ADVERTISEMENT

ವರ್ಷದಲ್ಲಿ ಸ್ಮಾರ್ಟ್‌ ಸಿಟಿ ಕಾಮಗಾರಿ ಪೂರ್ಣ: ಚಿದಾನಂದ ವಟಾರೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2022, 2:33 IST
Last Updated 2 ಏಪ್ರಿಲ್ 2022, 2:33 IST
ಚಿದಾನಂದ ವಟಾರೆ
ಚಿದಾನಂದ ವಟಾರೆ   

ಶಿವಮೊಗ್ಗ: ಮುಂದಿನ ಮಾರ್ಚ್ ಒಳಗೆಶಿವಮೊಗ್ಗ ಸ್ಮಾರ್ಟ್‌ ಸಿಟಿಯ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ಸ್ಮಾರ್ಟ್‌ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ವಟಾರೆ ತಿಳಿಸಿದರು.

ಸರ್ಕಾರ ಸ್ಮಾರ್ಟ್‌ ಸಿಟಿ ಯೋಜನೆ ಅವಧಿಯನ್ನು ಮುಂದಿನ ಜೂನ್‌ವರೆಗೆ ವಿಸ್ತರಿಸಿದೆ. ಆದರೆ, ಶಿವಮೊಗ್ಗ ಸ್ಮಾರ್ಟ್‌ ಸಿಟಿ ಕಾಮಗಾರಿಗಳು ಬಹುತೇಕ ಈ ವರ್ಷದ ಅಂತ್ಯದ ಒಳಗೆ ಪೂರ್ಣಗೊಳ್ಳಲಿವೆ. ಒಂದೆರಡು ಕಾಮಗಾರಿಗಳು ಮಾತ್ರ ಮುಂದಿನ ವರ್ಷ ಪೂರ್ಣಗೊಳ್ಳಲಿದೆ. ಸರ್ಕಾರ ಇದುವರೆಗೆ ₹ 758 ಕೋಟಿ ಬಿಡುಗಡೆ ಮಾಡಿದ್ದು, ₹ 541 ಕೋಟಿ ವೆಚ್ಚವಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಶಿವಮೊಗ್ಗಕ್ಕೆ 2ನೇ ಸ್ಥಾನ: ದೇಶದಲ್ಲಿ ಸ್ಮಾರ್ಟ್‌ ಸಿಟಿ ಕಾಮಗಾರಿ ಕೈಗೊಂಡಿರುವುದರಲ್ಲಿ ಶಿವಮೊಗ್ಗ 19ನೇ ಸ್ಥಾನದಲ್ಲಿದ್ದು, ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. ಒಟ್ಟು ₹ 997 ಕೋಟಿ ಅಂದಾಜಿನಲ್ಲಿ 60 ಕಾಮಗಾರಿ ಕೈಗೊಳ್ಳಲಾಗಿದ್ದು, 31 ಕಾಮಗಾರಿಗಳು ಪೂರ್ಣಗೊಂಡಿವೆ. 29 ಕಾಮಗಾರಿಗಳು ಪ್ರಗತಿಯ ವಿವಿಧ ಹಂತದಲ್ಲಿವೆ. ಶೇ 67ರಷ್ಟು ಭೌತಿಕ ಹಾಗೂ ಶೇ 54ರಷ್ಟು ಆರ್ಥಿಕ ಪ್ರಗತಿಯನ್ನು ಸಾಧಿಸಲಾಗಿದೆ. ₹ 505 ಕೋಟಿ ಅಂದಾಜು ಮೊತ್ತದಲ್ಲಿ 110 ಕಿ.ಮೀ. ರಸ್ತೆ ಅಭಿವೃದ್ಧಿ, ₹ 20 ಕೋಟಿ ವೆಚ್ಚದಲ್ಲಿ 113 ಕನ್ಸರ್‌ವೆನ್ಸಿಗಳ ಅಭಿವೃದ್ಧಿ, ₹ 144 ಕೋಟಿ ವೆಚ್ಚದಲ್ಲಿ ಹಸಿರೀಕರಣ ಮತ್ತು ಪಾರ್ಕ್‌ಗಳ ಅಭಿವೃದ್ಧಿ, ₹ 57 ಕೋಟಿ ವೆಚ್ಚದಲ್ಲಿ ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳು, ₹ 17 ಕೋಟಿ ವೆಚ್ಚದಲ್ಲಿ ನಗರದ ಮೂರು ಪಾರಂಪರಿಕ ಕಟ್ಟಡಗಳ ಅಭಿವೃದ್ಧಿ, ₹ 89 ಕೋಟಿ ವೆಚ್ಚದಲ್ಲಿ ವಾಹನ ಪಾರ್ಕಿಂಗ್, ಹಾಕರ್ಸ್ ಜೋನ್, ಖಾಸಗಿ ಬಸ್ ನಿಲ್ದಾಣ ನವೀಕರಣ ಇತ್ಯಾದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ವಿವರಿಸಿದರು.

ADVERTISEMENT

ಸಾರ್ವಜನಿಕರ ಅಹವಾಲು ಮತ್ತು ಕುಂದುಕೊರತೆ ನಿವಾರಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ದೂರವಾಣಿ, ಇಮೇಲ್, ವಾಟ್ಸ್‌ಆ್ಯಪ್ ಸೇರಿ ಎಲ್ಲಾ ಮೂಲಗಳಿಂದ ಬರುವ ಅಹವಾಲುಗಳನ್ನು ಪರಿಹರಿಸಲಾಗುತ್ತಿದೆ. ಕನ್ಸರ್‌ವೆನ್ಸಿಗಳನ್ನು ಶೀಘ್ರ ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಗುವುದು. ಕುವೆಂಪು ರಸ್ತೆ ಕಾಮಗಾರಿಗಳು ಈ ತಿಂಗಳ ಅಂತ್ಯದೊಳಗೆ ಪೂರ್ಣಗೊಳ್ಳಲಿವೆ. ನಗರದಾದ್ಯಂತ 16 ಸಾವಿರ ಎಲ್‌ಇಡಿ ರಸ್ತೆ ಬದಿ ದೀಪಗಳನ್ನು ಅಳವಡಿಸಲಾಗುತ್ತಿದೆ. 13 ಕಡೆಗಳಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.