಿಕಾರಿಪುರ: ‘ಸಾಧನೆಗೆ ಆಕಾಶವೇ ಮಿತಿ ಎನ್ನುವ ಮನೋಭಾವ ವಿದ್ಯಾರ್ಥಿಗಳಲ್ಲಿ ಮೂಡಬೇಕು’ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಕ್ರೀಡೆ, ಎನ್ಎಸ್ಎಸ್, ಸ್ಕೌಟ್ಸ್ ಮತ್ತು ಗೈಡ್ಸ್, ರೆಡ್ಕ್ರಾಸ್ ಯುವ ಘಟಕ, ವಿವಿಧ ವಿದ್ಯಾರ್ಥಿ ಘಟಕಗಳ ಸಮಾರೋಪ, ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪದವಿ ಶಿಕ್ಷಣ ಸಮಯದಲ್ಲಿ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ತಮ್ಮ ಆಸಕ್ತಿ ಕ್ಷೇತ್ರದಲ್ಲೂ ಸಾಧನೆ ಮಾಡುವುದಕ್ಕೆ ಮುಂದಾಗಬೇಕು. ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದರೆ ಮಾತ್ರ ಭವಿಷ್ಯ ಎನ್ನುವ ಕಾಲ ಈಗಿಲ್ಲ. ಆಧುನಿಕ ಕಾಲಘಟ್ಟದಲ್ಲಿ ಕ್ರೀಡೆ, ಸಾಹಿತ್ಯ, ಸಂಗೀತದಲ್ಲಿ ಸಾಧನೆ ಮಾಡಿದರೂ ಉತ್ತಮ ಹಣ, ಕೀರ್ತಿ ದೊರೆಯುತ್ತದೆ. ಸಾಧನೆಗೆ ಸೀಮಿತ ಕ್ಷೇತ್ರ ಎನ್ನುವಂತಿಲ್ಲ. ಯಾವುದೇ ಕ್ಷೇತ್ರದಲ್ಲಾದರೂ ಸಾಧನೆ ಮಾಡಲು ಅವಕಾಶ ಇದೆ’ ಎಂದು ಹೇಳಿದರು.
‘ಶ್ರದ್ಧೆಯಿಂದ ಕೆಲಸ ಮಾಡಿದರೆ ಯಶಸ್ಸು ನಿಮ್ಮದಾಗುತ್ತದೆ. ವಿದ್ಯಾರ್ಥಿ ಜೀವನ ಅಮೂಲ್ಯ. ಮೊಬೈಲ್, ಸ್ನೇಹ, ಪಾರ್ಟಿ ಎನ್ನುವ ಮೋಹಕ್ಕೆ ಬಲಿಯಾಗದೆ ಯಶಸ್ಸಿನತ್ತ ಮುನ್ನುಗಿ’ ಎಂದು ಕಿವಿಮಾತು ಹೇಳಿದರು.
‘ಮಾನವೀಯ ಮೌಲ್ಯ ಉಳಿಸಿ ಬೆಳೆಸುವುದು ಇಂದಿನ ತುರ್ತು. ಈ ನಿಟ್ಟಿನಲ್ಲಿ ಯುವಜನ ಚಿಂತನೆ ನಡೆಸಬೇಕು. ಪಠ್ಯ ಚಟುವಟಿಕೆ ಜತೆ ಪಠ್ಯೇತರ ಚಟುವಟಿಕೆಯಲ್ಲೂ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಿ’ ಎಂದು ಪ್ರಾಂಶುಪಾಲ ಡಿ.ರಮೇಶ್ ಸಲಹೆ ನೀಡಿದರು.
ಜೂಡೋ, ಕುಸ್ತಿ ಪಂದ್ಯದಲ್ಲಿ ಅಂತರ ವಿ.ವಿ. ಪ್ರತಿನಿಧಿಸಿದ ವಿದ್ಯಾರ್ಥಿಗಳಾದ ಜೆ.ಎಂ.ಪವನ್, ಸತೀಶ್, ಮನೋಜ್, ಕವನಾ, ಗಂಗಾವತಿ, ಕಾವ್ಯಾ, ಗಣೇಶ್, ನಂದೀಶ್, ನಾಗರಾಜ್ ಸೇರಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಎಸಿಎಕ್ಯೂ ಸಂಚಾಲಕ ವಿ.ಹರೀಶ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಆರ್.ಕೆ.ವಿನಯ್, ಬಿ.ವಿ.ಸೌಮ್ಯಾ, ಎನ್ಸಿಸಿ ಅಧಿಕಾರಿಗಳಾದ ಸಿ.ಎಚ್.ಅಜಯ್ಕುಮಾರ್, ಪಟ್ಟಣ ರಾಕೇಶ್, ಸುಮಂಗಳಾ, ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಎಸ್.ವಿ.ನಾರಾಯಣ, ಆರ್.ಎಚ್.ರಾಘವೇಂದ್ರ, ಜಿ.ಕೆ.ರೂಪಾ, ಟಿ.ಎಚ್.ಆಶಾರಾಣಿ, ಬಿ.ಪಾಂಡುರಂಗ, ಎಸ್.ಸುಮಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.