ADVERTISEMENT

ಸಾರ್ವಜನಿಕ ಪ್ರಜ್ಞೆ ಜಾಗೃತಗೊಳಿಸಿದ ಸಾಹಿತಿ

ಡಿ.ಎಸ್. ನಾಗಭೂಷಣ್‌ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಶಿವಾನಂದ ಕುಗ್ವೆ ಅನಿಸಿಕೆ

​ಪ್ರಜಾವಾಣಿ ವಾರ್ತೆ
Published 22 ಮೇ 2022, 2:53 IST
Last Updated 22 ಮೇ 2022, 2:53 IST
ಸಾಗರದಲ್ಲಿ ಸ್ಪಂದನ ರಂಗ ತಂಡ ಅಗಲಿದ ಸಾಹಿತಿ, ಸಮಾಜವಾದಿ ಚಿಂತಕ ಡಿ.ಎಸ್.ನಾಗಭೂಷಣ ಅವರಿಗೆ ಶನಿವಾರ ಏರ್ಪಡಿಸಿದ್ದ ನುಡಿ-ನಮನ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.
ಸಾಗರದಲ್ಲಿ ಸ್ಪಂದನ ರಂಗ ತಂಡ ಅಗಲಿದ ಸಾಹಿತಿ, ಸಮಾಜವಾದಿ ಚಿಂತಕ ಡಿ.ಎಸ್.ನಾಗಭೂಷಣ ಅವರಿಗೆ ಶನಿವಾರ ಏರ್ಪಡಿಸಿದ್ದ ನುಡಿ-ನಮನ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.   

ಸಾಗರ: ‘ಲೋಹಿಯಾರ ಚಿಂತನೆಯ ಜೊತೆಗೆ ಪ್ರಖರ ಗಾಂಧಿವಾದಿಯಾಗಿದ್ದ ಡಿ.ಎಸ್. ನಾಗಭೂಷಣ್‌ ಸಾರ್ವಜನಿಕ ಪ್ರಜ್ಞೆಯನ್ನು ಜಾಗೃತಗೊಳಿಸಿದ ನಮ್ಮ ನಡುವಿನ ಪ್ರಮುಖ ಲೇಖಕರಲ್ಲಿ ಒಬ್ಬರಾಗಿದ್ದಾರೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ ಹೇಳಿದರು.

ಇಲ್ಲಿನ ಎಸ್.ಎನ್. ನಗರ ಬಡಾವಣೆಯ ಭೂಮಿ ರಂಗಮನೆಯಲ್ಲಿ ಸ್ಪಂದನ ರಂಗ ತಂಡ ಅಗಲಿದ ಸಾಹಿತಿ, ಸಮಾಜವಾದಿ ಚಿಂತಕ ಡಿ.ಎಸ್. ನಾಗಭೂಷಣ್‌ ಅವರಿಗೆ ಶನಿವಾರ ಏರ್ಪಡಿಸಿದ್ದ ನುಡಿ-ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಮ್ಮ ಬದುಕಿನಲ್ಲಿ ಸರಳತೆಯನ್ನು ಮೈಗೂಡಿಸಿಕೊಂಡಿದ್ದ ಡಿ.ಎಸ್.ಎನ್. ನುಡಿದಂತೆ ನಡೆದವರು. ಈ ಮೂಲಕ ನೈತಿಕ ಪ್ರಜ್ಞೆಯ ಎಚ್ಚರವನ್ನು ಎಲ್ಲರಲ್ಲಿ ಜಾಗೃತಗೊಳಿಸಿದ್ದಾರೆ. ಈ ಕಾರಣಕ್ಕೆ ಅವರ ಸಮಾಜಮುಖಿ ಚಿಂತನೆ ಹೆಚ್ಚು ಮಹತ್ವ ಪಡೆಯುತ್ತದೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ಲೋಹಿಯಾ ಜನ್ಮಶತಾಬ್ಧಿ ಪ್ರತಿಷ್ಠಾನದ ಎನ್.ಎಂ. ಕುಲಕರ್ಣಿ, ‘ತಮ್ಮ ಕ್ರಿಯಾಶೀಲತೆಯ ಮೂಲಕ ಸಮಾಜದ ಬಿಕ್ಕಟ್ಟುಗಳಿಗೆ ಮುಖಾಮುಖಿ ಆಗುತ್ತಿದ್ದ ನಾಗಭೂಷಣ್‌ ಅವರ ಮಾದರಿ ಅತ್ಯಂತ ವಿಶಿಷ್ಟವಾದುದು. ‘ಗಾಂಧಿ ಕಥನ’ ಕೃತಿಯ ಮೂಲಕ ಅವರು ಸಮಾಜಕ್ಕೆ ನೀಡಿರುವ ಕೊಡುಗೆ ವಿಶೇಷವಾದುದು’ ಎಂದು ಹೇಳಿದರು.

