ಶಿವಮೊಗ್ಗ: ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲೆಯಲ್ಲೂ ಅಸಂಘಟಿತ ಕಾರ್ಮಿಕರನ್ನು ಗುರುತಿಸುವ ಕೆಲಸ ನಡೆದಿದೆ. ಸೌಲಭ್ಯಗಳಿಗಾಗಿ ಕಾರ್ಮಿಕ ಕಾರ್ಡ್ ವಿತರಿಸಲಾಗುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.
ಹಮಾಲಿಗಳು, ಟೈಲರ್, ಚಿಂದಿ ಆಯುವವರು, ಮೆಕ್ಯಾನಿಕ್ಗಳು, ಮನೆ ಕೆಲಸದವರು, ಅಗಸರು, ಕುಂಬಾರರು, ಕಮ್ಮಾರರು, ಕ್ಷೌರಿಕರು, ಬಟ್ಟಿ ಕಾರ್ಮಿಕರು ಸೇರಿ ಹಲವು ಬಗೆಯ ಕಾರ್ಮಿಕರನ್ನು ಗುರುತಿಸಲಾಗುತ್ತಿದೆ. ಕಾರ್ಮಿಕ ಇಲಾಖೆಯಲ್ಲಿ ಹೆಸರು ನೋಂದಾಯಿಸಿ, ಗುರುತಿನ ಚೀಟಿ ನೀಡಲಾಗುತ್ತದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸ, ವಿದ್ಯಾರ್ಥಿವೇತನ, ಉಚಿತ ವಿಮಾ ಸೌಲಭ್ಯ ಸೇರಿ ಹಲವು ಸೇವೆಗಳನ್ನು ಪಡೆಯಬಹುದು. ಶೋಷಣೆಗೆ ಒಳಗಾದವರ ಸಹಾಯಕ್ಕಾಗಿ ಈ ಸಂಘ ಸ್ಥಾಪನೆಯಾಗಿದೆ. ವಿಶೇಷವಾಗಿ ಮಹಿಳೆಯರು ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಸ್ವಾಗತಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ 32 ಕಾರ್ಮಿಕ ಮಂಡಳಿಗಳ ರಚನೆ ಮಾಡಿದೆ. ಅದಕ್ಕಾಗಿ ಮುಖ್ಯಮಂತ್ರಿ ಹಾಗೂ ಕಾರ್ಮಿಕ ಸಚಿವರನ್ನು ಅಭಿನಂದಿಸಲಾಗುವುದು ಎಂದರು.
ಕೆಲವು ಅಸಂಘಟಿತ ಕಾರ್ಮಿಕರಿಗೆ ಸಾಂಕೇತಿಕವಾಗಿ ಗುರುತಿನ ಪತ್ರ ವಿತರಿಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಅಧ್ಯಕ್ಷ ಕುಪೇಂದ್ರ, ಪ್ರಧಾನ ಕಾರ್ಯದರ್ಶಿ ಮೇಘಮೋಹನ್ ಶೆಟ್ಟಿ, ಪುಷ್ಪ ವಿಶ್ವನಾಥ್, ಬಸವರಾಜ್, ಪ್ರದೀಪ್, ಮಂಜುನಾಥ್, ವಿಜಯಲಕ್ಷ್ಮಿ, ಸುರೇಖಾ, ಸಂದ್ಯಾ, ಗೌರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.