ADVERTISEMENT

ರಾಜ್ಯ ಸರ್ಕಾರದಿಂದ ಮರುಜಾತಿಗಣತಿ ಔಚಿತ್ಯವೇನು?: ವಾದಿರಾಜ್

ಕೇಂದ್ರದಿಂದ ಜಾತಿಗಣತಿಗೆ ಸಿದ್ಧತೆ: ಆರ್‌ಎಸ್‌ಎಸ್ ಸಾಮರಸ್ಯ ವೇದಿಕೆಯ ವಾದಿರಾಜ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 5:23 IST
Last Updated 8 ಜುಲೈ 2025, 5:23 IST
ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ವಾದಿರಾಜ್ ಮಾತನಾಡಿದರು
ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ವಾದಿರಾಜ್ ಮಾತನಾಡಿದರು   

ಶಿವಮೊಗ್ಗ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾತಿಗಣತಿ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆಯೇ ಹೊರತು ರಾಜ್ಯ ಸರ್ಕಾರಕ್ಕಲ್ಲ. ಇನ್ನಾದರೂ ರಾಜ್ಯ ಸರ್ಕಾರ ಈ ವಿಚಾರದಲ್ಲಿ ಕೇಂದ್ರದ ಜೊತೆ ಕೈಜೋಡಿಸಿ ಎಲ್ಲ ಗೊಂದಲಗಳಿಗೂ ಪೂರ್ಣವಿರಾಮ ಹಾಕಲಿ ಎಂದು ಆರ್‌ಎಸ್‌ಎಸ್‌ನ ಸಾಮರಸ್ಯ ವೇದಿಕೆಯ ಸಂಚಾಲಕ ವಾದಿರಾಜ್ ಒತ್ತಾಯಿಸಿದರು. 

ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆಯು ಸೋಮವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜನಗಣತಿಯ ಜೊತೆಗೆ ಈಗ ಜಾತಿಗಣತಿಗೂ ಮುಂದಾಗಿದೆ. ಅದಕ್ಕಾಗಿ ₹13 ಸಾವಿರ ಕೋಟಿ ತೆಗೆದಿರಿಸಿದೆ. ಆದರೆ, ಕೇಂದ್ರದಿಂದ ಜಾತಿಗಣತಿಯ ಘೋಷಣೆ ಹೊರಬಿದ್ದ ನಂತರ ರಾಜ್ಯ ಸರ್ಕಾರ ಪುನಃ ಜಾತಿ ಗಣತಿಗೆ ಮುಂದಾಗಿದೆ. ಇದು ಎಷ್ಟರಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು. 

ಕಳೆದ 25 ವರ್ಷಗಳಿಂದೀಚೆಗೆ ಬೇರೆ ಬೇರೆ ಕಾರಣಗಳಿಗೆ ಜನರು ಸ್ಥಳದಿಂದ ಸ್ಥಳಕ್ಕೆ ವಲಸೆ ಹೋಗುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಬಹಳಷ್ಟು ಸ್ಥಿತ್ಯಂತರ ಉಂಟಾಗಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿರುವ ಕೇಂದ್ರ ಸರ್ಕಾರ 32 ರೀತಿಯ ಮಾನದಂಡಗಳನ್ನು ಮುಂದಿಟ್ಟುಕೊಂಡು ಜಾತಿಗಣತಿಗೆ ಹೊರಟಿದೆ. ಇದರಲ್ಲಿ ಪ್ರತಿಯೊಬ್ಬರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ವಿವರಗಳು ಒಳಗೊಂಡಿರುತ್ತವೆ ಎಂದು ಹೇಳಿದರು. 

ADVERTISEMENT

2013ರಲ್ಲಿ ಸಿದ್ದರಾಮಯ್ಯ ರಾಜ್ಯದಲ್ಲಿ ಜಾತಿಗಣತಿ ನಡೆಸಲು ಮುಂದಾದರು. ಮುಂದೆ ಕಾಂತರಾಜ ಆಯೋಗ ಹಾಗೂ ಜಯಪ್ರಕಾಶ್ ಹೆಗ್ಡೆ ಆಯೋಗಗಳು ವರದಿ ಸಲ್ಲಿಸಿದರೂ, ಅದನ್ನು ಅನುಷ್ಠಾನ ಮಾಡುವ ಗೋಜಿಗೆ ಹೋಗಲಿಲ್ಲ. ಇದಕ್ಕಾಗಿ ಜನರ ತೆರಿಗೆಯ ಹಣ ₹165 ಕೋಟಿ ವ್ಯರ್ಥವಾಯಿತು ಎಂದು ಬೇಸರ ವ್ಯಕ್ತಪಡಿಸಿದರು.  

ರಾಜ್ಯ ಸರ್ಕಾರ ಮರು ಜಾತಿಗಣತಿಗೆ ಈಗಲೂ ಯಾವುದೇ ಪೂರ್ವಸಿದ್ಧತೆ ಮಾಡಿಕೊಂಡಿಲ್ಲ. ನಂತರ ಏಕಾಏಕಿ ಶಿಕ್ಷಕರ ಮೇಲೆ ಇನ್ನಿಲ್ಲದ ಹೊರೆ ಹಾಕಲಿದೆ ಎಂದರು. 

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಬಿಜೆಪಿ ಆಡಳಿತಾವಧಿಯಲ್ಲಿ ಕೊಟ್ಟ ಸಾಮಾಜಿಕ ನ್ಯಾಯ ಜನಮಾನಸದಲ್ಲಿ ಉಳಿದುಕೊಂಡಿದೆ. ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗದವರನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು. 

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಹರತಾಳು ಹಾಲಪ್ಪ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಾ. ಧನಂಜಯ ಸರ್ಜಿ, ಪ್ರಮುಖರಾದ ಆರ್.ಕೆ. ಸಿದ್ಧರಾಮಣ್ಣ, ಶಿವಾನಂದ ನಾಯ್ಕ, ವಿ. ರಾಜು, ಸಿ.ಎಚ್. ಮಾಲತೇಶ್, ಈಶ್ವರ ಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.