ಶಿವಮೊಗ್ಗ: ವಸತಿ ಯೋಜನೆಯಲ್ಲಿ ಮುಸ್ಲಿಮರಿಗೆ ಶೇ 15ರಷ್ಟು ಮೀಸಲಾತಿ ಕಲ್ಪಿಸುವುದು ಖಂಡನೀಯ. ಇದರ ವಿರುದ್ಧ ರಾಜ್ಯದಾದ್ಯಂತ ಸಹಿ ಸಂಗ್ರಹ ಅಭಿಯಾನ ನಡೆಸಿ ರಾಜ್ಯಪಾಲರಿಗೆ ನೀಡಲಾಗುವುದು ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಹೇಳಿದರು.
ರಾಷ್ಟ್ರಭಕ್ತರ ಬಳಗವು ವಿವಿಧ ಹಿಂದೂ ಸಂಘಟನೆಗಳ ಸಹಯೋಗದೊಂದಿಗೆ ಇಲ್ಲಿನ ಶಿವಪ್ಪನಾಯಕ ವೃತ್ತದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ರಾಜ್ಯ ಸರ್ಕಾರದ ಈ ನಿರ್ಧಾರ ಜಾರಿಯಾಗಲು ಪ್ರಾಣ ಹೋದರೂ ಬಿಡುವುದಿಲ್ಲ. ಶೇ 15ರಷ್ಟು ಮೀಸಲಾತಿಗೆ ಯಾವ ಬೆಲೆಯೂ ಇಲ್ಲ. ಇದು ಕೇವಲ ಮುಸ್ಲಿಂ ಓಲೈಕೆಗಾಗಿ ನಡೆಸಿದ ಪಿತೂರಿ. ಕಳೆದ ವರ್ಷ ಮುಸ್ಲಿಮರಿಗೆ ₹900 ಕೋಟಿ ಅನುದಾನ ನೀಡಲಾಗಿತ್ತು. ಈ ಬಾರಿ ₹1,300 ಕೋಟಿ ಅನುದಾನ ನೀಡಲಾಗಿದೆ. ಇದು ಖಂಡನೀಯ ಎಂದರು.
ಮುಸ್ಲಿಮರ ಓಲೈಕೆಯ ಕಾರಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ವಸತಿ ಸಚಿವ ಜಮೀರ್ ಅಹಮದ್ ಖಾನ್ ಈ ಮೂವರನ್ನು ಜೈಲಿಗೆ ಕಳುಹಿಸಬೇಕು. ಮಂಗಳೂರಿನಲ್ಲಿ ಕೇವಲ ಒಬ್ಬ ಮುಸ್ಲಿಂ ವ್ಯಕ್ತಿ ಹತ್ಯೆಯಾಗಿದ್ದಕ್ಕೆ ಇಡೀ ಕಾಂಗ್ರೆಸ್ ಪಟಾಲಂ ಮಂಗಳೂರಿಗೆ ದೌಡಾಯಿಸಿತ್ತು. ಆದರೆ ರಾಜ್ಯದಲ್ಲಿ ಅದಕ್ಕೂ ಮೊದಲು 15 ಹಿಂದೂಗಳ ಕೊಲೆಯಾದಾಗ ಎಲ್ಲಿ ಹೋಗಿದ್ದರು ಎಂದು ಕಿಡಿಕಾರಿದರು.
ಪ್ರಮುಖರಾದ ಕೆ.ಈ. ಕಾಂತೇಶ್, ಇ. ವಿಶ್ವಾಸ್, ಶೇಷಾಚಲ, ರಮೇಶ್ ಬಾಬು, ಸುವರ್ಣಾ ಶಂಕರ್, ಮೋಹನ್ ಜಾದವ್, ಮಹಾಲಿಂಗಯ್ಯ ಶಾಸ್ತ್ರಿ, ವಾಸುದೇವ ಮೊದಲಾದವರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.