ADVERTISEMENT

ಧನಾತ್ಮಕ ಮನೋಭಾವದಿಂದ ಕ್ರೀಡೆ ಗೆಲ್ಲಿ: ಮಲ್ಲಿಕಾರ್ಜುನ ತೊದಲಬಾಗಿ

ಬೆಂಗಳೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ: ಮಲ್ಲಿಕಾರ್ಜುನ ತೊದಲಬಾಗಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 3:04 IST
Last Updated 20 ಸೆಪ್ಟೆಂಬರ್ 2022, 3:04 IST
ಶಿವಮೊಗ್ಗದಲ್ಲಿ ಸೋಮವಾರ ದಸರಾ ವಿಭಾಗಮಟ್ಟದ ದಸರಾ ಕ್ರೀಡಾಕೂಟವನ್ನು ಮಲ್ಲಿಕಾರ್ಜುನ ತೊದಲಬಾಗಿ ಉದ್ಘಾಟಿಸಿದರು
ಶಿವಮೊಗ್ಗದಲ್ಲಿ ಸೋಮವಾರ ದಸರಾ ವಿಭಾಗಮಟ್ಟದ ದಸರಾ ಕ್ರೀಡಾಕೂಟವನ್ನು ಮಲ್ಲಿಕಾರ್ಜುನ ತೊದಲಬಾಗಿ ಉದ್ಘಾಟಿಸಿದರು   

ಶಿವಮೊಗ್ಗ: ಧನಾತ್ಮಕ ಮನೋಭಾವ ಮತ್ತು ಆತ್ಮವಿಶ್ವಾಸ ಯಾವುದೇ ಕ್ರೀಡೆಗಳನ್ನು ಗೆಲ್ಲಲು ಸಹಕರಿಸುತ್ತವೆ. ಈ ನಿಟ್ಟಿನಲ್ಲಿ ಎಲ್ಲ ಕ್ರೀಡಾಪಟುಗಳು ತಮ್ಮ ಗುರಿಯತ್ತ ಗಮನ ಹರಿಸಿ ಮುನ್ನಡೆಯಬೇಕೆಂದು ಜಿಲ್ಲಾ ಪಂಚಾಯ್ತಿ ಸಹಾಯಕ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ತಿಳಿಸಿದರು.

ಜಿಲ್ಲಾಡಳಿತದಿಂದ ನೆಹರೂ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಾಲಿನ ಬೆಂಗಳೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಕ್ರೀಡಾಪಟು ಧನಾತ್ಮಕ ಮನೋಭಾವ ಹೊಂದುವುದು ಅತಿ ಮುಖ್ಯ. ಜೊತೆಗೆ ಆತ್ಮವಿಶ್ವಾಸ ಇರಬೇಕು. ಇವೆರಡರೊಂದಿಗೆ ಗುರಿ ಸಾಧನೆಯೆಡೆಗೆ ಗಮನ ಹರಿಸಿ ಗೆಲುವು ತಮ್ಮದಾಗಿಸಿಕೊಳ್ಳಬಹುದು ಎಂದ ಅವರು, ನೋಬಲ್ ಪ್ರಶಸ್ತಿ ವಿಜೇತ ಥಾಮಸ್ ಆಲ್ವಾ ಎಡಿಸನ್ ಅವರ ತಾಯಿ ಹೇಗೆ ತನ್ನ ಮಗನಲ್ಲಿ ಧನಾತ್ಮಕ ಮನೋಭಾವ ಮೂಡಿಸಿ, ಜೀವನದಲ್ಲಿ ಮುನ್ನಡೆಯುವಂತೆ ಮಾಡಿದಳು ಎಂಬ ಉದಾಹರಣೆಯೊಂದಿಗೆ ಕ್ರೀಡಾಪಟುಗಳನ್ನು ಹುರಿದುಂಬಿಸಿದರು.

ADVERTISEMENT

ವಾಲಿಬಾಲ್ ಅಸೋಸಿಯೇಷನ್‍ನ ಕಾರ್ಯಾಧ್ಯಕ್ಷ ಕಾಂತೇಶ್.ಕೆ.ಇ ಮಾತನಾಡಿ, ‘ಕ್ರೀಡೆ ಕೇವಲ ಆಟವೆಂದುಕೊಳ್ಳದೆ, ಸವಾಲೆಂದು ಸ್ವೀಕರಿಸಿ ಕ್ರೀಡಾ ಮನೋಭಾವದಿಂದ ಆಟವಾಡಬೇಕು. ಜೀವನದಲ್ಲಿ ಒಳ್ಳೆಯ ಮತ್ತು ಕೆಟ್ಟ ಪರಿಸ್ಥಿತಿಗಳು ಎದುರಾಗುತ್ತವೆ. ಒಳ್ಳೆಯದು ಸ್ವೀಕರಿಸಿ, ಹೆತ್ತ ತಂದೆ-ತಾಯಿಗಳೊಟ್ಟಿಗಿದ್ದು ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದರು.

ವಿಭಾಗ ಮಟ್ಟದ ಈ ಕ್ರೀಡಾಕೂಟದಲ್ಲಿ ಸೆ. 19 ಮತ್ತು 20ರಂದು ಬೆಂಗಳೂರು ವಿಭಾಗ ಮಟ್ಟದ ಶಿವಮೊಗ್ಗ, ದಾವಣಗೆರೆ, ಚಿಕ್ಕಬಳ್ಳಾಪುರ, ರಾಮನಗರ, ತಮಕೂರು ಸೇರಿದಂತೆ 8 ಜಿಲ್ಲೆಗಳ ಕ್ರೀಡಾಪಟುಗಳಿಗೆ ಅಥ್ಲೆಟಿಕ್ಸ್, ವಾಲಿಬಾಲ್, ಬಾಸ್ಕೆಟ್‍ಬಾಲ್, ಷಟಲ್ ಬ್ಯಾಡ್ಮಿಂಟನ್, ಟೆನ್ನಿಸ್ ಮತ್ತು ಈಜು ಸ್ಪರ್ಧೆ ನಡೆಯಲಿವೆ.

ವೇದಿಕೆಯಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ನಿರ್ದೇಶಕ ನಾಗರಾಜ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ, ಒಲಿಂಪಿಕ್‌ ಅಸೋಸಿಯೇಷನ್‍ ಕಾರ್ಯದರ್ಶಿ ಶಶಿ, ಅಂತರರಾಷ್ಟ್ರೀಯ ಅಥ್ಲೆಟಿಕ್ಸ್ ತೀರ್ಪುಗಾರ ವಿಶ್ವನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.