ಪತ್ರಕರ್ತ ಕೆ.ಎನ್. ವೆಂಕಟಗಿರಿ, ‘ಜಾಗತೀಕರಣಕ್ಕೆ ಮುಖಾಮುಖಿಯಾಗುವ ಹೊಸ ಪರ್ಯಾಯ ಮಾದರಿಗಳನ್ನು ನಮ್ಮೆದುರು ತೆರೆದಿಡುವ ಬಗ್ಗೆ ನಾಗಭೂಷಣ್‌ ಅವರು ಗಂಭೀರವಾಗಿ ಚಿಂತಿಸಿದ್ದರು. ಹೊಸ ತಲೆಮಾರನ್ನು ಆರೋಗ್ಯಪೂರ್ಣ ಸಂವಾದಕ್ಕೆ ಒಳಪಡಿಸುವ ಬದ್ಧತೆ ಅವರಲ್ಲಿ ನಿಚ್ಚಳವಾಗಿತ್ತು’ ಎಂದರು.

ಲೇಖಕ ಡಾ.ಸರ್ಫ್ರಾಜ್ ಚಂದ್ರಗುತ್ತಿ, ‘ವರ್ತಮಾನದ ಬಿಕ್ಕಟ್ಟುಗಳಿಗೆ ಲೋಹಿಯಾ, ಗಾಂಧಿ, ಅಂಬೇಡ್ಕರ್, ಕುವೆಂಪು ಅವರ ಚಿಂತನೆಗಳನ್ನು ಒಗ್ಗೂಡಿಸಿ ತಮ್ಮದೇ ಆದ ಪರಿಭಾಷೆಯಲ್ಲಿ ಪ್ರತಿಕ್ರಿಯಿಸುವ ಮೂಲಕ ವೈಚಾರಿಕ ವಲಯಕ್ಕೆ ಹೊಸ ಭರವಸೆ ಮೂಡಿಸಿದ್ದರು’ ಎಂದು ಹೇಳಿದರು. ಪತ್ರಕರ್ತ ಶೃಂಗೇಶ್, ದಲಿತ ಸಂಘರ್ಷ ಸಮಿತಿಯ ಪರಮೇಶ್ವರ ದೂಗೂರು, ನಗರಸಭೆ ಮಾಜಿ ಅಧ್ಯಕ್ಷ ತೀ.ನ. ಶ್ರೀನಿವಾಸ್, ರಂಗ ನಟಿ ಎಂ.ವಿ. ಪ್ರತಿಭಾ ಮಾತನಾಡಿದರು.

ವಿವಿಧ ಸಂಘಟನೆಗಳ ಪ್ರಮುಖರಾದ ದಿನೇಶ್ ಶಿರವಾಳ, ಹೊಯ್ಸಳ ಗಣಪತಿಯಪ್ಪ, ಕಬಸೆ ಅಶೋಕ ಮೂರ್ತಿ, ಮಹಮದ್‌ ಖಾಸಿಂ, ಯೇಸು ಪ್ರಕಾಶ್, ಎಸ್.ಎಂ. ಗಣಪತಿ, ಶೈಲೇಂದ್ರ ಬಂದಗದ್ದೆ, ಎನ್.ಡಿ. ವಸಂತಕುಮಾರ್, ವಿ. ಶಂಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.